ಗರುಡ ಹಾರಿದ ಹಾದಿ :ಭಾಗ-1

 

    ಇಲ್ಲಿ ಹೇಳಲು ಹೊರಟಿರುವ ಕಥೆ ಸಾಮಾನ್ಯನಾಗಿ ಹುಟ್ಟಿ ಅಸಾಮಾನ್ಯನಾಗಿ ಬೆಳೆದ ಒಬ್ಬ ಸಾಧಕನದ್ದು. 'ಸಾಧಕ' ಅಂದಾಕ್ಷಣ, ಸಿನಿಮಾ, ಕ್ರಿಕೆಟ್ ತಾರೆಯರ ಬಗೆಗೋ ಅಥವಾ ಯಾರಾದರೂ ಬಿಸ್ನೆಸ್ ಮ್ಯಾನ್‌ಗಳ ಹೆಸರೋ, ರಾಜಕಾರಣಿಗಳ ಹೆಸರೋ ತಕ್ಷಣಕ್ಕೆ ನೆನಪಾಗುವುದು ಸಹಜ, ಆದರೆ ಇಲ್ಲಿರುವುದು "ಸೆಲೆಬ್ರೆಟಿ" ಅಂತ ಹಣೆಪಟ್ಟಿ ಕಟ್ಟಿಕೊಳ್ಳದ ಒಬ್ಬ ಸಾಧಕನ ಕಥೆ. ಈಗಾಗಲೇ 'ಅಸಾಮಾನ್ಯ' ಅಂತ ಹೇಳಿದೆ, ಸ್ಪೈಡರ್‌ಮ್ಯಾನ್, ಸೂಪರ್‌ಮ್ಯಾನ್ ಗಳ ಕಥೆಯನ್ನು ನೋಡುವಾಗ ಅಸಾಮಾನ್ಯ ಎಂದು ಅನಿಸುತ್ತದೆ, ಅಥವಾ ಇನ್ನಿತರ ಆಕ್ಷನ್ ಸಿನಿಮಾಗಳನ್ನು ನೋಡುವಾಗ ನಮಗೆ ಅವರೆಲ್ಲಾ ಅಸಾಮಾನ್ಯರು ಅಂತನ್ನಿಸುವುದು ಸತ್ಯ.  ಅದೇ ರೀತಿ, ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಾ, ತನ್ನ ರೆಕ್ಕೆಗಳನ್ನು ಇನ್ನಿಲ್ಲದ ವೇಗಗಳಲ್ಲಿ ತಿರುಗಿಸುತ್ತಾ, ಭೂಮಿಯಿಂದ ಒಂದಷ್ಟು ಅಡಿ ಎತ್ತರದಲ್ಲಿ ನಿಂತಿರುವ ಹೆಲಿಕಾಪ್ಟರಿನಿಂದ ಇಳಿಯಬಿಟ್ಟ ರೋಪ್‌ನಲ್ಲಿ  ಕೆಳಗಿಳಿಯುವುದು, ಯಾವ್ಯಾವುದೋ ಗುರುತು ಪರಿಚಯ ಇಲ್ಲದ, ಹೆಸರಿಲ್ಲದ ಪರ್ವತಗಳನ್ನು ಹತ್ತುವುದು, ಅದೂ ಕೂಡ ಬೆನ್ನ ಮೇಲೆ ಕಿಲೋ ಗಟ್ಟಲೆ ಭಾರದ ಬ್ಯಾಗ್‌ಗಳನ್ನು ಹೇರಿಕೊಂಡು! ಗೋಡೆಗಳ ಮೇಲೆ ಜೇಡನಂತೆ ಹತ್ತುವುದು, ಮೈ ಕೈಗಳಲ್ಲಿ ರಕ್ತ ಸುರಿದರೂ ಅಯ್ಯೋ ಅಮ್ಮಾ ಅನ್ನದೆ ಮತ್ತೆ ಎದ್ದು ನಿಲ್ಲುವುದು.... ಹೀಗೆ ಹತ್ತು ಹಲವು ಕಠಿಣ ಟಾಸ್ಕ್‌ಗಳೊಂದಿಗೆ ಬದುಕುವುದು ಕೂಡಾ ಸಾಮಾನ್ಯ ಸಂಗತಿಯಲ್ಲ. ಯಾವುದಕ್ಕೂ ಜುಗಾಡ್ ಇಲ್ಲ, ಮಾಡಲೇ ಬೇಕು. ಇದು ಸಿನಿಮಾ ಅಥವಾ ಯಾವುದೋ ವೆಬ್ ಸೀರಿಸ್‌ಗಳ ಕಥೆಯಲ್ಲ, ಇದು ಡಮ್ಮಿ ಹೀರೋಗಳ ಕಥೆಯಲ್ಲ, ಅಸಲಿ ಹೀರೋಗಳ ನೈಜ ಕಥೆ. ಇದು ನಮ್ಮ 'ಗರುಡ್'‌ಗಳ ಕಥೆ, "not a spider, its an eagle"

    'ಗರುಡ್' ಅಂದ್ರೆ ಯಾರು? ಕರ್ನಾಟಕವನ್ನು ಆಳಿದ ರಾಜವಂಶಗಳಲ್ಲಿ ಹೊಯ್ಸಳ ರಾಜವಂಶವೂ ಒಂದು. ಈ ಹೊಯ್ಸಳರ ಕಾಲದಲ್ಲಿ 'ಗರುಡ' ಎಂಬ, ರಾಜನ ಅಂಗರಕ್ಷಕ ಪಡೆಯೊಂದು ಇರುತ್ತಿತ್ತು. ಇವರು ರಾಜನಿಗೆ ಅತ್ಯಂತ ನಿಷ್ಟಾವಂತರಾಗಿ ನಡೆದುಕೊಳ್ಳುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ, ಒಂದು ವೇಳೆ ರಾಜ ಯುದ್ಧದಲ್ಲಿ ಮರಣಿಸಿದರೆ ತಾವು ತಮ್ಮ ಜೀವವನ್ನೇ ಬಲಿದಾನ ಮಾಡುತ್ತಿದ್ದರು. ಈ 'ಗರುಡ' ಪಡೆಯ ಸೈನಿಕರು ಕಾಲಿಗೆ ಬಿದಿರಿನ ಪಟ್ಟಿಯನ್ನು ಅಥವಾ ಕಡಗವನ್ನು ಧರಿಸಿಕೊಳ್ಳುತ್ತಿದ್ದರು. ಆದರೆ ಈಗ ಹೇಳಲು ಹೊರಟಿರುವ 'ಗರುಡ್' ಬೇರೆ. ಇವರಿಗೂ ಹೊಯ್ಸಳರ ಗರುಡ' ಪಡೆಗೂ ಸಂಬಂಧವಿಲ್ಲ. ಆದರೆ ಒಂದು ಸಾಮ್ಯತೆ, ಗರುಡ ಪಡೆಯೂ ಸೈನ್ಯಕ್ಕೆ ಸಂಬಂಧಪಟ್ಟದ್ದು, ಈಗ ಹೇಳಹೊರಟಿರುವ 'ಗರುಡ್'‌ಗಳು ಕೂಡಾ ಭಾರತದ ಸೇನೆಗೆ ಸಂಬಂಧ ಪಟ್ಟವರು.

   ಭಾರತದ ಸೇನೆಯಲ್ಲಿ ಕೆಲವು ಸ್ಪೆಶಲ್ ಫೋರ್ಸ್‌ಗಳಿವೆ. ಇಂಡಿಯನ್ ಆರ್ಮಿಯಲ್ಲಿ, 'ಪ್ಯಾರಾ ಸ್ಪೆಷಲ್ ಕಮಾಂಡೋಸ್', ಇಂಡಿಯನ್ ನೇವಿಯಲ್ಲಿ 'ಮಾರ್ಕೋಸ್' (ಮ್ಯಾರೈನ್) ಕಮಾಂಡೋಸ್ ಹಾಗೂ ಏರ್ ಫೋರ್ಸ್‌ನಲ್ಲಿ 'ಗರುಡ್ ಕಮಾಂಡೋಸ್'. ಈ ಗರುಡ್ ಕಮಾಂಡೋ ಅನ್ನುವ ಸ್ಪೆಶಲ್ ಫೋರ್ಸ್‌ನ ಹುಟ್ಟೇ ರೋಚಕವಾಗಿದೆ. ೧೯೯೯ರಲ್ಲಿ ಭಾರತ ಕಾರ್ಗಿಲ್ ಯುದ್ಧ ನಡೆಯಿತು. ಈ ಸಂದರ್ಭದಲ್ಲಿ ಬಾರ್ಡರ್ ಏರಿಯಾಗಳಲ್ಲಿದ್ದ ಏರ್‌ಫೋರ್ಸ್‌ನ ಅಸೆಟ್‌ಗಳ ರಕ್ಷಣೆ ತುಂಬಾ ಕಷ್ಟವಾಗಿತ್ತು. ಆರ್ಮಿಯಲ್ಲಿ ಮ್ಯಾನ್ ಪವರ್ ಕಡಿಮೆ ಇತ್ತು, ಜೊತೆಗೆ ಆರ್ಮಿ ಕೂಡಾ ಯುದ್ಧದಲ್ಲಿ ಭಾಗವಹಿಸುತ್ತಿತ್ತು. ಹೀಗಾಗಿ "ನನ್ನಿಂದ ಇದರ ರಕ್ಷಣೆ ಕಷ್ಟ" ಎಂದಿತು. ಇದು ಏರ್‌ಫೋರ್ಸ್‌ಗೆ ತಲೆನೋವಾಗಿ ಪರಿಣಮಿಸಿತು. ಜೊತೆಗೆ ಇನ್ನೊಂದು ದೊಡ್ಡ ಸಮಸ್ಯೆ ಎದುರಾಯಿತು, ಅದೇನೆಂದರೆ ಏರ್ ಫೋರ್ಸ್‌ನ ಇಬ್ಬರು ಪೈಲೆಟ್‌ಗಳು, ಇಬ್ಬರು ಮಿಗ್ ಪೈಲೆಟ್‍ಗಳು ಅಜಯ್ ಅಹುಜಾ ಹಾಗೂ ನಚಿಕೇತ್ ಎಂಬವರ ಏರ್ ಕ್ರಾಫ್ಟ್ ಪಾಕಿಸ್ತಾನ ಏರಿಯಾದ ಲ್ಲಿ ಕ್ರ್ಯಾಶ್ ಆಗಿ ಈ ಪೈಲೆಟ್‌ಗಳಿಬ್ಬರು POW (prisoner of war) ಆಗಿ ಪಾಕಿಸ್ತಾನದವರ ಕೈಗೆ ಸಿಗುತ್ತಾರೆ. ಅಜಯ್ ಅಹುಜಾ ಪಾಕಿಸ್ತಾನದಲ್ಲಿ ಹುತಾತ್ಮರಾಗುತ್ತಾರೆ. ನಚಿಕೇತ್ ಅವರು ಕೆಲ ಸಮಯಗಳ ನಂತರ ಭಾರತಕ್ಕೆ ಮರಳುತ್ತಾರೆ. ಇಲ್ಲಿ "ನಚೀಕೇತ್ ಅವರು ಏರ್ ಕ್ರಾಫ್ಟ್ ಕ್ರ್ಯಾಶ್ ಆಗಿ ಬಿದ್ದಾಗ ಅವರನ್ನು ಕಾಪಾಡುವಷ್ಟು ಸಮಯ ಇತ್ತು, ಅವರನ್ನು ಕಾಪಾಡಬಹುದಾಗಿತ್ತು" ಅನ್ನುವ ಚಿಂತನೆ ಏರ್‌ಫೋರ್ಸ್‌ಗೆ ಬಂತು. ಇಂತಹ ಸಂದರ್ಭಗಳಲ್ಲಿ ಬೇರೆ ದೇಶದ ಬಾರ್ಡರ್ ಒಳಗಡೆ ನುಗ್ಗಿ, ಹೆಲಿಕಾಪ್ಟರ್ ಒಳ ನುಗ್ಗದ, ಅಥವ ಕೆಳಗಿಳಿಯಲಾರದ ಪ್ರದೇಶವಾಗಿದ್ದರೆ ಹೆಲಿಕಾಪ್ಟರ್‌ನಿಂದ ಇಳಿದು, ಅಲ್ಲಿ ಅಪಾಯದಲ್ಲಿರುವ ಪೈಲೆಟ್‌ನ್ನು ಪಿಕ್ ಮಾಡಿ, ವೀಚ್ ಮಾಡಿ, ಲಾಕ್ ಮಾಡಿ ಮತ್ತೆ ಹೆಲಿಕಾಪ್ಟರ್‌ಗೆ ಮರಳ ಬೇಕಾಗುತ್ತದೆ. ಒಂದು ವೇಳೆ ಅಲ್ಲಿ ಶತ್ರು ಸೈನಿಕರು ಇದ್ದರೆ, ಅವರೊಂದಿಗೆ ಹೋರಾಡಿ, ಕೌಂಟರ್ ಫೈರ್ ಮಾಡಿ ನಮ್ಮ ಪೈಲೆಟ್‌ಗಳನ್ನು ರಕ್ಷಿಸಬಲ್ಲ ಒಂದು ತಂಡ ಅಥವಾ ಒಂದು ಗ್ರೌಂಡ್ ಫೋರ್ಸ್ ಏರ್‍‌ಫೋರ್ಸ್‌ಗೆ ಬೇಕೇ ಬೇಕು ಎಂಬ ಉದ್ದೇಶದಿಂದ ಗರುಡ್ ಫೋರ್ಸ್ ಹುಟ್ಟಿಕೊಳ್ಳುತ್ತದೆ. ಗರುಡ್ ಡಿಫೆನ್ಸಿವ್ ಫೋರ್ಸ್ ಅಲ್ಲ ಒಫೆನ್ಸಿವ್ ಫೋರ್ಸ್. ಅಂದರೆ ಎದುರಾಳಿಯು ಧಾಳಿ ಮಾಡಿದರೆ ಮಾತ್ರ ತಾನು ಪ್ರತಿಧಾಳಿ ಮಾಡುತ್ತೇನೆ ಎಂಬ ನಿರ್ಧಾರ ಅಲ್ಲ, ಶತ್ರು ದೇಶಕ್ಕೆ ಅಥವಾ ಶತ್ರುಗಳ ವಿರುದ್ಧ ತಾನೇ ನುಗ್ಗಿ ಹೊಡೆಯುವ ಒಂದು ಫೋರ್ಸ್. ಇದು ಅಧಿಕೃತವಾಗಿ ೬ ಫೆಬ್ರುವರಿ ೨೦೦೪ರಂದು ಪ್ರಾರಂಭವಾಗುತ್ತದೆ. ೨೦೦೧ರಲ್ಲಿ ಸ್ಪೆಷಲ್ ಫೋರ್ಸ್ ಬೇಕೆಂಬ ಯೋಜನೆ ಏರ್‌ಫೋರ್ಸ್‌ನಲ್ಲಿ ಹುಟ್ಟಿಕೊಳ್ಳುತ್ತದೆ, ತದನಂತರ ವಾಲಿಂಟಿಯರ್ ಆಗಿ ಬಂದ ಕೆಲವು ಪಿ.ಜೆ.ಐಗಳನ್ನು (ಪ್ಯಾರ ಜಂಪ್ ಇಂಸ್ಟ್ರಕ್ಟರ್), ಕೆಲವು ಜಿಟಿಐ ಗಳನ್ನು ಸೇರಿಸಿಕೊಂಡು ಆರ್ಮಿಯಲ್ಲಿ ಅವರಿಗೆ ಕಮಾಂಡೋ ಟ್ರೈನಿಂಗ್ ಕೊಡಲಾಗುತ್ತದೆ. ಇವರು ಎನ್.ಎಸ್,ಜಿ ಯಲ್ಲಿ ಕಮಾಂಡೋ ಕೋರ್ಸ್, ಸಿ.ಆರ್.ಪಿ.ಎಫ್ ನಲ್ಲಿ ಕಮಾಂಡೋ ಕೋರ್ಸ್ ಸೇರಿದಂತೆ ಹಲವು ಕಡೆಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಪೂರೈಸುತ್ತಾರೆ. ಏರ್‌ಫೋರ್ಸ್ ನಲ್ಲಿ ಅದುವರೆಗೆ ಗ್ರೌಂಡ್ ಫೈಟಿಂಗ್‌ನ ಇತಿಹಾಸವೇ ಇರಲಿಲ್ಲ, ಕೇವಲ ಫೈಟರ್ ಪೈಲೆಟ್‌ಗಳು ಮಾತ್ರ ಯುದ್ಧದಲ್ಲಿ ಶತ್ರುಗಳ ಜೊತೆ ಮುಖಾಮುಖಿಯಾಗುತ್ತಿದ್ದರು. ಹೀಗಾಗಿ ಗ್ರೌಂಡ್ ಫೈಟಿಂಗ್‌ಗೆ ಸಂಬಂಧಿಸಿದ ಎಲ್ಲಾ ತರಬೇತಿಗಳನ್ನು ಆರ್ಮಿ ಅಥವಾ ಇನ್ನಿತರ ಫೋರ್ಸ್‌ಗಳಿಂದ ಪಡೆದುಕೊಳ್ಳಬೇಕಾಗಿತ್ತು. ೨೦೦೨ರಲ್ಲಿ ತರಬೇತಿ ಪಡೆದ ಈ ಬ್ಯಾಚ್‌ನ ಕಮಾಂಡೋಸ್ ಗರುಡ್‌ ಟ್ರೈನರ್‌ಗಳಾಗುತ್ತಾರೆ. ತದನಂತರ ಬೆಳಗಾಂನ ಟ್ರೈನಿಂಗ್ ಸೆಂಟರ್‌ನಿಂದ ಗರುಡ್‌ಗೆ ಸ್ವಇಚ್ಛೆಯಿಂದ ಸೇರಲಿಚ್ಚಿಸುವ ಹುಡುಗರನ್ನು ಸೇರಿಸಿಕೊಳ್ಳುತ್ತಾರೆ. ಹೀಗೆ ಎರಡೂವರೆ ವರ್ಷ ಅಂತರದಲ್ಲಿ ಮೂರು ಬ್ಯಾಚ್‌ಗಳಲ್ಲಿ ಗರುಡ್‌ ಕಮಾಂಡೋಗಳು ಸಿದ್ದರಾಗುತ್ತಾರೆ. ಮೂರು ತಿಂಗಳಿಗೊಂದು, ಆರುತಿಂಗಳಿಗೊಂದು ಎಂಬಂತೆ ಒಟ್ಟು ಹತ್ತು ಬ್ಯಾಚ್ ಬಂದಿರುತ್ತದೆ. ೨೦೦೬ರಲ್ಲಿ ಹನ್ನೊಂದನೇ ಬ್ಯಾಚ್‌ನಲ್ಲಿ ನಮ್ಮ ಕರ್ನಾಟಕದ ಬೆಳಗಾಂನ ಕೆಂಚಪ್ಪ ಭಂಗಿ ಅವರು ಗರುಡ್‌ ಕಮಾಂಡೋ ಆಗಿ ಆಯ್ಕೆ ಆಗುತ್ತಾರೆ. ಗರುಡ್ ಟ್ರೈನಿಂಗ್‌ನ್ನು ಮುಗಿಸಿ ಗರುಡ್ ಕಮಾಂಡೋ ಆಗುವುದು ಸುಲಭದ ಮಾತಲ್ಲ. ಇದು ಅತೀ ದೊಡ್ಡ ಸಾಧನೆ. ಬೆಳಗಾವ್‌ನ ಗೋಕಾಕ್ ಸಮೀಪದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಸಾಮಾನ್ಯ ಹುಡುಗನಾಗಿ ಬೆಳೆದು ಗರುಡ್ ಕಮಾಂಡೋ ಆದ ಕೆಂಚಪ್ಪ ಭಂಗಿ ಅವರ ಜೀವನದ ಕಥೆಯೇ 'ಗರುಡ ಹಾರಿದ ಹಾದಿ'

     ಜೀವನದಲ್ಲಿ ಕಷ್ಟಗಳು ಎದುರಾದಾಗ ಕೆಲವರು ಅದನ್ನು ಸಂಕಟ ಎಂದು  ಭಾವಿಸಿದರೆ ಇನ್ನೂ ಕೆಲವರು ಹೋರಾಟ ಎಂದು ಎದುರಿಸುತ್ತಾರೆ, ಮತ್ತು ಹೋರಾಡಿದವರು ಸೋತರೂ ಗೆದ್ದವರೆ. ಕಾರಣ ಇಷ್ಟೇ, ಅವರಿಗೆ 'ಅನುಭವ' ಎಂಬ ಅಮೂಲ್ಯ ಸಂಪತ್ತು ಸಿಕ್ಕಿರುತ್ತದೆ. "ನೈನಮ್ ಚಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ" ಅಂತ ಶ್ರೀಕೃಷ್ಣ ಆತ್ಮದ ಬಗ್ಗೆ ಹೇಳಿದ್ದಾನೆ, ಬಹುಷಃ ಅನುಭವಕ್ಕೂ ಇದನ್ನು ಅನ್ವಯಿಸಬಹುದೇನೋ. ಅಂತಹ ಸಂಪತ್ತನ್ನು ದೇಶ ರಕ್ಷಣೆಗೋಸ್ಕರ ಬಳಸುತ್ತಿರುವವರು ಗರುಡ್ ಕಮಾಂಡೋ, ಸಾರ್ಜೆಂಟ್ ಕೆಂಚಪ್ಪ ಭಂಗಿ ಅವರು.

 

ಕೆಂಚಪ್ಪನವರ ಬಾಲ್ಯ ಮತ್ತು ವಿದ್ಯಾಭ್ಯಾಸ

      ಇವರು ಹುಟ್ಟಿದ್ದು 1988 ಜುಲೈ 27 ರಂದು( ಇದು ದಾಖಲಾದ ಹುಟ್ಟಿದ ದಿನಾಂಕ. ಶಾಲೆಯಿಂದ ಶಿಕ್ಷಕರು ಬರೆದುಕೊಟ್ಟಿರುವುದು. ನಿಜವಾದ ತಾರೀಖು ತಿಳಿದಿಲ್ಲ). ಬೆಳಗಾವಿಯ ರಾಯಭಾಗ್ ನ ಕಪ್ಪಲಗುದ್ದಿ ಎಂಬ ಕಪ್ಪಗಿನ ಗ್ರಾಮದಲ್ಲಿ. (ಆಗಿನ್ನೂ ಕಪ್ಪಲಗುದ್ದಿಯಲ್ಲಿ ಸರಿಯಾಗಿ ವಿದ್ಯೆ ಇರಲಿಲ್ಲ, ವಿದ್ಯುತ್ತೂ ಇರಲಿಲ್ಲ, ಬೆಳಕಿನೆಡೆಗೆ ಸಾಗುವ ಹಾದಿಯು ಕತ್ತಲು. ಹಾಗಾಗಿ ಕಪ್ಪಗಿನ ಗ್ರಾಮ ಎಂದೆ) ಇವರ ತಂದೆ ದುಂಡಪ್ಪ ಭಂಗಿ, ಒಬ್ಬ 'ಹಮಾಲರು' (ಕೃಷಿ ವಸ್ತುಗಳನ್ನು, ರೈತರು ಬೆಳೆದ ಧವಸ ಧಾನ್ಯಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತು ಸಾಗುವವರು). ಇವರ ಊರು ಬೆಳಗಾವಿಯ ಗೋಕಾಕ್ ನ ಖಾನಟ್ಟಿ ಗ್ರಾಮ. ತಾಯಿಯ ಹೆಸರು ಚಂದ್ರವ್ವ. ಇವರ ಊರು ರಾಯ ಬಾಗ್. ತಂದೆ ಹಾಗೂ ತಾಯಿಯ ಊರಿಗೆ ಆರರಿಂದ ಏಳು ಮೈಲಿ ಅಂತರ. ತಾಯಿಯ ತಂದೆ ಯಲ್ಲಪ್ಪ ದೊಡ್ಡಮನಿಯವರು ಆ ಕಾಲಕ್ಕೆ ಆ ಊರಿಗೆ ಧನಿಕರು. ಎಕ್ರೆಗಟ್ಟಲೆ ಜಮೀನು, 30-40  ಕೂಲಿ ಆಳುಗಳು, ಸ್ವಂತ ಟ್ರ್ಯಾಕ್ಟರ್, ಟ್ರೋಲಿಗಳು, ಕಬ್ಬಿನ ಗದ್ದೆಗಳು, ಕಬ್ಬಿನ ಗಾಣಗಳನ್ನು ಹೊಂದಿದ್ದವರು. ಇವರಿಗೆ ಮೂರು ಗಂಡುಮಕ್ಕಳು ನಾಲ್ಕು ಹೆಣ್ಣುಮಕ್ಕಳು, ಇವರಲ್ಲಿ ಚಂದ್ರವ್ವ ಮೂರನೆಯವರು. ದುಂಡಪ್ಪನವರನ್ನು ಆಗಲೇ ಅವರ ತಾಯಿ(ಕೆಂಚಪ್ಪ ಅವರ ಅಜ್ಜಿ) ಈ ಧನಿಕರಲ್ಲಿ (ಚಂದ್ರವ್ವ ಅವರ ತಂದೆಯಲ್ಲಿ) ಜೀತಕ್ಕೆ ಇಟ್ಟು ದುಡ್ಡು ಕೊಂಡು ಹೋಗಿದ್ದರು. ಹೀಗಾಗಿ ದುಂಡಪ್ಪನವರು ಅಲ್ಲೇ ಜೀತದಾಳಾಗಿದ್ದರು. ಈಗಾಗಲೇ ಒಂದು ಮದುವೆ ಆಗಿ ಎರಡು ಹೆಣ್ಣುಮಕ್ಕಳ ತಂದೆಯಾಗಿದ್ದ ದುಂಡಪ್ಪನವರಿಗೆ ಮಾಲೀಕರ ಮಗಳಾದ ಚಂದ್ರವ್ವನಲ್ಲಿ ಮನಸಾಗುತ್ತದೆ. ಚಂದ್ರವ್ವನಿಗೂ ಇವರನ್ನು ಕಂಡರೆ ಇಷ್ಟವಿರುತ್ತದೆ. ಈ ವಿಷಯ ಮನೆಯಲ್ಲಿ ತಿಳಿದಾಗ ಮಾಲೀಕರು ವಿಚಾರ ಮಾಡುತ್ತಾರೆ. ಇಬ್ಬರಿಗೂ ಇಷ್ಟವಾದರೆ ಅವರನ್ನು ದೂರ ಮಾಡುವುದು ತಪ್ಪು ಎಂದು ಅವರಿಬ್ಬರಿಗೂ ಮದುವೆ ಮಾಡಿಸುತ್ತಾರೆ. ಆ ಕಾಲದಲ್ಲಿ ಎರಡನೇ ಮದುವೆ ಸಾಮಾನ್ಯ ವಿಷಯವಾಗಿತ್ತು. ಜೊತೆಗೆ ದುಂಡಪ್ಪನವರು ಗಟ್ಟಿ ಮುಟ್ಟಾಗಿದ್ದರು, ದುಡಿದು ತನ್ನ ಮಗಳನ್ನು ಸಾಕಬಹುದು ಎಂಬ ಭರವಸೆಯೂ ಸಾಹುಕಾರರದ್ದು. ಜೀತದಿಂದ ಹೊರಬಂದು ದುಂಡಪ್ಪನವರು ಚಂದ್ರವ್ವಳನ್ನು ಕರೆದುಕೊಂಡು ತಮ್ಮ ಊರಿಗೆ ತಮ್ಮ ಮನೆಗೆ ಬಂದರು. ಎರಡು ಹೆಣ್ಣುಮಕ್ಕಳು ಎರಡು ಮಡದಿಯಂದಿರು ಹಾಗೂ ತಾಯಿಯೊಂದಿಗೆ ಸಂಸಾರ ನಡೆಸುತಿದ್ದರು. ಚಂದ್ರವ್ವ ಗರ್ಭಿಣಿಯಾದರು. ಮೊದಲ ಮಗು ಹುಟ್ಟಿತು, ಗಂಡು ಮಗುವಾಗಿತ್ತು. ಆದರೆ ಆ ಮಗು ಕಣ್ಣು ಬಿಡುವ ಮೊದಲೇ ಉಸಿರು ನಿಲ್ಲಿಸಿತ್ತು. ಚಂದ್ರವ್ವ ಎರಡನೇ ಸಲ ಗರ್ಭಿಣಿಯಾದರು. ಮತ್ತದೇ ಕಥೆ. ಆ ಮಗುವೂ ಇವರಿಗೆ ದಕ್ಕಲಿಲ್ಲ. ಈ ಘಟನೆಗಳಿಂದ ನೊಂದ ಚಂದ್ರವ್ವ 'ದೇವ್ರ ಹೇಳಾರ' (ಜ್ಯೋತಿಷಿ) ಹತ್ತಿರ ಹೋದರು. ಅವರು 'ತಿರುಪೆ' ಪದ್ದತಿಯ ಮೂಲಕ ಮಗುವನ್ನು ಉಳಿಸಿಕೋ ಎಂದು ಸಲಹೆ ನೀಡಿದರು. ಅವರ ಸಲಹೆಯಂತೆ ಚಂದ್ರವ್ವ ಗರ್ಭಿಣಿಯಾದ ಕೂಡಲೇ ಮನೆ ಮನೆ ತಿರುಪೆ ಎತ್ತಿ ಬಂದ ಹಣವನ್ನು ಕೂಡಿಟ್ಟು ಮನೆಯ ಮಾಡಿನಲ್ಲಿ ಕಟ್ಟಿಟ್ಟರು. ಮುಂದೆ ಮಗು ಹುಟ್ಟಿದಾಗ ಅದರಿಂದ ಚಿನ್ನದ ಕುಂಡಲವನ್ನು ಮಾಡಿಸಿ ಮಗುವಿನ ಮೂಗಿಗೆ ಹಾಕಬೇಕೆಂದು ಜ್ಯೋತಿಷಿ ಹೇಳಿದ್ದರು. ಅದೇ ರೀತಿ ಮಾಡಿದರು ಚಂದ್ರವ್ವ. ಹೀಗೆ ಕಷ್ಟಪಟ್ಟು ಉಳಿಸಿಕೊಂಡ ಮಗುವಿಗೆ 'ವಿಠಲ' ಎಂದು ಹೆಸರಿಟ್ಟರು. ಆದರೆ ಮಗು ತುಂಬಾ ಅಳುತ್ತಿತ್ತು, ಆಗ ತಾತನ ಹೆಸರನ್ನು (ತಂದೆಯ ತಂದೆ) ಕರೆದರೆ ಅಳು ನಿಲ್ಲಿಸಬಹುದು ಎಂದರು ಜ್ಯೋತಿಷಿ. ತಾತನ ಹೆಸರು ಕೆಂಚಪ್ಪ ಎಂದಾಗಿತ್ತು. ಹೀಗಾಗಿ ಜ್ಯೋತಿಷಿಯವರ ಸಲಹೆಯಂತೆ 'ಕೆಂಚಪ್ಪ' ಎನ್ನುವ ಹೆಸರು ಮಗುವಿಗೆ ಶಾಶ್ವತವಾಯಿತು.

  ಕೆಂಚಪ್ಪನವರ ಬಾಲ್ಯ ಅಷ್ಟೊಂದು ಸುಖಕರವಾಗಿರಲಿಲ್ಲ. ಅವರು ಹುಟ್ಟಿ ಕೆಲ ವರ್ಷಗಳಲ್ಲಿಯೇ ಚಂದ್ರವ್ವನವರು ಗಂಡನ ಮನೆಯನ್ನು ಬಿಟ್ಟು ತವರು ಮನೆಯನ್ನು ಸೇರುತ್ತಾರೆ. ಕೆಂಚಪ್ಪನವರು ಹುಟ್ಟಿದ ನಂತರ ಮತ್ತೊಂದು ಹೆಣ್ಣು ಮಗುವೂ ಚಂದ್ರವ್ವನಿಗೆ ಜನಿಸಿತ್ತು, ಆ ಮಗು ಎಂಟ್‍ಹತ್ತು ತಿಂಗಳಿನದ್ದಾಗಿರುವಾಗ ಖಾಯಿಲೆಯಿಂದ ತೀರಿಹೋಯಿತು. ಈಗ ಚಂದ್ರವ್ವನಿಗೆ ಉಳಿದಿದ್ದು ಒಬ್ಬನೇ ಮಗ. ಹೀಗಾಗಿ ಚಂದ್ರವ್ವನಿಗೆ ಭಯವಾಯಿತು. 'ಸವತಿ ಮತ್ಸರ'ದಿಂದ ತನ್ನ ಮಗುವಿಗೆ ಯಾರಾದರೂ ಏನಾದರು ಮಾಡಬಹುದು ಎಂದು ಯೋಚಿಸಿ ತವರಿಗೆ ತೆರಳುತ್ತಾರೆ. ಜೊತೆಗೆ ಗಂಡನನ್ನೂ ಅಲ್ಲೇ ಬಂದಿರುವಂತೆ ಕೇಳಿಕೊಳ್ಳುತ್ತಾರೆ, ಆದರೆ ದುಂಡಪ್ಪನವರು ತನ್ನ ತಾಯಿಯನ್ನು ಬಿಟ್ಟು ತಾನು ಬರುವುದಿಲ್ಲ ಎಂದು ಹೋಗಲು ನಿರಾಕರಿಸುತ್ತಾರೆ. ಚಂದ್ರವ್ವನ ತವರಿನವರು ಶ್ರೀಮಂತರು, ಅಲ್ಲದೇ ಚಂದ್ರವ್ವಳ ಅಣ್ಣ-ತಮ್ಮಂದಿರು ಅವರ ತಂಗಿಯನ್ನು ಚನ್ನಾಗಿ ನೋಡಿಕೊಂಡಿಲ್ಲ ಎಂಬ ಕಾರಣಕ್ಕೆ ತನಗೇನಾದರೂ ಮಾಡಿ ಬಿಟ್ಟರೆ ಎಂಬ ಭಯವೂ ಇತ್ತು. "ಮುಂದೆ ಎಂದಾದರೂ ಒಂದು ದಿನ ನನ್ನ ಮಗ ನನ್ನ ಬಳಿ ಬರುತ್ತಾನೆ" ಎಂದು ಭಾವಿಸಿಕೊಂಡು ಸುಮ್ಮನಾಗಿದ್ದರು. ಚಂದ್ರವ್ವನ ತಂದೆ ಬದುಕಿರುವ ತನಕ ಆಕೆಗೆ ತವರಿನಲ್ಲಿ ಅಷ್ಟೊಂದು ಕಷ್ಟ ಗೊತ್ತಾಗಲಿಲ್ಲ. ಮನೆ ತುಂಬಾ ಜನ ಇದ್ದರು, ಅಣ್ಣ-ತಮ್ಮಂದಿರು, ಅವರ ಹೆಂಡತಿಯಂದಿರು, ಹತ್ತು-ಹದಿನೈದು ಮಂದಿ ಚಿಕ್ಕ ಚಿಕ್ಕ ಮಕ್ಕಳು. ಇವರ ಜೊತೆ ಕೆಂಚಪ್ಪನವರು ಆಡಿಕೊಂಡು  ಖುಷಿಯಾಗಿದ್ದರು. ಹೊಲದಲ್ಲಿ ದುಡಿಯಲು ಹೋಗಿದ್ದ ಮನೆಮಂದಿ ಮನೆಗೆ ಮರಳುವಾಗ ರಾತ್ರಿ ಒಂದು ಗಂಟೆ ಆದರೂ ಆಗುತ್ತಿತ್ತು. ಆಮೇಲೆ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಚಂದ್ರವ್ವ ತನ್ನ ಮಗ ಗಟ್ಟಿ ಮುಟ್ಟಾಗಿ ಬೆಳೆಯಬೇಕು ಎಂದು ಉಳಿತಾಯ ಮಾಡಿದ ಹಣದಲ್ಲಿ ಮೇಕೆಯನ್ನು ಖರೀದಿಸಿ ಅದನ್ನು ಸಾಕಿ ಅದರ ಹಾಲನ್ನು ಮಗನಿಗೆ ನೀಡುತ್ತಿದ್ದರು. ಜೋಳದ ರೊಟ್ಟಿ, ಬೆಲ್ಲ, ಮೇಕೆ ಹಾಲು ಬೆರೆಸಿ ನಿದ್ದೆಗಣ್ಣಿನಲ್ಲಿದ್ದ ಮಗನಿಗೆ ಊಟ ಮಾಡಿಸಿ ಮಲಗಿಸುತ್ತಿದ್ದರು.

   ಚಂದ್ರವ್ವ ತವರಿನಲ್ಲಿದ್ದರೂ ಅವರ ತಂದೆ, ಆಕೆ ಹೊಲದಲ್ಲಿ ದುಡಿಯುವುದಕ್ಕಾಗಿ ದಿನಕ್ಕೆ ಐದು ರೂಪಾಯಿಯಂತೆ ಸಂಬಳ ಕೊಡುತ್ತಿದ್ದರು. ಮನೆಯ ಸದಸ್ಯಳಾಗಿ ಇದ್ದರೂ ಮುಂದೊಂದು ದಿನ ಯಾವುದಾದರೂ ಕಾರಣಕ್ಕೆ ಹಣ ಬೇಕಾಗಬಹುದು, ಆಗ ಉಪಯೋಗಕ್ಕೆ ಬರುತ್ತದೆ ಎಂಬ ದೃಷ್ಟಿಯಿಂದ ಒಂದು ವರ್ಷ ಅಥವಾ ಆರು ತಿಂಗಳಿಗೊಮ್ಮೆ ಲೆಕ್ಕಾಚಾರ ಮಾಡಿ ಸಂಬಳ ನೀಡುತ್ತಿದ್ದರು. ಈ ಹಣದಿಂದ ಚಂದ್ರವ್ವ ಮೇಕೆ ಮತ್ತು ಎಮ್ಮೆಗಳನ್ನು ಖರೀದಿಸಿ ಸಾಕುತ್ತಿದ್ದರು. ತವರು ಮನೆಯ ಮೇಕೆ ಎಮ್ಮೆಗಳ ಜೊತೆ ಇವುಗಳೂ ಬೆಳೆಯುತ್ತಿದ್ದವು. ಇವುಗಳಲ್ಲಿ ಯಾವುದಾದರೂ ಮೇಕೆಯನ್ನೋ ಎಮ್ಮೆಯನ್ನೋ ಮಾರಿದರೆ, ಅದರಿಂದ ಬಂದ ಹಣವನ್ನು ಮುಂದೆ ತನ್ನ ಮಗನ ವಿದ್ಯಾಭ್ಯಾಸಕ್ಕೆ ಬೇಕಾಗಬಹುದು ಎಂದು ಚಂದ್ರವ್ವ ಬ್ಯಾಂಕ್‌ನಲ್ಲಿ ಇಡುತ್ತಿದ್ದರು. ಹೀಗೆ ಐದು-ಹತ್ತು ಸಾವಿರ ಉಳಿತಾಯ ಮಾಡಿದ್ದರು, ಇದು ಆ ಕಾಲದಲ್ಲಿ ಬಹಳ ದೊಡ್ಡ ಮೊತ್ತವಾಗಿತ್ತು. ಮಗ ಶಾಲೆಯಲ್ಲಿ ಕಲಿಯಬೇಕು, ವಿದ್ಯಾವಂತನಾಗಬೇಕು ಎಂಬುದು ಚಂದ್ರವ್ವನ ಆಸೆಯಾಗಿತ್ತು, ತನ್ನ ಮಗ ಸರಕಾರಿ ಶಾಲೆಯಲ್ಲಿ ಕಲಿತರೆ ಸಾಲದು ಎಂದು ಪಕ್ಕದಲ್ಲಿದ್ದ ಕನ್ನಡ ಮೀಡಿಯಂ ಕಾನ್ವೆಂಟ್ ಶಾಲೆಗೆ ಮಗನನ್ನು ಸೇರಿಸುತ್ತಾರೆ. ಮನೆಯ ಉಳಿದ ಮಕ್ಕಳ ಜೊತೆ ಶಾಲೆಗೆ ಹೋಗುವುದು ಬರುವುದು ಹೀಗೆ ಸಾಗುತ್ತಿತ್ತು. ಮನೆಗೆ ಬಂದು ಶಾಲೆಯ ಬ್ಯಾಗ್‌ನನ್ನು ಒಂದು ಕಡೆ ಎಸೆದರೆ ಮತ್ತೆ ಮರುದಿನ ಬ್ಯಾಗ್‌ ಎಲ್ಲಿದೆ ಎಂದು ಹುಡುಕಿ ಶಾಲೆಗೆ ಹೋಗುವ ಪರಿಸ್ಥಿತಿ ಕೆಂಚಪ್ಪನವರದ್ದು ಆಗಿತ್ತು. ಆಗೆಲ್ಲಾ, ಪ್ರತಿ ಶುಕ್ರವಾರ ಶಾಲೆಯಲ್ಲಿ ‘ಸರಸ್ವತಿ ಪೂಜೆ’ ಇರುತ್ತಿತ್ತು. ಇದಕ್ಕಾಗಿ ಪ್ರತಿವಾರ 'ಎಂಟಾಣೆ' (ಐವತ್ತು ಪೈಸೆ) ಶಾಲೆಗೆ ಕೊಡಬೇಕಾಗಿತ್ತು. ತಾತ ಇರುವ ತನಕ ಕೆಂಚಪ್ಪನವರಿಗೆ, ಈ ಎಂಟಾಣೆಗೆ ಎಂದೂ ಕಷ್ಟ ಆಗಿರಲಿಲ್ಲ.  

     ಕೆಂಚಪ್ಪನವರು ಆರನೇ ತರಗತಿಯಲ್ಲಿರುವಾಗ ತಾತ ತೀರಿಹೋಗುತ್ತಾರೆ. ತದನಂತರ ತವರಿನಲ್ಲಿ ಚಂದ್ರವ್ವ ಮಗನನ್ನು ಸಾಕಲು ತುಂಬಾ ಕಷ್ಟಪಡ ಬೇಕಾಗುತ್ತದೆ. ಚಂದ್ರವ್ವ ವಿದ್ಯಾವಂತಳಲ್ಲ, ವ್ಯವಹಾರ ಜ್ಞಾನವೂ ಕಡಿಮೆ, ಕೇವಲ ಹೊಲದಲ್ಲಿ ದುಡಿಯಲು ಮಾತ್ರ ಆಕೆಗೆ ಗೊತ್ತಿತ್ತು. ತಾತ ಇರುವಾಗಲೇ ಆಕೆಯ ಅಣ್ಣ- ತಮ್ಮಂದಿರು ಆಸ್ತಿಯುಲ್ಲಿ ಅವರವರ ಪಾಲನ್ನು ತೆಗೆದುಕೊಂಡು ಮನೆಯಿಂದ ಹೊರಗೆ ಹೋದರು. ಮನೆಯಲ್ಲಿ ಉಳಿದದ್ದು ಚಂದ್ರವ್ವನ ಒಬ್ಬ ತಮ್ಮ, ತಮ್ಮನ ಹೆಂಡತಿ, ಚಂದ್ರವ್ವನ ತಾಯಿ. ಮನೆಯಲ್ಲೇ ಉಳಿದ ತಮ್ಮ ದೈಹಿಕವಾಗಿ  ಆರೋಗ್ಯವಂತರಾಗಿರಲಿಲ್ಲ, ಜೊತೆಗೆ ವ್ಯವಹಾರ ಜ್ಞಾನವೂ ಇಲ್ಲ. ಹೀಗಾಗಿ ಮನೆಯಲ್ಲಿ ಕಷ್ಟದ ಪರಿಸ್ಥಿತಿ ಇತ್ತು. ತಾತ ಇರುವಾಗ ಮನೆಗೆ ಬೇಕಾದ ದಿನಸಿಗಳನ್ನು ತರುವುದು, ಬೆಳೆದ ಬೆಳೆಗಳನ್ನು ಸಂತೆಯಲ್ಲಿ ಮಾರುವುದು ಇವುಗಳೆಲ್ಲಾ ತಾತನದೇ ಕೆಲಸವಾಗಿತ್ತು. ಆದರೆ ತಾತ ತೀರಿಹೋದ ನಂತರ ಅಜ್ಜಿಗೆ (ಅಮ್ಮನ ಅಮ್ಮನಿಗೆ) ಈ ಕೆಲಸಗಳೆಲ್ಲಾ ಬಹಳ ಕಷ್ಟವಾಯಿತು. ಅಜ್ಜಿಯೂ ವ್ಯವಹಾರ ಬಲ್ಲವರಾಗಿರಲಿಲ್ಲ. ಹೀಗಾಗಿ ಕೆಂಚಪ್ಪ ಶಾಲೆಯಲ್ಲಿ ಓದುವ ಹುಡುಗ ಎಂದು ಅಜ್ಜಿ ಮನೆಯ ವ್ಯವಹಾರಗಳನ್ನು ಕೆಂಚಪ್ಪನವರ ಕೈಯಲ್ಲಿ ಮಾಡಿಸುತ್ತಿದ್ದರು. ಸಂತೆಗೆ ಕೆಂಚಪ್ಪ ಹಾಗೂ ಚಂದ್ರವ್ವನವರೇ ಹೋಗಿ ಬೆಳೆದ ಬೆಳೆಗಳ ಮಾರಾಟ, ಹಣಕಾಸಿನ ವ್ಯವಹಾರ ಎಲ್ಲವನ್ನೂ ಮಾಡಬೇಕಾಗಿತ್ತು. ಮನೆಯಲ್ಲಿ ಕೋಳಿ  ತಿನ್ನುತ್ತಿರಲಿಲ್ಲವಾದರೂ ದೇಸೀ ಕೋಳಿಗಳನ್ನು ಸಾಕುತ್ತಿದ್ದರು. ಇವುಗಳ ಮೊಟ್ಟೆಯನ್ನು ಮಾರುವ ಕೆಲಸ ಕೆಂಚಪ್ಪನವರದ್ದಾಗಿತ್ತು. ಬೆಳಗ್ಗೆ ಎದ್ದು ಸಗಣಿ ಎತ್ತಿ, ಹಸುಗಳ ಕಾಲುಗಳಿಗೆ ಅಂಟಿದ್ದ ಸಗಣಿಯನ್ನು ತೊಳೆದು, ತೋಟಕ್ಕೆ ಹೋಗಿ ಹಸುಗಳಿಗೆ ಮೇವು ತಂದು ನಂತರ ಶಾಲೆಗೆ ಹೊರಡ ಬೇಕಾಗಿತ್ತು. ಮನೆಯಲ್ಲಿ ಸಮಯ ನೋಡಲು ಗಡಿಯಾರವೂ ಇರುತ್ತಿರಲಿಲ್ಲ, ಮನೆಯ ಮುಂದೆ ಒಂದು ಹುಣಸೆ ಮರ ಇತ್ತು, ಅದರ ನೆರಳು ಎಲ್ಲಿದೆ ಎಂಬುದನ್ನು ನೋಡಿಕೊಂಡು ಶಾಲೆಗೆ ಹೊತ್ತಾಯಿತು, ಎಂದು ಹೊರಡುತ್ತಿದ್ದರು. ಶಾಲೆಗೆ ಹೊರಡುವಾಗ ಕೋಳಿ ಮೊಟ್ಟೆಯ ಚೀಲವನ್ನು ಅಜ್ಜಿ ಕೆಂಚಪ್ಪನವರಿಗೆ ಕೊಡುತ್ತಿದ್ದರು, ಕೊಟ್ಟು ಅಜ್ಜಿ ಹೇಳುತ್ತಿದ್ದರು "ಸಾವಿರ್ ರೂಪಾಯ್ಗೆಲ್ಲಾ, ಇದನ್ನ ಮಾರೋ ಹಂಗಿಲ್ಲ, ಕೊಟ್ರೆ ಒಂದೂವರೆ ರೂಪಾಯ್ ಹಂಗ ಕೊಟ್ಟು,  ಮಾರ್ಕೊಂಡ್ ಬರ್ಬೇಕು, ಇಲ್ಲಾಂದ್ರ ಹಂಗ ತಗೊಂಡ್ ಬಂದ್ಬಿಡು" ಎಂದು. ಈ ಮೊಟ್ಟೆಯ ಚೀಲವನ್ನ ಕ್ಲಾಸ್‌ನಲ್ಲಿ ಇಟ್ಟುಕೊಂಡು ಕುಳಿತುಕೊಳ್ಳವುದು ಹೇಗೆ ಎಂಬ ತಲೆಬಿಸಿ ಕೆಂಚಪ್ಪನವರಿಗೆ. ಊರಿಡೀ ಮೊಟ್ಟೆಯ ಚೀಲವನ್ನು ಹೊತ್ತುಕೊಂಡು ತಿರುಗಾಡಿದರೂ, ಯಾರೂ ಒಂದೂವರೆ ರೂಪಾಯಿಗೆ ಮೊಟ್ಟೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ, ಕೊನೆಗೆ ಯಾರೋ  ಇಬ್ಬರೋ ಮೂವರೋ "ಸಣ್ಣ ಹುಡುಗ ಮೊಟ್ಟೆ ಮಾರ್ತಿದಾನೆ" ಅಂತ ಕನಿಕರದಿಂದ ಮೊಟ್ಟೆಗಳನ್ನು ಖರೀದಿಸುತ್ತಿದ್ದರು. ಹೇಗೋ ಮೊಟ್ಟೆ ಮಾರಾಟ ಆಯಿತಲ್ಲಾ ಎಂದು ಮೊಟ್ಟೆಯ ಚೀಲವನ್ನು ಮಡಿಸಿ ಬ್ಯಾಗ್‌ನಲ್ಲಿ ಹಾಕಿಕೊಂಡು ಮತ್ತೆ ಶಾಲೆಗೆ ಓಡುತ್ತಿದ್ದರು. ಈ ರೀತಿ ಸಂತೆಯಲ್ಲಿ ಕೊಡುವುದು ತೆಗುದುಕೊಳ್ಳುವುದು, ಚೌಕಾಶಿ ಹೇಗೆ ಮಾಡುವುದು,  ವ್ಯಾಪಾರ ಹೇಗೆ ಮಾಡುವುದು ಮೊದಲಾದ ವಿಚಾರಗಳನ್ನು ತಿಳಿದುಕೊಂಡರು.

     ಈ ಸಮಯದಲ್ಲಿ ಮನೆಯ ಆದಾಯವೂ ಕಡಿಮೆಯಾಗಿತ್ತು, ಹೊಲಕ್ಕೆ ಬರುವ ನೀರು ಕಡಿಮೆಯಾಗಿತ್ತು, ಬೆಳೆ ಕಡಿಮೆಯಾಗಿತ್ತು, ದುಡಿಯುವ ಮಂದಿಯೂ ಮನೆಯಲ್ಲಿ ಕಡಿಮೆಯಾಗಿದ್ದರು. ಅಜ್ಜಿಗಂತೂ ಮೊಮ್ಮಗ ಶಾಲೆ ಬಿಟ್ಟು ಮನೆಯಲ್ಲೇ ಹೊಲ ನೋಡಿಕೊಂಡು ಸಂತೆ ವ್ಯವಹಾರ ಮಾಡಿಕೊಂಡು ಇರಲಿ ಎಂಬ ಆಸೆ. ಆದರೆ ತಾಯಿಗೆ ಮಗ ಕಲಿಯಬೇಕು, ಉದ್ಯೋಗಕ್ಕೆ ಹೋಗಬೇಕೆಂಬ ಬಯಕೆ. ಹೀಗಾಗಿ ಅಜ್ಜಿ ಮತ್ತು ಅಮ್ಮನ ನಡುವೆ ಭಿನ್ನಾಭಿಪ್ರಾಯ ನಡೆಯುತ್ತಲೇ ಇರುತ್ತಿತ್ತು. ಮನೆಯಲ್ಲಿ ಮುಗಿಯದ ಕೆಲಸಗಳು, ಮನೆಯಲ್ಲಿರುವ ಹಿರಿಯರೆಲ್ಲಾ, ಬೆಳಗ್ಗೆ ಐದು ಗಂಟೆಗೆ ಹೊಲಕ್ಕೆ ಹೋದರೆ, ರಾತ್ರಿ ಏಳು ಗಂಟೆಗೆ ಹಿಂತಿರುಗುತ್ತಿದ್ದರು, ಈ ಸಂದರ್ಭದಲ್ಲಿ ಹಸುಗಳಿಗೆ ಮೇವು, ಅವುಗಳ ಪಾಲನೆ ಮೊದಲಾದ ಕೆಲಸಗಳು ಕೆಂಚಪ್ಪನವರ ತಲೆಗೇ ಬೀಳುತ್ತಿತ್ತು. ರಾತ್ರಿ ಮಲಗುವ ಹೊತ್ತಿಗೆ ಮನೆ ಮಂದಿಯಲ್ಲಿ ಯಾರ ಕಾಲು ನೋವಾದರೂ ಕೆಂಚಪ್ಪನವರೇ ಒತ್ತಬೇಕಿತ್ತು. "ಲೇ ಚಿಕ್ಕೋನು, ಬಾ ಕಾಲೊತ್ತು" ಎಂದು ಹೇಳುತ್ತಿದ್ದರು.  ಈ ಸ್ಥಿತಿಗಳ ನಡುವೆ ಕೆಂಚಪ್ಪನವರ ಬದುಕು ಸಾಗುತ್ತಿತ್ತು. ಶುಕ್ರವಾರ ಶಾಲೆಗೆ ಕೊಡಬೇಕಾಗಿದ್ದ ಐವತ್ತು ಪೈಸೆಯನ್ನು ಅಜ್ಜಿಯ ಬಳಿ ಕೇಳಿದರೆ ಅಜ್ಜಿ ಗೊಣಗುತ್ತಿದ್ದರು. "ನಿಮ್ಮನ್ನು ಸಾಕುವುದೇ ಹೆಚ್ಚು, ಇನ್ನು ಹಣ ಹೇಗೆ ಕೊಡುವುದು, ಬೇಕಿದ್ದರೆ ಶಾಲೆ ಬಿಟ್ಟು ಮನೆ ಕೆಲಸ ಮಾಡು" ಎನ್ನುತ್ತಿದ್ದರು. ಪುಸ್ತಕ, ಪೆನ್ನುಗಳನ್ನು ಕೊಂಡುಕೊಳ್ಳಲೂ ಬಹಳ ಕಷ್ಟ ಆಗುತ್ತಿತ್ತು. ಅಜ್ಜಿ ಗೊಣಗದೆ, ಕಾಡಿಸದೆ ಎಂದೂ ಹಣ ಕೊಡುತ್ತಿರಲಿಲ್ಲ. ಅಮ್ಮನಿಗೆ, ಹಣ ಕೊಟ್ಟರೆ ಎಲ್ಲಿ ತನ್ನ ಮಗ ಹಾಳಾಗುತ್ತಾನೋ ಎಂಬ ಭಯ. ಶಾಲೆಯಲ್ಲಿ ಉಳಿದ ಮಕ್ಕಳು ಹೊಸ ಹೊಸ ಬಟ್ಟೆ, ಡ್ರಾಯಿಂಗ್ ಬುಕ್, ಕಲರ್, ಪೆನ್ಸಿಲ್ ಬಾಕ್ಸ್ ಮೊದಲಾದವುಗಳನ್ನು ತರುತ್ತಿದ್ದುದು ನೋಡಿ ತನಗೂ ಅವೆಲ್ಲಾ ಬೇಕು ಎಂದು ಆಸೆ ಆಗುತ್ತಿತ್ತು. ಆದರೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

  ಒಂದು ದಿನ ಶಾಲೆಯಲ್ಲಿ ಡ್ರಾಯಿಂಗ್ ಬುಕ್ ತರುವಂತೆ ಹೇಳಿದ್ದರು, ಕೆಂಚಪ್ಪನವರಿಗೆ ಕೆಲಸದ ಮಧ್ಯದಲ್ಲಿ ಇದು ಮರೆತು ಹೋಗಿತ್ತು. ಮರುದಿನ ಶಾಲೆಯಲ್ಲಿ ಎಲ್ಲರೂ ಡ್ರಾಯಿಂಗ್ ಬುಕ್, ಸ್ಕೆಚ್ ಪೆನ್ ಸೆಟ್, ಜ್ಯಾಮೆಟ್ರಿ ಬಾಕ್ಸ್ ತಂದಿದ್ದರು. ಅವರನ್ನು ನೋಡಿ ಕೆಂಚಪ್ಪನವರಿಗೆ ತನ್ನಲ್ಲಿ ಇಲ್ಲವಲ್ಲ ಎಂದು ನಿರಾಸೆಯಾಯಿತು. ನಾಳೆಯಾದರೂ ತರಲೇ ಬೇಕು ಎಂದುಕೊಂಡು ಸುಮ್ಮನಾದರು. ಮನೆಗೆ ಹೋಗಿ ಅಮ್ಮನಲ್ಲಿ ಡ್ರಾಯಿಂಗ್ ಬುಕ್ ತೆಗೆಯಲು ದುಡ್ಡು ಕೇಳಿದಾಗ ಅಮ್ಮ ಕೊಡಲು ನಿರಾಕರಿಸಿದರು. ಇದರಿಂದ ಮತ್ತಷ್ಟು ಬೇಸರವಾಯಿತು. ಆ ದಿನ ರಾತ್ರಿ ಎಲ್ಲರೂ ಮಲಗಿದ್ದಾಗ  ಅಮ್ಮ ಕಟ್ಟಿಗೆಯ ಸಂದೂಕದಲ್ಲಿಟ್ಟಿದ್ದ, ಹಾಲು ಮಾರಿ ತಂದಿಟ್ಟ ದುಡ್ಡನ್ನು ಕದ್ದರು. ಮರುದಿನ ಆ ದುಡ್ಡಿನಿಂದ ಡ್ರಾಯಿಂಗ್‌ಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಸಂಜೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಚರ್ಚೆ ಪ್ರಾರಂಭವಾಗಿತ್ತು. ಸಂದೂಕದಲ್ಲಿಟ್ಟಿದ್ದ ದುಡ್ಡು ಕಾಣೆಯಾಗಿದೆ, ಎಲ್ಲಿ ಹೋಯಿತು? ಎಂದು. ಇವರಲ್ಲಿದ್ದ ಹೊಸ ಡ್ರಾಯಿಂಗ್ ಪುಸ್ತಕ, ಸ್ಕೆಚ್ ಪೆನ್ ಎಲ್ಲವನ್ನು ನೋಡಿದ ಇವರ ದೊಡ್ಡಮ್ಮನ ಮಗಳು ಅಕ್ಕನಿಗೆ ಈತನೇ ಹಣ ಕದ್ದಿದ್ದಾನೆ ಎಂದು ಖಾತ್ರಿಯಾಯಿತು. ಕೊನೆಗೆ ಅಮ್ಮ ಚನ್ನಾಗಿ ಹೊಡೆದರು. ಇದಾಗಿ ಕೆಲವು ಸಮಯದ ನಂತರ ಶಾಲೆಗೆ ಕಟ್ಟಲು ಕೆಂಚಪ್ಪನವರ ಮನೆಯಿಂದ ಕೊಟ್ಟಿದ್ದ ಫೀಸ್‌ನ್ನು ಶಾಲೆಯಲ್ಲಿ ಬೇರೆ ಯಾರೋ ಕದಿಯುತ್ತಾರೆ. ಫೀಸ್ ಕಟ್ಟಲು ದುಡ್ಡಿರುವುದಿಲ್ಲ, ಆದರೆ ಮನೆಯಲ್ಲಿ ಫೀಸ್ ಕಟ್ಟಲು ಕೊಟ್ಟಿದ್ದ ಹಣ ಕಳ್ಳತನವಾಗಿದೆ ಎಂದು ಹೇಳಿದಾಗ ಯಾರೂ ನಂಬಲಿಲ್ಲ, ನಂಬುವ ಪರಿಸ್ಥಿತಿಯಲ್ಲೂ ಅವರು ಇರಲಿಲ್ಲ. ಎಲ್ಲರೂ ಕೆಂಚಪ್ಪನವರ ಮೇಲೆಯೇ ಅನುಮಾನ ಪಟ್ಟು "ನೀನೇ ಕಳ್ಳ, ದುಡ್ಡ್‌ನ್ನ ನೀನೇ ಏನೋ ಮಾಡಿದೀಯಾ" ಅಂತ ಅಪವಾದ ಹೊರಿಸುತ್ತಾರೆ. ತಾನೇನೂ ಮಾಡಿಲ್ಲ ಎಂದು ಎಷ್ಟೇ ಹೇಳಿದರೂ ಮನೆಯವರು ಒಪ್ಪಲಿಲ್ಲ. ಕೊನೆಗೆ ಅಮ್ಮನೇ ಖುದ್ದಾಗಿ ಶಾಲೆಗೆ ಬಂದು ಫೀಸ್ ಕಟ್ಟಿ, ಮೇಸ್ಟರ ಬಳಿ ತನ್ನ ಮಗ ಸುಳ್ಳು ಹೇಳುತ್ತಾನೆ, ದುಡ್ಡು ಕದಿಯುತ್ತಾನೆ ಎಂದು ದೂರಿಟ್ಟರು. ಮೇಸ್ಟ್ರು ಕೆಂಚಪ್ಪನವರಿಗೆ ಬಾಸುಂಡೆ ಬರುವಂತೆ ಬಾರಿಸಿದರು. ಬಾಲ್ಯದಲ್ಲಿ ನೆರೆ ಹೊರೆಯ ಮಕ್ಕಳೊಡನೆ ಆಟವಾಡಿದ ನೆನಪೇ ಕೆಂಚಪ್ಪನವರಿಗೆ ಇಲ್ಲ, ಆಟವಾಡಲು ಹೋದರೆ ಮನೆಯಿಂದ ಹಿರಿಯರು ಬೆತ್ತ ಹಿಡಿದು ಬರುತ್ತಿದ್ದರು, ಮನೆಯಲ್ಲಿ ಅಷ್ಟೊಂದು ಕೆಲಸ ಬಾಕಿ ಇದೆ, ಇಲ್ಯಾಕೆ ಆಡುತ್ತಾ ಕೂತ್ತಿದ್ದೀಯಾ ಎಂದು.

   ಹೈಸ್ಕೂಲ್ ದಿನಗಳಲ್ಲೂ ಕೆಂಚಪ್ಪನವರ ಬದುಕು ತುಂಬಾ ಕಷ್ಟಕರವಾಗಿತ್ತು. ಮನೆಯ ಪಕ್ಕದಲ್ಲಿ ಒಂದು ಕಬ್ಬಿನ ಗಾಣವಿತ್ತು. ಪೆನ್, ಪುಸ್ತಕದ ಖರ್ಚಿಗಾದರೂ ದುಡ್ಡಾಗುತ್ತದೆ, ಅಲ್ಲಿ ಹೋಗಿ ದುಡಿ ಎನ್ನುತ್ತಿದ್ದರು ಮನೆಯ ಹಿರಿಯರು. ಶನಿವಾರ, ಆದಿತ್ಯವಾರ ಹೀಗೆ ಶಾಲೆಗೆ ರಜೆ ಇರುವಾಗೆಲ್ಲಾ ಗಾಣಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಂತೂ ಸಾಕಾಗಿ ಹೋಗುತ್ತಿತ್ತು. ಕಬ್ಬಿನ ಜೊಲ್ಲೆಗಳನ್ನು ಹೊರುವ ಕೆಲಸ ನೀಡುತ್ತಿದ್ದರು. ಹೊತ್ತು ಹೊತ್ತು ನೆತ್ತಿ ಉರಿಯುತ್ತಿತ್ತು, ಕೊನೆಗೆ ಅಳುವೇ ಬರುತ್ತಿತ್ತು, ಬೆಳಿಗ್ಗೆ ನಾಲ್ಕರಿಂದ ರಾತ್ರಿ ಒಂಭತ್ತು ಗಂಟೆಯ ತನಕ ಈ ಕೆಲಸ ಮಾಡಬೇಕಿತ್ತು, ಕೆಲವೊಮ್ಮೆ ಕೆಂಚಪ್ಪನವರ ತಾಯಿ ಹೊಲದ ಕೆಲಸ ಮುಗಿಸಿ ಬಂದು ಮಗನ ಕಷ್ಟವನ್ನು ನೋಡಲಾರದೇ ತಾವೇ ಉಳಿದ ಕೆಲಸವನ್ನು ಪೂರೈಸುತ್ತಿದ್ದರು. ಇದರಿಂದ ದಿನಕ್ಕೆ ಮೂವತ್ತಾರು ರೂಪಾಯಿಯಷ್ಟು ಹಣ ಸಂಪಾದನೆ ಆಗುತ್ತಿತ್ತು. ಆದರೆ ಈ ರೀತಿ ಕಷ್ಟಪಟ್ಟು ದುಡಿದದ್ದರಿಂದ  ಅಟ್ಲಾಸ್ ಸೈಕಲ್ ಒಂದನ್ನು ಖರೀದಿಸಲು ಸಾಧ್ಯವಾಯಿತು. (ಸಾವಿರದ ಮುನ್ನೂರು ರೂಪಾಯ್‌ಗೆ ಸೈಕಲ್ ಸಿಕ್ಕಿತ್ತು, ಆಗಿನ ಕಾಲದಲ್ಲಿ ಆ ಮೊತ್ತ ದೊಡ್ಡದಾಗಿತ್ತು). ಮನೆಯಿಂದ ಶಾಲೆಗೆ ನಾಲ್ಕೈದು ಕಿಲೋಮೀಟರ್ ದೂರ ಇತ್ತು. ಸೈಕಲ್ ಇದ್ದರೆ ಹೋಗಿ ಬರುವ ಸಮಯ ಉಳಿತಾಯವಾಗುತ್ತದಲ್ಲ, ಇದರಿಂದ ಮನೆಯಲ್ಲಿ ಕೆಲಸ ಮಾಡಬಹುದು ಎಂಬ ಕಾರಣಕ್ಕಾಗಿ ಸೈಕಲ್ ಖರೀದಿಸಿದ್ದರು.

   ಕೆಂಚಪ್ಪನವರು ಯಾವಾಗಲೂ ಲಾಸ್ಟ್ ಬೆಂಚ್ ವಿದ್ಯಾರ್ಥಿ ಆಗಿದ್ದರು, ಓದಿನಲ್ಲಿ ಮುಂದಿರಲಿಲ್ಲ, ಹೋಮ್ ವರ್ಕ್ ಯಾವತ್ತೂ ಕಂಪ್ಲೀಟ್ ಆಗುತ್ತಿರಲಿಲ್ಲ, ಓದುವುದು ಬರೆಯುವುದು ಇಷ್ಟ ಇರಲಿಲ್ಲ. ಆದರೆ ಹೈಸ್ಕೂಲ್ ಓದುವ ಸಂದರ್ಭದಲ್ಲಿ ಬದುಕಿನಲ್ಲೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿತ್ತು. ಕೆಂಚಪ್ಪನವರಿಗೆ ಸಂಬಂಧದಲ್ಲಿ ಅಣ್ಣನಾಗಬೇಕಾದವರು (ಭೀಮ್‌ಶಿ ಕಪ್ಪಲಗುದ್ದಿ) ಎರಡು ಮೂರು ವರ್ಷ ಶಾಲೆಗೆ ಹೋಗದೆ, ದುಡಿದು ಮತ್ತೆ ಎಸ್.ಎಸ್.ಎಲ್.ಸಿ ಕಟ್ಟಿ ಉತ್ತಮ ಅಂಕದೊಂದಿಗೆ ಕ್ಲಾಸ್‌ನಲ್ಲಿ ಫಸ್ಟ್ ಬಂದಿದ್ದರು. ಈ ಕಾರಣಕ್ಕಾಗಿ ಶಾಲೆಯಲ್ಲಿ ಅವರಿಗೆ ಸನ್ಮಾನ ಮಾಡಿದ್ದರು. ಇದನ್ನು ಕಂಡು ಕೆಂಚಪ್ಪನವರಿಗೆ, ತಾನೂ ಓದಬೇಕು ಎಂಬ ಛಲ ಬಂತು. ಸದಾ ಹಿಂದಿನ ಬೆಂಚಿನಲ್ಲೇ ಕುಳಿತುಕೊಳ್ಳುತ್ತಿದ್ದ ಕೆಂಚಪ್ಪನವರು ಮುಂದಿನ ಬೆಂಚಿನಲ್ಲಿ ಕುಳಿತುಕೊಂಡರು, ಗೆಳೆಯರ ಗುಂಪನ್ನು ಬದಲಾಯಿಸಿದರು. ಚೆನ್ನಾಗಿ ಓದುವ ವಿದ್ಯಾರ್ಥಿಗಳ ಜೊತೆ ಗೆಳೆತನ ಬೆಳೆಸಿ ತಾವು ಯಾವ ಯಾವ ವಿಷಯಗಳಲ್ಲಿ ಹಿಂದಿದ್ದಾರೋ ಅವುಗಳನ್ನು ಶ್ರದ್ಧೆ ಇಟ್ಟು ಕಲಿತು ಮುಂದೆ ಬರುತ್ತಾರೆ. ಈ ಸಮಯದಲ್ಲಿ ಮನೆಯ ಪರಿಸ್ಥಿತಿ ಏನೂ ಸುಧಾರಿಸಿರುವುದಿಲ್ಲ, ಮನೆಯ ಆ ಕೆಲಸಗಳ ನಡುವೆಯೂ ಓದಲೇ ಬೇಕಾಗುತ್ತದೆ. ಮನೆಕೆಲಸ, ಹೊಲದ ಕೆಲಸ ಮಾಡದೇ ಇದ್ದರೆ ಅಜ್ಜಿಯ ಕೈಯಿಂದ ಚನ್ನಾಗಿ ಬೈಗುಳ ಸಿಗುತ್ತಿತ್ತು. ಅಜ್ಜಿ ಬೈಯ್ಯದ ಬೈಗುಳಗಳೇ ಉಳಿದಿರಲಿಲ್ಲ. ಊಟಕ್ಕೆ ಕುಳಿತರೆ ಊಟದ ತಟ್ಟೆಯನ್ನು ಎಳೆದು ತೆಗೆಯುವುದೊಂದು ಬಾಕಿ ಇತ್ತು. ಶಾಲೆಗೆ ರಜೆ ಸಿಕ್ಕರೆ ಯಾಕಾದರು ರಜೆ ಇದೆ, ಹೇಗೆ ಮನೆಯಲ್ಲಿ ಇರಲಿ ಎಂಬ ಚಿಂತೆ ಕಾಡುತ್ತಿತ್ತು. ಆದರೆ ಶಾಲೆಯಲ್ಲಿ ಕೆಂಚಪ್ಪನವರು, ಗುರುಗಳ ಅಚ್ಚು ಮೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರಾಗುತ್ತಾರೆ. ಎಸ್.ಎಸ್. ಎಲ್. ಎಸ್.ಸಿ ಯಲ್ಲಿರುವಾಗ ಶಾಲೆಯ ಪಕ್ಕದಲ್ಲೇ ಒಂದು ರೂಮ್ ಮಾಡಿಕೊಂಡು ರಾತ್ರಿಯೆಲ್ಲಾ ಅಲ್ಲಿ ಇದ್ದು ಓದಿ ಬೆಳಗ್ಗೆ ಮನೆಗೆ ಬಂದು ಮತ್ತೆ ಶಾಲೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಉಳಿದಿರುತ್ತಿದ್ದ ತಂಗಳನ್ನವೇ ಹೊಟ್ಟೆಗೆ ಗತಿಯಾಗಿರುತ್ತಿತ್ತು. ಕೊನೆಗೆ ಎಸ್.ಎಸ್ ಎಲ್.ಸಿ ಯ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ, ತರಗತಿಗೆ ಎರಡನೇ ಸ್ಥಾನ ಪಡೆಯುತ್ತಾರೆ. ಇಂಗ್ಲಿಶ್ ಮತ್ತು ವಿಜ್ಞಾನದಲ್ಲಿ ಅತ್ಯಧಿಕ ಅಂಕ ಗಳಿಸುತ್ತಾರೆ. ಇಲ್ಲಿ ದತ್ತು ನಿಧಿಯ ರೂಪದಲ್ಲಿ ಸ್ವಲ್ಪ ಹಣ ಬಹುಮಾನವಾಗಿ ಸಿಗುತ್ತದೆ. ಹೈಸ್ಕೂಲ್ ಓದುವಾಗ ಇಂಗ್ಲಿಷ್ ಪದಗಳ ಅರ್ಥ ತಿಳಿಯಲು ಬಹಳ ಕಷ್ಟ ಪಡಬೇಕಾಗುತ್ತಿತ್ತು, ಹೀಗಾಗಿ ಈ ಬಹುಮಾನದಲ್ಲಿ ಇಂಗ್ಲಿಶ್ ಡಿಕ್ಷನರಿ ಒಂದನ್ನು ಖರೀದಿಸುತ್ತಾರೆ,  ಇದು ಮುಂದೆ ಅವರಿಗೆ ತುಂಬಾ ಸಹಾಯವಾಗುತ್ತದೆ.

   ಕೆಂಚಪ್ಪನವರ ಜೀವನದ ಟರ್ನಿಂಗ್ ಪಾಯಿಂಟ್‌ಗೆ ಕಾರಣವಾದ ಆ ವ್ಯಕ್ತಿ, ಹೈಸ್ಕೂಲ್ ಮುಗಿದ ನಂತರ ಜಮಖಂಡಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದ್ದರು. ತಾನು ಅವರಂತೆ ವಿಜ್ಞಾನ ಓದುತ್ತೇನೆ ಎಂಬುದು ಕೆಂಚಪ್ಪನವರ ನಿರ್ಧಾರವಾಗಿತ್ತು. ಆದರೆ ಅವರ ಅಮ್ಮ ಅಲ್ಲೇ ಹತ್ತು ಕಿಲೋ ಮೀಟರ್‌ ದೂರದಲ್ಲಿನ ಮೂಡಲಗಿಯಲ್ಲಿ ಇರುವ ಕಾಲೇಜಿಗೆ ಸೇರುವಂತೆ ಹೇಳುತ್ತಾರೆ, ಇದರಿಂದ ಓದಿಸುವ ಖರ್ಚೂ ಕಡಿಮೆ ಆಗುತ್ತದೆ, ಜೊತೆಗೆ ಮಗ ಹತ್ತಿರದಲ್ಲೇ ಇರುತ್ತಾನೆ ಎಂಬುದು ಅಮ್ಮನ ಆಲೋಚನೆ. ಆದರೆ ಅಲ್ಲಿ ವಿಜ್ಞಾನ ವಿಷಯ ಇಲ್ಲ ಎಂದು ಕೆಂಚಪ್ಪನವರು ನಿರಾಕರಿಸಿದರು. ಓದಿದರೆ ಜಮಖಂಡಿಯಲ್ಲಿ, ಇಲ್ಲವಾದರೆ ಓದು ಮುಂದುವರಿಸುವುದಿಲ್ಲ ಎಂದು ಹಠ ಹಿಡಿದರು. ಕೊನೆಗೆ ಅಮ್ಮ, ತಾನು ಸಂಗ್ರಹಿಸಿಟ್ಟಿದ್ದ ಇಪ್ಪತ್ತು ಸಾವಿರದಲ್ಲಿ ಕಾಲೇಜ್ ಫೀಸ್ ಕಟ್ಟಿ ಮಗನನ್ನು ಜಮಖಂಡಿಯ ವಿಜ್ಞಾನ ಕಾಲೇಜಿಗೆ ಸೇರಿಸಲು ಒಪ್ಪುತ್ತಾರೆ. ಈ ಸಂದರ್ಭದಲ್ಲಿ ಕೆಂಚಪ್ಪನವರಿಗೆ ಆದರ್ಶವಾಗಿದ್ದ ಭೀಮ್‌ಶಿ ಕಪ್ಪಲಗುದ್ದಿ ಅವರೇ ಕಾಲೇಜ್‌ ಅಡ್ಮಿಶನ್‌ಗೂ ಸಹಾಯ ಮಾಡಿದರು. ಆದರೆ ದಿನಾ ಮನೆಯಿಂದ ಹೋಗಿ ಬರಲು ಸಾಧ್ಯವಿರಲಿಲ್ಲ, ಹೀಗಾಗಿ ಗೆಳೆಯರ ಜೊತೆ ಸೇರಿ ಅಲ್ಲಿ ಒಂದು ರೂಮ್ ಮಾಡಿಕೊಂಡರು. ಉಳಿದುಕೊಳ್ಳಲು ವ್ಯವಸ್ಥೆ ಆಗಿತ್ತು, ಆದರೆ ಊಟಕ್ಕೆ ವ್ಯವಸ್ಥೆ ಇರಲಿಲ್ಲ. ಹತ್ತಿರದಲ್ಲಿ ಹೋಟೆಲ್‌ಗಳು ಇದ್ದರೂ ದಿನಾ ಹೋಟೆಲ್‌ನಲ್ಲಿ ಉಣ್ಣುವಷ್ಟು ಹಣ ಇರಲಿಲ್ಲ. ಪ್ರತಿದಿನ ಬೆಳಗ್ಗೆ ಬಸ್ಸೊಂದು ಕೆಂಚಪ್ಪನವರ ಊರಿನಿಂದ  ಜಮಖಂಡಿಗೆ ಬರುತ್ತಿತ್ತು. ಆ ಬಸ್ಸಿನವರ ಜೊತೆ ಅಮ್ಮ ಬುತ್ತಿ ಕಟ್ಟಿ ಕಳುಹಿಸಿ ಕೊಡುತ್ತಿದ್ದಳು, ಪ್ರತಿದಿನ ಮೂರು ನಾಲ್ಕು ಗಂಟೆಗೆ ಎದ್ದು ಅಡುಗೆ ಮಾಡಿ ಬುತ್ತಿ ಕಟ್ಟಿ, ಬೆಳಗ್ಗೆ ಐದು ಗಂಟೆಗೆ ಅವರ ಊರಿನಿಂದ ಹೊರಡುತ್ತಿದ್ದ ಬಸ್‌ನಲ್ಲಿ ಬುತ್ತಿಯನ್ನು ಕಳುಹಿಸಬೇಕಿತ್ತು. ಬಸ್ ಸ್ಟ್ಯಾಂಡ್‌ಗೆ ಹೋಗಿ ಅಮ್ಮ ಕಟ್ಟಿಕೊಟ್ಟ ಬುತ್ತಿಯನ್ನು ಡ್ರೈವರ್ ಕೈಯಿಂದ ಪಡೆದು, ಆದರಲ್ಲಿದ್ದ ಊಟವನ್ನು ಮೂರು ಹೊತ್ತು ಉಣ್ಣಬೇಕಿತ್ತು. ಕೆಲವೊಮ್ಮೆ ಕೆಂಚಪ್ಪನವರು ಬಸ್‌ಸ್ಟ್ಯಾಂಡ್‌ ತಲುಪುವ ಹೊತ್ತಿಗೆ ಬಸ್ ಹೋಗಿರುತ್ತಿತ್ತು, ಅಥವಾ ಕೆಲವೊಮ್ಮೆ ಬಸ್ಸೇ ಬರುತ್ತಿರಲಿಲ್ಲ. ಮರುದಿನ ಅದೇ ಬುತ್ತಿ ವಾಪಾಸ್ ಬರುತ್ತಿತ್ತು. ಹೀಗಾಗಿ ತಂಗಳನ್ನ ಮತ್ತೆ ಜೊತೆಯಾಯಿತು. ಇಂತಹ ಸಮಯದಲ್ಲೆಲ್ಲಾ, ಮಧ್ಯಾಹ್ನದ ತನಕ ನೀರು ಕುಡಿದು ಹೇಗೋ ಕಾಲ ಕಳೆಯುತ್ತಿದ್ದರು, ಮಧ್ಯಾಹ್ನ ರೂಮ್ ಪಕ್ಕದಲ್ಲಿ ಇದ್ದ ಹೋಟೆಲ್‌ನಲ್ಲಿ ಮಸಾಲ್‌ದೋಸೆ ಸಿಗುತ್ತಿತ್ತು. ಒಂದು ಮಸಾಲ್ ದೋಸೆಯನ್ನು ತೆಗೆದುಕೊಳ್ಳುತ್ತಿದ್ದರು, ಸಾಂಬಾರ್ ಫ್ರೀ ಸಿಗುತ್ತಿತ್ತು, ಸಾಂಬಾರ್ ಮತ್ತೆ ಮತ್ತೆ ಕೇಳಿ ಹಾಕಿಸಿಕೊಳ್ಳುತ್ತಿದ್ದರು, (ಅದಕ್ಕೆ ದುಡ್ಡು ಕೊಡಬೇಕಾಗಿರಲಿಲ್ಲ) ಅದನ್ನೇ ಹೊಟ್ಟೆತುಂಬಾ ಕುಡಿದು ರೂಮ್‌ಗೆ ಮರಳುತ್ತಿದ್ದರು. ಕೆಲವೊಮ್ಮೆ ಸಪ್ಲೈಯರ್ ಹೀಗ್ಯಾಕೆ ಸಾಂಬಾರ್ ಕೇಳುತ್ತಿದ್ದಾರೆ ಎಂದು ಗದರಿದ್ದೂ ಇದೆ. ಅದೇ ರೀತಿ ಕೆಲವೊಮ್ಮೆ, ಕಾಲೇಜಿಗೆ ಹಣದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಬಸ್‌ನಲ್ಲಿ ಬರುತ್ತಿದ್ದ ಊಟದ ಬುತ್ತಿಯಲ್ಲಿ ಚೀಟಿ ಬರೆದು ಅಮ್ಮನಿಗೆ ಕಳುಹಿಸುತ್ತಿದ್ದರು. ಅಮ್ಮ ಊರಲ್ಲಿ ಯಾರಲ್ಲಾದರೂ ಚೀಟಿಯನ್ನು ಓದಿಸಿ ಮರುದಿನ ಅದೇ ಬುತ್ತಿಯಲ್ಲಿ ಹಣವನ್ನು ಕಳುಹಿಸುತ್ತಿದ್ದರು. ಈ ಸಮಯದಲ್ಲಿ ಒಟ್ಟಿಗಿದ್ದ ರೂಮ್‌ಮೇಟ್ಸ್ ತುಂಬಾ ಸಹಾಯ ಮಾಡುತ್ತಿದ್ದರು. ಹೀಗೆ ಕಷ್ಟದಲ್ಲಿ ಬೀದರ್‌ನ ಬಿ. ಎಲ್. ಡಿ. ಇ ಅಸೋಸಿಯೇಶನ್ ಅಡಿಯಲ್ಲಿ ನಡೆಸಲಾಗುತ್ತಿದ್ದ ಜಮಖಂಡಿಯ ಟಿ.ಜಿ.ಪಿ ಸೈನ್ಸ್ ಕಾಲೇಜಿನಲ್ಲಿ ಪಿ.ಯು ಮುಗಿಸುತ್ತಾರೆ. ಇಲ್ಲೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಾರೆ. ಮುಂದೆ ಓದಬೇಕು ಎಂಬ ಆಸೆ ಇರುತ್ತದೆ, ಆದರೆ ಮುಂದೆ ಓದಲು ಹೊರಟರೆ ಹೊಟ್ಟೆ ತುಂಬುವುದಿಲ್ಲ, ಹೊಟ್ಟೆ ತುಂಬಿಸಲು ಹೊರಟರೆ ಓದಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದರು.

   ಪಿ.ಯು ಮುಗಿದ ನಂತರ ರೂಮ್ ಬಿಟ್ಟು ಜಮಖಂಡಿಯಿಂದ ಹೊರಡುತ್ತಾರೆ. ಬಟ್ಟೆ ಬರೆ, ಪುಸ್ತಕಗಳು ಸೇರಿದಂತೆ ರೂಮ್‌ನಲ್ಲಿದ್ದ ತಮ್ಮೆಲ್ಲಾ ವಸ್ತುಗಳನ್ನು ಮೂಟೆಕಟ್ಟಿ, ಸೈಕಲ್‌ ಮೇಲಿಟ್ಟು ಸೈಕಲ್ ತುಳಿದುಕೊಂಡೇ ನಲುವತ್ತು ಕಿಲೋ ಮೀಟರ್ ದೂರದಲ್ಲಿರುವ ಊರಿಗೆ ಬರಬೇಕಿತ್ತು. ಕೆಂಚಪ್ಪ ಹಾಗೂ ಅವರ ಗೆಳೆಯ ಇಬ್ಬರೂ ಸೈಕಲ್‌ ತುಳಿಯುತ್ತಾ ಊರ ಕಡೆ ಹೊರಡುತ್ತಾರೆ. ಆ ಗೆಳೆಯನ ಮನೆ ಕೆಂಚಪ್ಪನವರ ಊರಿಗಿಂತ ಸ್ವಲ್ಪ ಮೊದಲೇ ಸಿಗುತ್ತದೆ. ರಾತ್ರಿ ಹನ್ನೊಂದು ಗಂಟೆಯ ಸಮಯಕ್ಕೆಲ್ಲಾ ಗೆಳೆಯನ ಮನೆ ತಲುಪುತ್ತಾರೆ. ಇಷ್ಟು ರಾತ್ರಿಯಲ್ಲಿ ಕೆಂಚಪ್ಪನವರು ಒಬ್ಬನೇ ಸೈಕಲ್ ತುಳಿಯುತ್ತಾ ಊರಿಗೆ ಹೋಗುವುದು ಬೇಡ ಎಂದು ಗೆಳೆಯನ ಅಮ್ಮ ಹೇಳುತ್ತಾರೆ. ಅಲ್ಲೇ ಊಟ ಮಾಡಿ ಮಲಗಿ ಮರುದಿನ ಹೊರಡುವಂತೆ ಹೇಳುತ್ತಾರೆ. ಅದೇ ರೀತಿ ಆ ದಿನ ಗೆಳೆಯನ ಮನೆಯಲ್ಲಿ ಉಳಿದು ಮರುದಿನ ಬೆಳಿಗ್ಗೆ ತಿಂಡಿ ತಿಂದು ಊರಿಗೆ ತೆರಳುತ್ತಾರೆ. ಮನೆ ಹತ್ತಿರ ತಲುಪಿದಾಗ ಮನೆಯ ಮುಂದೆ ಬಹಳಷ್ಟು ಜನ ಸೇರಿದ್ದರು. ಇದನ್ನು ನೋಡಿ ಕೆಂಚಪ್ಪನವರಿಗೆ "ನಮ್ ಮನಿ ಮುಂದ ಇಷ್ಟೊಂದ್ ಜನ ಯಾಕ್ ಸೇರಿದಾರ?" ಅನ್ನೋ ಪ್ರಶ್ನೆ ಮೂಡುತ್ತದೆ. ನೋಡುವಾಗ ಅವರ ಅಜ್ಜಿ ತೀರಿಹೋಗಿದ್ದರು. ತಾನು ಗೆಳೆಯನ ಮನೆಯಲ್ಲಿ ಉಳಿದುಕೊಳ್ಳದೆ ಮನೆಗೆ ಬಂದಿದ್ದರೆ ಬಹುಷಃ ಕೊನೆ ಬಾರಿ ಅಜ್ಜಿಯನ್ನು ಜೀವಂತವಾಗಿ ನೋಡಬಹುದಾಗಿತ್ತು ಎಂಬ ನೋವು ಎಂದಿಗೂ ಮರೆಯಾಗುವುದಿಲ್ಲ.

   ಕೆಲವು ದಿನಗಳ ಹಿಂದೆ ಏರ್‌ಫೋರ್ಸ್ ನಿಂದ ಏರ್ಪಡಿಸಲಾದ ಓಪನ್ ರ್‍ಯಾಲಿಯ (೨೦೦೬) ಬಗ್ಗೆ ಪತ್ರಿಕೆಯಲ್ಲಿ ಬಂದ ಜಾಹಿರಾತನ್ನು ಕೆಂಚಪ್ಪನವರು ನೋಡಿದ್ದರು. ಅಜ್ಜಿ ತೀರಿಹೋಗಿ ಒಂದು ವಾರದಲ್ಲೇ ಕೊಪ್ಪಳದಲ್ಲಿ ರ್‍ಯಾಲಿ ಇತ್ತು. ಈ ರ್‍ಯಾಲಿಗೆ ಹೋಗಲು ಕೆಂಚಪ್ಪನವರು ಸಿದ್ದರಾಗುತ್ತಾರೆ. ಕೆಂಚಪ್ಪ ಹಾಗು ಅವರ ಗೆಳೆಯ (ರೂಮ್ ಮೇಟ್) ಇಬ್ಬರೂ ಸೇರಿ ಕೊಪ್ಪಳದ ಕಡೆಗೆ ಹೊರಡುತ್ತಾರೆ. ಅಜ್ಜಿ ೨೦೦೬ ಮೇ ೧೨ಕ್ಕೆ ತೀರಿ ಹೋಗಿದ್ದರು, ರ್‍ಯಾಲಿ ಮೇ ೧೮ಕ್ಕೆ ಪ್ರಾರಂಭವಾಗುವುದರಿಂದ ಮೇ ೧೭ಕ್ಕೆ ಮನೆಯಿಂದ ಹೊರಡುತ್ತಾರೆ. ಆದರೆ ಬೆಳಗಾವ್ ಜಿಲ್ಲೆಯವರು ಅತೀ ಹೆಚ್ಚು ಮಂದಿ ಆರ್ಮಿ, ಏರ್‌ಫೋರ್ಸ್‌ಗೆ ಬರುವುದರಿಂದ ಅವರಿಗೆ ಪ್ರತ್ಯೇಕವಾಗಿ ಮೇ೨೦ಕ್ಕೆ  ರ್‍ಯಾಲಿ ಏರ್ಪಡಿಸಿದ್ದರು. ಮೇ ೧೮/ ೧೯ಕ್ಕೆ ಕೊಪ್ಪಳದಲ್ಲಿ ಬೆಳಗಾವಿ ಹೊರತುಪಡಿಸಿ ಕರ್ನಾಟಕದ ಉಳಿದ ಜಿಲ್ಲೆಯ ಹುಡುಗರಿಗೆ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಕೆಂಚಪ್ಪನವರಿಗೆ ಈ ರ್‍ಯಾಲಿಯಲ್ಲಿ ಪಾಲ್ಗೊಳಲು ಅವಕಾಶ ಇರುವುದಿಲ್ಲ. ಆದರೆ ಕೆಂಚಪ್ಪನವರ ಗೆಳೆಯ ಬಾಗಲಕೋಟೆ ಜಿಲ್ಲೆಯವನಾದ್ದರಿಂದ ಆತ ಪಾಲ್ಗೊಂಡು ಏರ್‌ಫೋರ್ಸ್‌ನ ವೈ-ಗ್ರೂಪ್‌ನಲ್ಲಿ ಸೆಲೆಕ್ಟ್ ಆಗುತ್ತಾನೆ. ಆದರೆ ಆತ ಮೆಡಿಕಲ್ ಎಕ್ಸಾಮ್‌ನಲ್ಲಿ ಹಿಂದುಳಿದು ರೆಡ್ ಕಾರ್ಡ್ ಪಡೆಯುತ್ತಾನೆ. ಆತನ ಎತ್ತರ ಜಾಸ್ತಿ ಇದ್ದು ತೂಕ ಕಡಿಮೆ ಇರುತ್ತದೆ, ಜೊತೆಗೆ ಚೆಸ್ಟ್ ಲೆವೆಲ್ ಇಲ್ಲ ಎಂದು ಮೂರು ಅಥವಾ ಆರು ತಿಂಗಳು ಕಾಯುವಂತೆ ತಿಳಿಸುತ್ತಾರೆ. ಮೂರು/ಆರು ತಿಂಗಳ ನಂತರ ಮತ್ತೆ ಲೆಟರ್ ಬರುತ್ತದೆ, ಆಗ ಪುನಃ ಬೆಂಗಳೂರಿಗೆ ಹೋಗಿ ಮೆಡಿಕಲ್ ಎಕ್ಸಾಮ್ ಮಾಡಿಸಿಕೊಂಡು ಪಾಸ್ ಆಗುವ ಅವಕಾಶ ಇರುತ್ತದೆ.

   ೨೦ನೇ ತಾರಿಖು ರ್‍ಯಾಲಿಯಲ್ಲಿ ಭಾಗವಹಿಸಿ ವೈ ಗ್ರೂಪ್ ರ್‍ಯಾಲಿಯಲ್ಲಿ ಕೆಂಚಪ್ಪನವರು ಫೈಲ್ ಆಗುತ್ತಾರೆ. ಆದರೆ ಅದೇ ಸಂದರ್ಭದಲ್ಲಿ ವೈ ಗ್ರೂಪ್‌ನ ಸ್ಪೆಶಲ್ ಟ್ರೇಡ್‌ಗಳಾದ ಐ ಎ ಎಫ್ (ಎಸ್) (Indian Airforce  Security) , ಐ ಎ ಎಫ್ (ಪಿ) (Indian Airforce Police), ಮತ್ತು ಜಿ ಟಿ ಐ (Ground Training Instructor) ಗಳ ಆಯ್ಕೆ ಪ್ರಕ್ರಿಯೆ ಬಾಕಿ ಇರುತ್ತದೆ. ಹೀಗಾಗಿ ವೈ ಗ್ರೂಪ್‌ನಲ್ಲಿ ಸೆಲೆಕ್ಟ್ ಆಗದವರು, ಆದವರು ಎಲ್ಲರೂ ಇದರಲ್ಲಿ ಭಾಗವಹಿಸಬಹುದು ಎಂಬ ಆಯ್ಕೆ ನೀಡುತ್ತಾರೆ, ಕೆಂಚಪ್ಪನವರು ಭಾಗವಹಿಸುತ್ತಾರೆ. ಆಗಲೇ ಪಿ.ಯು ಫಲಿತಾಂಶ ಪ್ರಕಟವಾಗಿರುತ್ತದೆ. ಆದರೆ ಕೂಡಲೇ ಫಲಿತಾಂಶ ನೋಡಲು ಆಗ ಯಾವುದೇ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಎಸ್.ಎಸ್.ಎಲ್.ಸಿ ಮಾರ್ಕ್ಸ್‌ಕಾರ್ಡ್ ನ ಆಧಾರದ ಮೇಲೆ ರ್‍ಯಾಲಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಇದರಿಂದಾಗಿ ಎಕ್ಸ್ ಗ್ರೂಪ್‌ನಲ್ಲಿ ಭಾಗವಹಿಸಲು ಕೆಂಚಪ್ಪನವರಿಗೆ ಸಾಧ್ಯವಾಗಲಿಲ್ಲ.

   ಇಲ್ಲಿ ಬೆಳಗ್ಗೆ ಐದು ಕಿಲೋ ಮೀಟರ್ ಓಟ, ಮತ್ತೆ ಸಂಜೆ ಎರಡೂವರೆ ಕಿಲೋ ಮೀಟರ್ ಓಟ ಇರುತ್ತದೆ. ಇದೆರಡರಲ್ಲೂ ಪಾಸ್‌ ಆದರೆ ಮಾತ್ರ ಸೆಲೆಕ್ಷನ್. (ಆದರೆ ವೈ ಗ್ರೂಪ್‌ನಲ್ಲಿ ಕೇವಲ ೧.೬ ಕಿಲೋ ಮೀಟರ್ ರನ್ನಿಂಗ್ ಇತ್ತು. ಉಳಿದಂತೆ ಮೆಂಟಲ್ ಎಲಿಜಿಬಿಲಿಟಿಗೆ ಸಂಬಂಧ ಪಟ್ಟ ಪರೀಕ್ಷೆಗಳು ಇರುತ್ತಿದ್ದವು.) ಓಡುವ ಗ್ರೌಂಡ್‌ನಲ್ಲಿ ಕಾಲಿಗೆ ಚುಚ್ಚುವಂತಹ ಕಲ್ಲುಗಳು, ಜೊತೆಗೆ ಕೊಪ್ಪಳದ ಬಿಸಿಲು. ಕಾಲಿಗೆ ಶೂ ಇರಲಿಲ್ಲ, ಬರಿಗಾಲಿನಲ್ಲಿ ಅಂತಹ ಮೈದಾನದಲ್ಲಿ ಐದು ಕಿಲೋಮೀಟರ್ ಓಡಬೇಕಾಗಿತ್ತು. ಬೆಳಗ್ಗೆ ಐದು ಕಿಲೋ ಮೀಟರ್ ಓಡಿದ ನಂತರ ಮಧ್ಯಾಹ್ನ ಮೆಂಟಲ್ ಎಲಿಜಿಬಿಲಿಟಿಗೆ ಸಂಬಂಧಿಸಿದ ಪರೀಕ್ಷೆ ಇತ್ತು. ಹೆಚ್ಚು ಕಮ್ಮಿ ಆರು ನೂರು ಜನ ಈ ಎಕ್ಸಾಮ್ ಬರೆದಿದ್ದರು. ಸಂಜೆ ಮತ್ತೆ ಎರಡೂವರೆ ಕಿಲೋಮೀಟರ್ ಓಟ. ಮರುದಿನ ಮಧ್ಯಾಹ್ನ ಫಲಿತಾಂಶ ಪ್ರಕಟಿಸುವ ಸಮಯ. ಕೆಂಚಪ್ಪನವರಿಗೆ ಜೋರಾಗಿ ಹಸಿವಾಗುತ್ತಿತ್ತು, ಒಂದೆರಡು ಪ್ಯಾಕೆಟ್ ಪಾರ್ಲೆಜಿ ಬಿಸ್ಕೆಟ್ ಆದರೂ ತರುವೆ ಎಂದು ಗೆಳೆಯನಿಗೆ ಬ್ಯಾಗ್‌ ಕೊಟ್ಟು ಬಿಸ್ಕೆಟ್ ತರಲು ಹೋಗುತ್ತಾರೆ. ಹೋಗಿ ಬಂದು ಮತ್ತೆ ಗೆಳೆಯನಿಂದ ಬ್ಯಾಗ್ ಪಡೆದು ಕುಳಿತುಕೊಳ್ಳುವಷ್ಟರಲ್ಲಿ ಸೀರಿಯಲ್ ನಂಬರ್ ೨೨ ಎಂದು ಕರೆದರು. ಕೆಂಚಪ್ಪನವರದೇ ನಂಬರ್ ಆಗಿತ್ತು. ಇದು ಆಯ್ಕೆ ಆದವರ ನಂಬರ್ ಅಥವಾ ಆಗದವರ ನಂಬರ್ ಎಂದು ಹೇಳುತ್ತಿರಲಿಲ್ಲ. ಸುಮ್ಮನೆ ನಂಬರ್ ಕರೆಯುತ್ತಿದ್ದರು. ಹೀಗೆ ನಂಬರ್ ಕರೆದು ಎರಡು ಗುಂಪಾಯಿತು. ಇನ್ನೊಂದು ಗುಂಪಿನವರಿಗೆ ಹೇಳಿದರು, "ನೀವು ಸೆಲೆಕ್ಟ್ ಆಗಿಲ್ಲ. ನಿಮ್ಮ ನಿಮ್ಮ ಬ್ಯಾಗ್ ತೊಗೊಂಡು ಇಲ್ಲಿಂದ ಹೊರಡಿ" ಎಂದು. ಕೆಂಚಪ್ಪನವರು ಅಲ್ಲಿ ತನಕ ಆರ್ಮಿ, ಏರ್‌ಫೋರ್ಸ್‌ಗೆ ಸೇರುವ ಕನಸನ್ನೂ ಕಂಡವರಲ್ಲ. ಈ ಸೆಲೆಕ್ಷನ್ ಅವರಿಗೆ ಅನಿರೀಕ್ಷಿತವಾಗಿತ್ತು. ಈ ಸೆಲೆಕ್ಷನ್‌ನಲ್ಲಿ ಗರುಡ್ ಫೋರ್ಸ್, ಗ್ರೌಂಡ್ ಟ್ರೈನಿಂಗ್ ಇನ್ಸ್ಟ್ರಕ್ಟರ್ ಹಾಗೂ ಏರ್‌ಫೋರ್ಸ್ ಪೋಲಿಸ್ ಗೆ ಹುಡುಗರನ್ನು  ಸೆಲೆಕ್ಟ್ ಮಾಡಿದ್ದರು. ಇಲ್ಲಿ ಮತ್ತೆ ಎತ್ತರದ ಮಾನದಂಡ ಅಳವಡಿಸಿ 175cm ಗಿಂತ ಹೆಚ್ಚು ಎತ್ತರ ಇರುವವರನ್ನು ಏರ್‌ಫೋರ್ಸ್ ಪೋಲಿಸ್ ತೆಗೆದುಕೊಂಡರು. 172cm ಗಿಂತ ಎತ್ತರ ಇರುವವರನ್ನು ಐ ಎಫ್ ಎಸ್ ಗೆ ತೆಗೆದುಕೊಂಡರು. 172cmಗಿಂತ ಕಡಿಮೆ ಇರುವವರನ್ನು ಜಿಟಿಐ ಗೆ ಸೇರಿಸಿಕೊಂಡರು. ಕೆಂಚಪ್ಪನವರ ಎತ್ತರ 173cm ಹೀಗಾಗಿ ಗರುಡ್‌ಗೆ ಆಯ್ಕೆ ಆದರು.

  ಏರ್‌ಫೋರ್ಸ್ ಗೆ ಆಯ್ಕೆ ಆದ ನಂತರ ಕೊಪ್ಪಳದಿಂದ ಜಮಖಂಡಿಗೆ ಬಂದು ಗೆಳೆಯರಿಗೆಲ್ಲಾ ವಿಷಯ ತಿಳಿಸುತ್ತಾರೆ. ಎಲ್ಲರಿಗೂ ಖುಷಿಯಾಗುತ್ತದೆ. ಕೊಪ್ಪಳಕ್ಕೆ ಸೆಲೆಕ್ಷನ್ ರ್‍ಯಾಲಿಗೆ ಹೋಗಲು ಕೆಂಚಪ್ಪನವರ ಹತ್ತಿರ ದುಡ್ಡು ಇರುವುದಿಲ್ಲ. ಈ ಸಂದರ್ಭದಲ್ಲಿ ಅವರ ರೂಮ್‌ನಲ್ಲಿ ಒಬ್ಬರು ಪ್ರೈಮರಿ ಶಾಲೆ ಶಿಕ್ಷಕರಿದ್ದರು. ಅವರು ಕೊಪ್ಪಳಕ್ಕೆ ಹೋಗಿ ಬರಲು ಖರ್ಚಿಗಾಗಿ ಐನೂರು ರೂಪಾಯಿ ಹಣ ನೀಡಿದ್ದರು. ಜಮಖಂಡಿಯಲ್ಲಿ ಕೆಂಚಪ್ಪನವರ ರೂಮ್ ಪಕ್ಕದಲ್ಲಿದ್ದ ಬ್ಯಾಂಕ್ ಮ್ಯಾನೇಜರ್ ಒಬ್ಬರು ಕೊಪ್ಪಳದಲ್ಲಿ ಉಳಿದುಕೊಳ್ಳಲು ತಮ್ಮ ಸಂಬಂಧಿಕರ ಮನೆಯಲ್ಲಿ ವ್ಯವಸ್ಥೆ ಮಾಡಿ ಕೊಟ್ಟಿದ್ದರು. ರ್‍ಯಾಲಿಯಲ್ಲಿ ಭಾಗವಹಿಸಲು ಮೂರರಿಂದ ನಾಲ್ಕು ದಿನ ಕೊಪ್ಪಳದಲ್ಲಿ ಉಳಿದುಕೊಳ್ಳಬೇಕಾಗಿತ್ತು. ಆಗೆಲ್ಲಾ ಹೋಟೆಲ್ ರೂಮ್ ಬುಕ್ ಮಾಡಿ ಉಳಿದುಕೊಳ್ಳಲು ಕೆಂಚಪ್ಪನವರಿಂದ ಸಾಧ್ಯವಿರಲಿಲ್ಲ. ಹೀಗೆ ತನಗೆ ಸಹಾಯ ಮಾಡಿದ ಎಲ್ಲರಿಗೂ ಸೆಲೆಕ್ಟ್ ಆಗಿರುವ ವಿಷಯವನ್ನು ತಿಳಿಸುತ್ತಾರೆ. ನಂತರ ಮನೆಗೆ ಬರುತ್ತಾರೆ. ಮನೆಯಲ್ಲಿ ಇನ್ನೂ ಅಜ್ಜಿಯ ಸಾವಿನ ನೋವಿನ ಛಾಯೆ ಹಾಗೆಯೇ ಇರುತ್ತದೆ. ಊರಿನವರು, ನೆಂಟರು ಮನೆಗೆ ಬಂದು ಹೋಗಿ ಮಾಡುತ್ತಿರುತ್ತಾರೆ. ಅಮ್ಮನಲ್ಲಿ ತಾನು ಏರ್‌ಫೋರ್ಸ್ ಗೆ ಸೆಲೆಕ್ಟ್ ಆದ ವಿಷಯ ತಿಳಿಸುತ್ತಾರೆ, "ಓ ಹೌದಾ, ಒಳ್ಳೆದಾಗ್ಲಿ" ಎಂದು ಅಮ್ಮ ಸುಮ್ಮನಾಗುತ್ತಾರೆ.

  ಸೆಲೆಕ್ಷನ್ ಲೆಟರ್ ಮೂರು ತಿಂಗಳಲ್ಲಾದರೂ ಬರಬಹುದು, ಎರಡು ವರ್ಷ ಆದರೂ ಆಗಬಹುದು ಎಂದು ಹೇಳಿದ್ದರು. ಹೀಗಾಗಿ ಯಾವಾಗ ಬರುತ್ತದೆ ಎಂಬ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಸೋದರ ಮಾವಂದಿರ ಬಳಿ ಹಣ ಕೇಳಿ ಪಡೆದು, ಪಕ್ಕದ ಊರು ಮೂಡಲಗಿಯ ಶ್ರೀ ಶಿವಬೋಧರಂ ಕಾಲೇಜಿನಲ್ಲಿ ಬಿ.ಎ ಗೆ ಅಡ್ಮಿಶನ್ ತೆಗೆದುಕೊಂಡರು. ಸೈನ್ಸ್ ಓದಿ ಬಿ.ಎ ಯಾಕೆ ಮಾಡುತ್ತಿರುವೆ ಎಂದು ಎಲ್ಲರೂ ಕೇಳುತ್ತಿದ್ದರು. ಆದರೆ ಕೆಂಚಪ್ಪನವರ ಪರಿಸ್ಥಿತಿಯ ಅರಿವು ಅವರಿಗೆ ಇರುವುದಿಲ್ಲ. ಆದರೆ ಮೂರು ತಿಂಗಳಿನಲ್ಲಿ ಕಾಲ್ ಲೆಟರ್ ಬಂತು. ಕಾಲ್ ಲೆಟರ್ ಬಂದು ಹತ್ತು ದಿನಗಳಾದರೂ ಪೋಸ್ಟ್ ಮ್ಯಾನ್ ಕೆಂಚಪ್ಪನವರಿಗೆ ಕಾಲ್ ಲೆಟರ್ ಕೊಟ್ಟಿರಲಿಲ್ಲ, ಕಾರಣ ಇಷ್ಟೇ, ಕೆಂಚಪ್ಪನವರ ಸರ್ನೇಮ್ ಭಂಗಿ ಎಂದಿತ್ತು. ಆ ಊರಿನಲ್ಲಿ ಕೆಂಚಪ್ಪನವರನ್ನು ತಾಯಿಯ ತವರಿನ ಮನೆ ಹೆಸರಿನಿಂದಲೇ ಗುರುತಿಸುತ್ತಿದ್ದರು. ಹೀಗಾಗಿ ಕೆಂಚಪ್ಪ ಭಂಗಿ ಎಂದರೆ ಯಾರು ಎಂದು ಪೋಸ್ಟ್ ಮ್ಯಾನ್‌ಗೆ ಗೊತ್ತಿರಲಿಲ್ಲ. ಕೊನೆಗೆ ಸೋದರಮಾವನ ಮನೆಯಲ್ಲಿ, ನಿನಗೆ ಏನೋ ಲೆಟರ್ ಬಂದಿರಬೇಕು, ಹೋಗಿ ಪೋಸ್ಟ್‌ಮ್ಯಾನ್‌ನ ಕೇಳು ಎಂದರು. ಅಲ್ಲಿ ವಿಚಾರಿಸಿದಾಗ, "ಹೌದು ಲೆಟರ್ ಬಂದೈತಿ, ಭಂಗಿ ಅಂದ್ರೆ ನೀನೆ ಏನೋ, ಈ ಲೆಟರ್‌ನ ವಾಪಸ್ ಕಳ್ಸಿಬೇಕು ಅಂತ್ ಮಾಡಿದ್ದೆ" ಎಂದ ಪೋಸ್ಟ್ ಮ್ಯಾನ್. ಲೆಟರ್ ನೋಡಿದಾಗ, ಅದು ಸಂಪೂರ್ಣ ಇಂಗ್ಲಿಶ್‌ನಲ್ಲಿತ್ತು. ಅಂದು ತೆಗೆದುಕೊಂಡಿದ್ದ ಡಿ.ಕೆ ಭಾರದ್ವಾಜ್ ಡಿಕ್ಷ್ನರಿ ಸಹಾಯದಿಂದ ಲೆಟರ್‌ನ ಓದಿ ಅರ್ಥ ಮಾಡಿಕೊಂಡರು. ಇನ್ನು ಹತ್ತು ಹದಿನೈದು ದಿನದೊಳಗೆ ಬೆಂಗಳೂರಲ್ಲಿ ರಿಪೋರ್ಟ್ ಮಾಡಿಕೊಳ್ಳಬೇಕಾಗಿತ್ತು. ಅಮ್ಮನಲ್ಲಿ ಈ ವಿಷಯ ಹೇಳಿದಾಗ, "ಯಾವಾಗೈತಪ್ಪ ನೌಕ್ರಿ? ದೇವ್ರೇ ಕೊಟ್ನಪ್ಪ ನಿನಿಗೆ, ಪರಮಾತ್ಮ ಕೊಟ್ಟ್ ನಿನಗೆ, ನಮಗೇನೂ ಗೊತ್ ಆಗ್ಲಿಲ್ಲ" ಎಂದರು. ಅಜ್ಜಿ ತೀರಿಕೊಂಡ ಸಮಯದಲ್ಲಿ ಈ ವಿಷಯವನ್ನು ಅಮ್ಮನಿಗೆ ಹೇಳಿದ್ದು ಗೊತ್ತೇ ಆಗಿರಲಿಲ್ಲ.




Comments

  1. ನನ್ನ ಗೆಳೆಯನ ಜೀವನ ಚರಿತ್ರೆಯನ್ನು ಗರುಡ ಹಾರಿದ ದಾರಿಯ ಜೀವನ ಚರಿತ್ರೆ" ನಿಮ್ಮ ಬರಹ ಬಹಳ ಸುಂದರ ಹಾಗೂ ಮನದಟುವ ಕಥೆಯಾಗಿರುತ್ತೆ.


    ಧನ್ಯವಾದಗಳು....

    ReplyDelete
  2. ಮಳೆ ಬಂದರೆ ಎಲ್ಲಾ ಪ್ರಾಣಿಗಳು ರಕ್ಷಣೆ ಮನೆಗೆ ಓಡುತ್ತವೆ, ಆದರೆ ಗರುಡ ಮಾತ್ರ ಮಲೆ ಸುರಿಸುವ ಮೋದಕ್ಕಿಂತ ಮೇಲೆ ಹಾರಿ ಮಲೆಯಿಂದ ರಕ್ಷಣೆ ಪಡೆಯುತ್ತವೆ. ಅಂತೆಯೇ ಕಷ್ಟದ ವಿರುದ್ಧ ಹೋರಾಡಿ ಸಾಧನೆ ಮಾಡಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಸರ್

    ReplyDelete

Post a Comment

thank you...

Popular posts from this blog

ಗರುಡ ಹಾರಿದ ಹಾದಿ: ಭಾಗ - 2

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ