ಗರುಡ ಹಾರಿದ ಹಾದಿ: ಭಾಗ - 2

 

ವೃತ್ತಿ ಜೀವನ ಆರಂಭ

    ೨೦೦೬ ಸೆಪ್ಟೆಂಬರ್ ೨೪ರಂದು ಕೆಂಚಪ್ಪನವರು ಊರು ಬಿಟ್ಟು ಬೆಂಗಳೂರಿಗೆ ಹೊರಡುತ್ತಾರೆ. ಬೆಂಗಳೂರಿಗೆ ಹೋಗಲು  ಪಕ್ಕದೂರು ಶಿವಪೂರ್ (ಹಳ್ಳೂರ್) ನವರಾದ, ಸಹಪಾಟಿಯ ತಂದೆ ಸಹಾಯಮಾಡುತ್ತಾರೆ. ಬೆಂಗಳೂರಲ್ಲಿ ಶಿವಾಜಿನಗರದಲ್ಲಿ ಒಂದು ಹೋಟೆಲ್ ರೂಮ್ ಬುಕ್ ಮಾಡಿ ಅಲ್ಲಿ ಉಳಿದುಕೊಂಡರು. ಮರುದಿನ ಏರ್‌ಮೆನ್ ಸೆಲೆಕ್ಷನ್ ಸೆಂಟರ್‌ಗೆ ಹೋಗುತ್ತಾರೆ. ಅಲ್ಲಿಗೆ, ಆಯ್ಕೆ ಆದ ಎಲ್ಲರೂ ಬಂದಿದ್ದರು. ಅಲ್ಲಿ ಇವರ ಎಲ್ಲಾ ಡಿಟೇಲ್ಸ್‌ಗಳನ್ನು ಪರೀಕ್ಷಿಸಿ ಡಾಕ್ಯುಮೆಂಟ್‌ಗಳನ್ನು ತಯಾರು ಮಾಡುತ್ತಾರೆ. ಕೊನೆಗೆ ಜಿ ಟಿ ಐ, ಐ ಎಫ್ ಎಸ್, ಐ ಎ ಎಫ್ ಜಿ ಗಳಿಗೆ ದೆಹಲಿಯಿಂದ ವೇಕೆನ್ಸಿ ಬರಲಿಲ್ಲ, ಹಾಗಾಗಿ ಈಗ ನಿಮ್ಮ ಊರಿಗೆ ಹೋಗಿ ಮತ್ತೆ ಲೆಟರ್ ಕಳುಹಿಸುತ್ತೇವೆ ಆಗ ಬನ್ನಿ ಎನ್ನುತ್ತಾರೆ. ಊರಲ್ಲಿ ಎಲ್ಲರಿಗೂ ಟಾ ಟಾ ಬಾಯ್ ಹೇಳಿ ಬಂದಿದ್ದವರು ಮತ್ತೆ ಊರಿಗೆ ಹೋಗಿ ಏನೆಂದು ಹೇಳುವುದು, ಪುನಃ ಕಾಲ್ ಲೆಟರ್ ಬರಲಿಲ್ಲವಾದರೆ ಎಂದು ಈ ಗ್ರೂಪ್‌ಗಳಿಗೆ ಆಯ್ಕೆ ಆದ ಹುಡುಗರಿಗೆ ಆತಂಕ. ಕೊನೆಯ ದಿನ ಕೊನೆಯ ಸಮಯಕ್ಕೆ ಮತ್ತೆ ಇವರನ್ನು ಕರೆದು ನಾಲ್ಕು ವೇಕೆನ್ಸಿ ಬಂದಿದೆ ಬೇಗ ಆಫೀಸ್‌ಗೆ ಬನ್ನಿ ಎನ್ನುತ್ತಾರೆ. ಈ ಮೂರು ಗ್ರೂಪ್‌ಗಳಿಗೆ ಸೆಲೆಕ್ಟ್ ಆಗಿ ಬಂದಿದ್ದ ಐದು ಜನರಲ್ಲಿ ನಾಲ್ಕು ಜನರನ್ನು ಸೇರಿಸಿಕೊಳ್ಳುತ್ತಾರೆ, ಅವರಲ್ಲಿ ಕೆಂಚಪ್ಪನವರೂ ಒಬ್ಬರು.

   ಅದೇ ದಿನ ರಾತ್ರಿ ರಾಣಿ ಚೆನ್ನಮ್ಮ ಟ್ರೈನ್‌ನಲ್ಲಿ, ಆಯ್ಕೆ ಆದ ಎಲ್ಲರನ್ನೂ ಬೆಳಗಾವಿಯ ಟ್ರೈನಿಂಗ್ ಸೆಂಟರ್‌ಗೆ ಕರೆದುಕೊಂಡು ಹೋಗುತ್ತಾರೆ. ಕೆಂಚಪ್ಪನವರು ಬೆಳಗಾವಿ ಜಿಲ್ಲೆಯವರಾದರೂ ಅದೇ ಮೊದಲಬಾರಿಗೆ ಬೆಳಗಾವಿಯನ್ನು ನೋಡಿದ್ದಾಗಿತ್ತು. ಕೆಂಚಪ್ಪನವರ ಊರಿನಿಂದ ಬೆಳಗಾವಿಗೆ ತೊಂಬತ್ತು ಕಿಲೋ ಮೀಟರ್ ದೂರ ಇತ್ತು. ಬಹಳ ಅವಶ್ಯವಿದ್ದರೆ ಮಾತ್ರ ಊರಿನ ಹಿರಿಯರು ಬೆಳಗಾವಿಗೆ ಹೋಗಿ ಬರುತ್ತಿದ್ದರು. ಊರಿನ ಜನಕ್ಕೆ ಆಗೆಲ್ಲಾ ದೂರದ ಊರೆಂದರೆ ಜಮಖಂಡಿಯೇ ಆಗಿತ್ತು. ಅದಕ್ಕಿಂತ ದೂರ ಹೋಗುವವರು ಬಹಳ ಕಡಿಮೆ ಮಂದಿ. ಕೆಂಚಪ್ಪನವರು ಜೀವನದಲ್ಲಿ ಮೊದಲ ಬಾರಿಗೆ ರಾಜ್ಯ ರಾಜಧಾನಿ ಬೆಂಗಳೂರು ಹಾಗು ಜಿಲ್ಲೆಯ ಮುಖ್ಯ ಕೇಂದ್ರ ಬೆಳಗಾವಿಯನ್ನು ನೋಡಿದ್ದಾಗಿತ್ತು. ಅದೇ ರೀತಿ ರೈಲಿನಲ್ಲೂ ಮೊದಲ ಪಯಣದ ಅನುಭವ ಅದಾಗಿತ್ತು.

   ಕ್ಯಾಂಪ್‌ನಲ್ಲಿದ್ದ ಎಲ್ಲಾ ಹುಡುಗರನ್ನೂ ಬೆಳಗಾವಿಯ ಸಾಂಬ್ರಕ್ಕೆ ಕರೆದುಕೊಂಡು ಬರುತ್ತಾರೆ. ಅಲ್ಲಿ ಎಲ್ಲಾ ಹುಡುಗರ ಬ್ಯಾಗ್‌ಗಳನ್ನು ಚೆಕ್ ಮಾಡಲಾಗುತ್ತದೆ. ನಿಷೇಧಿತವಾದ ಯಾವುದೇ ವಸ್ತುಗಳನ್ನು ಒಳಗಡೆ ತೆಗೆದುಕೊಂಡು ಹೋಗಲು ಅವಕಾಶ ಇರುವುದಿಲ್ಲ. ಹೀಗಾಗಿ ವಸ್ತುಗಳನ್ನು ಸಬ್ಮಿಟ್ ಮಾಡಿಸುತ್ತಾರೆ. ನಂತರ ಎಲ್ಲರ ತಲೆಕೂದಲನ್ನೂ ಬೋಳಿಸುತ್ತಾರೆ. ಅಲ್ಲಿದ್ದ ಹುಡುಗರನ್ನು ನಾಲ್ಕು ಸ್ಕ್ವಾಡನ್‌ಗಳಲ್ಲಿ ವಿಭಾಗಿಸುತ್ತಾರೆ. ಒಂದೇ ರಾಜ್ಯದವರು ಒಂದೇ ಗುಂಪಿನಲ್ಲಿ ಬರದಂತೆ ಮಿಕ್ಸ್ ಅಪ್ ಮಾಡುತ್ತಾರೆ. ಎಲ್ಲರನ್ನೂ ಸ್ಟೇಷನ್ ಮೆಡಿಕಲ್ ಸೆಂಟರ್ (SMC) ಗೆ ಕಳುಹಿಸಿ ವ್ಯಾಕ್ಸಿನೇಷನ್ ನೀಡುತ್ತಾರೆ. ಕೆಂಚಪ್ಪನವರು ಅದೇ ಮೊದಲ ಬಾರಿಗೆ ಸೂಜಿ ಚುಚ್ಚಿಸಿಕೊಂಡಿದ್ದರು. ಹೊರಗಡೆ ಆಸ್ಪತ್ರೆಗಳಲ್ಲಿ ಇಂಜೆಕ್ಷನ್ ಸೈಟ್‌ನ್ನು ಕಾಟನ್ ಮತ್ತು ಅಲ್ಕೋಹಾಲ್‌ನಿಂದ ವರೆಸುವಂತೆ ಇಲ್ಲಿ ಮಾಡುವುದಿಲ್ಲ. ಜೇನು ಹುಳ ಕಚ್ಚಿದಂತೆ ಸೂಜಿ ಚುಚ್ಚಿ ಕಳುಹಿಸುತ್ತಾರೆ. ನಂತರ ಎಲ್ಲರನ್ನೂ ಬಿಲೆಟ್‌ಗಳಿಗೆ ಗಳುಹಿಸುತ್ತಾರೆ. ಅಲ್ಲಿ ಯಾರೂ ಕನ್ನಡ ಮಾತನಾಡುವವರು ಇರಲಿಲ್ಲ. ಕೆಂಚಪ್ಪನವರಿಗಂತೂ ಸ್ವಲ್ಪವೂ ಹಿಂದಿ ಬರುತ್ತಿರಲಿಲ್ಲ. ಹಿಂದಿ ಮಾತನಾಡಲು ತುಂಬಾ ಕಷ್ಟಪಡುತ್ತಿದ್ದರು. ಹೈಸ್ಕೂಲ್‌ನಲ್ಲಿ ತೃತೀಯ ಭಾಷೆ ಹಿಂದಿ ಆಗಿದ್ದರೂ, ಪಾಠ ಮಾಡಲು ಶಿಕ್ಷಕರಿರಲಿಲ್ಲ. ಪಿಟಿ ಮಾಸ್ಟರ್ ಪ್ರಶ್ನೋತ್ತರಗಳನ್ನು ಬರೆಸಿ ಹೇಗೋ ಎಸ್.ಎಸ್ ಎಲ್.ಸಿ ಎಕ್ಸಾಮ್‍ನಲ್ಲಿ ಹಿಂದಿ ಪಾಸ್ ಮಾಡಿಸಿದ್ದರು. ಹಿಂದಿ ಸರಿಯಾಗಿ ಬರುತ್ತಿರಲಿಲ್ಲವಾದರೂ ಬೈಗುಳಗಳು ಮಾತ್ರ ಅರ್ಥವಾಗುತ್ತಿತು. ಪ್ರಾರಂಭದಲ್ಲಿ ಏನು ಬೈದರು ಎಂದು ಅರ್ಥವಾಗುತ್ತಿರಲಿಲ್ಲವಾದರೂ ಬೈಗುಳ ಎಂದು ತಿಳಿಯುತ್ತಿತ್ತು. ಆಗೆಲ್ಲ ಹತ್ತಿರದವನ ಹತ್ತಿರ ಏನು ಬೈಯುತ್ತಿದ್ದಾರೆ ಎಂದು ಕೇಳಿ ಅರ್ಥಮಾಡಿಕೊಳ್ಳುತ್ತಿದ್ದರು. ಮನೆಗೆ ಕರೆ ಮಾಡಿ ಮಾತನಾಡಬೇಕೆಂದರೆ ಎಸ್ ಟಿ ಡಿ ಬೂತ್ ಪಕ್ಕದಲ್ಲೇ ಇತ್ತು. ಟ್ರೈನಿಂಗ್ ನಲ್ಲಿ ಇದ್ದ ಹುಡುಗರಿಗೆ ಸುಮಾರು ಎರಡು ಗಂಟೆ ಹೊತ್ತು ಮಾತನಾಡಲು ಎರಡು ಮೂರು ದಿನಕ್ಕೊಮ್ಮೆ ಬಿಡುತ್ತಿದ್ದರು. ಆದರೆ ಆ ಸಮಯದಲ್ಲಿ ಸರತಿ ಸಾಲಿನಲ್ಲಿ ನಿಂದು ಮನೆಗೆ ಫೋನ್ ಹಾಯಿಸಬೇಕಿತ್ತು. ಮೊದಲು ಮಾತನಾಡಲು ಹೋದವನು ಬಹಳ ಹೊತ್ತು ಮಾತನಾಡಿದರೆ ಸಾಲಿನಲ್ಲಿ ಹಿಂದೆ ನಿಂತವನಿಗೆ ಅವಕಾಶವೇ ಸಿಗುತ್ತಿರಲಿಲ್ಲ. ಕೆಂಚಪ್ಪನವರು ಊರಿನಲ್ಲಿದ್ದ ತಮ್ಮ ಗೆಳೆಯನಿಗೆ ಕಾಲ್ ಮಾಡಿ ಅಮ್ಮನಿಗೆ ಒಂದು ಟಾಟಾದ ಫೋನ್ ತೆಗೆದುಕೊಂಡುವಂತೆ ಹೇಳಿದರು. ನಂತರ ಅವಕಾಶ ಸಿಕ್ಕಾಗ ಅಮ್ಮನಲ್ಲಿ ಮಾತನಾಡುತ್ತಿದ್ದರು. ಟ್ರೈನಿಂಗ್ ಬೆಳಗಾವಿಯಲ್ಲಿ ಇದ್ದುದರಿಂದ ಅಲ್ಲಿದ್ದ ಎಸ್ ಟಿ ಡಿ ಬೂತ್‌ನವರು "ನಮ್ಮ ಹುಡುಗ, ಕನ್ನಡದವನು" ಎಂದು ಸಾಲಿನಲ್ಲಿ ಮುಂದೆ ನಿಲ್ಲುವಂತೆ ಮಾಡುತ್ತಿದ್ದರು. ಟ್ರೈನಿಂಗ್‌ನಲ್ಲಿ ಹಿಂದಿ ಭಾಷಿಕರು ಆರಾಮವಾಗಿ ಮಾತನಾಡಿಕೊಂಡಿರುತ್ತಿದ್ದರು. ಆದರೆ ಕೆಂಚಪ್ಪನವರು ಹಾಗು ಅವರಂತೆ ಉಳಿದ ಹಿಂದಿ ಬಾರದವರು ಮಾತನಾಡಲಾಗದೇ ಕಷ್ಟಪಡುತ್ತಿದ್ದರು. ಆಗೆಲ್ಲಾ ಮಾತನಾಡಲು ಸಿಗುತ್ತಿದ್ದವರು ಕಸ ಗುಡಿಸುವವರು, ಪಕ್ಕದ ಅಂಗಡಿಯವರು, ಗಾರ್ಡನ್ ನೋಡಿಕೊಳ್ಳುವವರು, ಹೀಗೆ ಅಲ್ಲಿನ ಕೆಲಸಗಾರರು. ಹೇಗೋ ಮೂರು ತಿಂಗಳಿನ ಟ್ರೈನಿಂಗ್ ಸಾಂಬ್ರದಲ್ಲಿ ಮುಗಿಯಿತು. ಇದು ಏರ್ ಫೋರ್ಸ್‌ನ ಎಲ್ಲಾ ಟ್ರೇಡ್‌ಗಳಿಗೆ ಸೆಲೆಕ್ಟ್ ಆದ ಹುಡುಗರಿಗೆ ನೀಡುತ್ತಿದ್ದ ಸಾಮಾನ್ಯ ತರಬೇತಿ. ಇದಾದ ನಂತರ ಗರುಡ್ ಕಮಾಂಡೋಗೆ ಆಯ್ಕೆ ಆದವರಿಗೆ ಮತ್ತೆ ದೆಹಲಿಯ ಬಾಗ್‌ಪತ್‌ನಲ್ಲಿ ಇನ್ನೊಂದು ಟ್ರೈನಿಂಗ್ ಇತ್ತು.

   ಗರುಡ್ ಫೋರ್ಸ್‌ಗೆ ಸೆಲೆಕ್ಟ್ ಆದವರು ‘ಗರುಡ್ ರೆಜಿಮೆಂಟಲ್ ಟ್ರೈನಿಂಗ್ ಸೆಂಟರ್‌’ (GRTC) ದೆಹಲಿಗೆ ತೆರಳುತ್ತಾರೆ. ಇಲ್ಲಿ ಮತ್ತೆ ತರಬೇತಿ ಪ್ರಾರಂಭವಾಗುತ್ತದೆ. ಇದೊಂದು ದೊಡ್ಡ ಕಾಡು ಪ್ರದೇಶವಾಗಿತ್ತು. ಹೆಚ್ಚು ಕಮ್ಮಿ ಐವತ್ತು- ಅರುವತ್ತು ಎಕ್ರೆ ಜಾಗ ಆಗಿತ್ತು.  ೨೦೦೬ ಡಿಸೆಂಬರ್ ೩೧ಕ್ಕೆ GRTCಗೆ ತಲುಪುತ್ತಾರೆ. ಡಿಸೆಂಬರ್ ಜನವರಿ ಅಂತೂ ಉತ್ತರ ಭಾರತದಲ್ಲಿ ಅತೀ ಹೆಚ್ಚು ಚಳಿ ಇರುವ ಸಮಯ. ಕೆಂಚಪ್ಪರು ಸೇರಿದಂತೆ ಬೆಳಗಾವಿಯ ಹುಡುಗರ್‍ಯಾರೂ ಅದುವರೆಗೂ ಅಂತಹ ಚಳಿಯನ್ನು ಅನುಭವಿಸಿರಲಿಲ್ಲ. ದೆಹಲಿಗೆ ತಲುಪುತ್ತಲೇ ಚಳಿ ಇವರನ್ನೆಲ್ಲಾ ಬರಮಾಡಿಕೊಂಡಿತ್ತು. ಬೆಳಗಾವಿಯಿಂದ ನವದೆಹಲಿ ರೈಲ್ವೇ ನಿಲ್ದಾಣ ತಲುಪಿ ಅಲ್ಲಿ ರೈಲು ಇಳಿದ ಕೂಡಲೇ  ಏರ್‌ಫೋರ್ಸ್‌ನ ಬಸ್ಸೊಂದು ಅಲ್ಲಿಗೆ ಬಂದಿತ್ತು. ಇವರ ಟ್ರಂಕ್ ಬಾಕ್ಸ್‌ಗಳನ್ನು ವಸ್ತುಗಳನ್ನು ಎಲ್ಲಾ ಮೇಲಿಟ್ಟು ಇವರೆಲ್ಲಾ ಆರಾಮವಾಗಿ ಬಸ್ ಒಳಗಡೆ ಕುಳಿತುಕೊಂಡಿದ್ದರು. ಬಸ್‌ ಸಿಟಿ ಬಿಟ್ಟು ಹಳ್ಳಿ ಪ್ರದೇಶವನ್ನು ತಲುಪಿತು, ಮಾರ್ಗದ ಮಧ್ಯೆ ಎಮ್ಮೆಗಳ ಹಿಂಡು, ಸುತ್ತಲೂ ಹಸುರಿನ ಗದ್ದೆ ಕಾಣುತ್ತಿತ್ತು. ಟ್ರೈನಿಂಗ್ ಸೆಂಟರ್‌ನಲ್ಲಿ ಕೊಟ್ಟಿದ್ದ ಒಂದು ಸ್ವೆಟರ್ ಟೋಪಿ ಮತ್ತೆ ಶೂಗಳನ್ನಷ್ಟೇ ಧರಿಸಿದ್ದರು.

  GRTCಗೆ ಹೋಗಿ ಇಳಿದ ಕೂಡಲೇ ವೆಲ್ಕಂ ಪೆರೇಡ್ ಇದೆ ಎಂದು ಹೇಳಿದ್ದರು. "ವೆಲ್ಕಂ ಪೆರೇಡ್‌ ಯಾವ ರೀತಿ ಇರಬಹುದು? ಹೂ ನೀಡಿ ಸ್ವಾಗತ ಕೋರಬಹುದೇ" ಎಂದೆಲ್ಲಾ ಯೋಚಿಸುತ್ತಾ ಕುಳಿತಿದ್ದರು, ಬಸ್ ಒಳಗಡೆ ಇದ್ದ ಹುಡುಗರು.

    ಆದರೆ ವೆಲ್ಕಂ ಪಿರೇಡ್‌ನ ಕಥೆಯೇ ಬೇರೆಯಾಗಿತ್ತು. ಎಲ್ಲಾ ಹುಡುಗರಲ್ಲಿ ಒಂದು ಟ್ರಂಕ್ ಬಾಕ್ಸ್ ಇತ್ತು, ಜೊತೆಗೆ ಕಿಟ್ ಬ್ಯಾಗ್‌ ಇರುತ್ತಿತ್ತು. ಎಲ್ಲಾ ಸೇರಿ ಐವತ್ತು-ಅರುವತ್ತು ಕೆಜಿ ಭಾರ. ಇದನ್ನು ಹಿಡಿದುಕೊಂಡು ಅಲ್ಲಿದ್ದ ಗ್ರೌಂಡ್‌ಗೆ ಓಡಲು ಹೇಳುತ್ತಾರೆ. ಒಬ್ಬಬ್ಬರೂ ಒಂದೊಂದು ರೀತಿಯಲ್ಲಿ ಕಷ್ಟ ಪಡುತ್ತಾ, ಹೇಗೇಗೋ ಆ ಬಾಕ್ಸ್ ಮತ್ತು ಬ್ಯಾಗ್‌ನ್ನು ಹೊತ್ತುಕೊಂಡು ಓಡಲು ಪ್ರಾರಂಭಿಸಿದರು. ಹೀಗಿತ್ತು ಗರುಡ್‌ ಕಮಾಂಡೋಗಳ ವೆಲ್ಕಂ ಪೆರೇಡ್. ಜನವರಿಯ ಆ ಕೊರೆಯುವ ಚಳಿಯಲ್ಲಿಯೂ ಎಲ್ಲರೂ ಬೆವರುತ್ತಿದ್ದರು. ನಂತರ ಎಲ್ಲರಿಗೂ ಉಳಿದುಕೊಳ್ಳಲು ರೂಮ್ ಕೊಟ್ಟರು. ಸ್ವಲ್ಪ ಹೊತ್ತಿನ ನಂತರ ಟ್ರೈನಿಂಗ್ ಕಮಾಂಡೆಂಟ್ ಎಲ್ಲರನ್ನೂ ಭೇಟಿ ಮಾಡಲು ಬರ ಹೇಳಿದ್ದರು.  "ಓಹ್ ಕಮಾಂಡೆಂಟ್ ಬರಕ್ ಹೇಳ್ಯಾರ, ಏನ್ ಹೇಳ್ತಾರೆ, ವಿಂಗ್ ಕಮಾಂಡರ್ ಅಂತಿ ಅವ್ರು" ಅಂದುಕೊಂಡು ಕುತೂಹಲದಿಂದ ಹೋಗಿದ್ದರು. ಹೋದ ಕೂಡಲೇ ಬೈಗುಳಗಳ ಮಳೆಗರೆದರು. "ನಾವೇನ್ ಮಾಡೀದೀವಪ್ಪ, ಹಿಂಗ್ಯಾಕ್ ಬೈಯಾಕ್ ಹತ್ಯಾರ" ಎಂದು ಯೋಚಿಸುತ್ತಿರುವಾಗಲೇ ಅಲ್ಲೇ ಇದ್ದ ಇಟ್ಟಿಗೆಯ ರಸ್ತೆಯಲ್ಲಿ 'ನಕ್ಕಲ್ ಬೆಂಡ್' (ಕೈ ಬೆರಳುಗಳನ್ನು ಮಡಿಸಿ ಮುಷ್ಟಿ ಮಾಡಿ ಇಟ್ಟಿಗೆಯ ರಸ್ತೆಯ ಮೇಲೆ ಊರಿ, ಪುಶ್ ಅಪ್) ಮಾಡಬೇಕು ಎಂದರು. ಅಂಗೈಯ ಹಿಂಬದಿ, ಮಣಿಗಂಟೆಲ್ಲಾ ರಕ್ತ ಸುರಿಯಲು ಪ್ರಾರಂಭವಾಯಿತು. ಇದಾದ ನಂತರ ಇಂತಹುದೇ ಅನೇಕ ರೀತಿಯ ಟಾಸ್ಕ್ ಗಳನ್ನು ಮಾಡಿಸಿದರು. ಈ ರೀತಿ ಪ್ರಾರಂಭವಾದ ಟ್ರೈನಿಂಗ್ ಪ್ರತಿದಿನವೂ ಇಂತಹದ್ದೇ ಕಠಿಣ ಟಾಸ್ಕ್‌ಗಳನ್ನು ಒಳಗೊಂಡಿತ್ತು. ದಿನ ಪೂರ್ತಿ ಇಂತಹ ಟ್ರೈನಿಂಗ್ ಗಳನ್ನು ಮಾಡಿ ದೇಹವು ದಣಿದಿರುತ್ತದೆ, ಆದರೂ ರೆಸ್ಟ್ ಇರುತ್ತಿರಲಿಲ್ಲ, ರಾತ್ರಿ ಎಂಟು ಗಂಟೆಯ ಹೊತ್ತಿಗೆ ಮತ್ತೆ 'ಕೌಂಟಿಗ್ ಡ್ರಿಲ್' ಎಂದು ಇರುತ್ತಿತ್ತು. ರಾತ್ರಿ ಎರಡು ಗಂಟೆಯ ತನಕ 'ನೈಟ್ ರೋಲ್ ಕಾಲ್' ಇರುತ್ತಿತ್ತು. ಯಾವುದೇ ಸಮಯದಲ್ಲಿ ಯಾರನ್ನು ಬೇಕಾದರೂ ಕರೆಯುತ್ತಿದ್ದರು. ಒಟ್ಟಿನಲ್ಲಿ ಇವರುಗಳ ತಾಳ್ಮೆಯ ಪರೀಕ್ಷೆ ಆಗುತ್ತಿತ್ತು. ಒಮ್ಮೊಮ್ಮೆ ಎಂತಹ ಕಠಿಣ ಟಾಸ್ಕ್‌ಗೆ ಒಡ್ಡುತ್ತಿದ್ದರು ಎಂದರೆ, ಎರಡು ಕಾಲನ್ನು ಒಟ್ಟಿಗೆ ನೆಲದ ಮೇಲೆ ಇಡುವಂತೆಯೇ ಇಲ್ಲ. ನಿಂತಲ್ಲೇ ನಿಂತುಕೊಂಡು ಒಂದು ಕಾಲು ಎತ್ತುವುದು ಮತ್ತೊಂದು ಕಾಲು ನೆಲದಲ್ಲಿಡುವುದು, ಮತ್ತೆ ಪುನಃ ಎತ್ತಿದ ಕಾಲು ನೆಲದಲ್ಲಿಡುವುದು, ನೆಲದಲ್ಲಿ ಇದ್ದ ಕಾಲನ್ನು ಎತ್ತುವುದು, ತುಂಬಾ ಹೊತ್ತು ಹೀಗೆಯೇ ಮಾಡುತ್ತಿರಬೇಕು. ಇದರ ಜೊತೆಗೆ ಟ್ರೈನರ್‌ಗಳು, ಹೇಳಿದ್ದನ್ನೇ ಹೇಳುತ್ತಿರುತ್ತಾರೆ, ಅದನ್ನೇ ಕೇಳುತ್ತಿರಬೇಕು. ಅಷ್ಟು ಟಫ್‌ನೆಸ್ ಬರಲೇ ಬೇಕು. ಇಲ್ಲಿ ದೈಹಿಕ ಶಕ್ತಿಗಿಂತ ಮಾನಸಿಕ ಶಕ್ತಿ ಹೆಚ್ಚಿರಬೇಕು. ಹೀಗಾಗಿ ಈ ಟ್ರೈನಿಂಗ್ ನಿಂದ ತಾಳ್ಮೆಯ ಗುಣ ಹೆಚ್ಚಾಗುತ್ತದೆ. ಈ ಟ್ರೈನಿಂಗ್‌ಗಳನ್ನು ಮಾಡುವ ಸಂದರ್ಭದಲ್ಲಿ ಹಲವು ಬಾರಿ ಕೆಂಚಪ್ಪನವರಿಗೆ ಅನಿಸಿತ್ತು "ನಾವು ಯಾವ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೋ, ಈ ಟ್ರೇಡ್ ‌ಗೆ ಬಂದಿದೇವೆ." ಎಂದು. ಕಾರಣ ಇಷ್ಟೇ ಕೆಲವು ಟ್ರೇಡ್ ಗಳಲ್ಲಿ ಆರು ತಿಂಗಳಿನಲ್ಲೇ ಟ್ರೈನಿಂಗ್ ಮುಗಿದು, ಎರಡು ವರ್ಷಕ್ಕೆಲ್ಲಾ ಮೇಲಿನ ರ್‍ಯಾಂಕ್ ಸಿಗುತ್ತಿತ್ತು.

   ಇಲ್ಲಿ ಮೂರು ತಿಂಗಳು ಟ್ರೈನಿಂಗ್ ಮಾಡುತ್ತಾರೆ. ಈ ಮೂರು ತಿಂಗಳು ತುಂಬಾ ಚಳಿ ಇತ್ತು. ರಾತ್ರಿ ಏರ್‌ಫೋರ್ಸ್‌ನಿಂದ ಕೊಟ್ಟ ಎರಡು ಕಂಬಳಿಗಳನ್ನು ಹೊದ್ದು ಬೆಡ್ ಮೇಲೆ ಮಲಗಿದರೆ, ಚಳಿ ಚಳಿ ಇರುವ ನೀರು ತಂದು ಯಾರೋ ಕಂಬಳಿ ಮೇಲೆ ಸುರಿಯುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿತ್ತು. ಕಿಟ್ ಬ್ಯಾಗ್‌ನಲ್ಲಿ ಕೆಲವೊಂದು ಡ್ರೆಸ್ ಕೊಟ್ಟಿದ್ದರು. ಮೈಗಂಟುವಂತಹ ಬಟ್ಟೆ (ಚಳಿಗಾಲದಲ್ಲಿ ಇನ್ನರ್ ವೇರ್ ಅಂತ ಧರಿಸುತ್ತಾರೆ, ಉಲಾನ್ ಬಟ್ಟೆ ಅದು, ದೇಹವನ್ನು ಬೆಚ್ಚಗಿಡುತ್ತದೆ, ಇದರ ಮೇಲಿನಿಂದ ಡೈಲಿ ವೇರ್ ಧರಿಸಿ ಮತ್ತೆ ಸ್ವೆಟರ್ ಧರಿಸುತ್ತಾರೆ) ಇದರ ಪರಿಚಯ ಇಲ್ಲದ ಹುಡುಗರು, "ಇದೇನಿದು ಲೇಡಿಸ್ ಬಟ್ಟೆ ತರ ಇದಾವು" ಅಂದುಕೊಂಡರು. ಆಮೇಲೆ ಬಹಳ ದಿನಗಳ ನಂತರ ಉಳಿದ ಹುಡುಗರು ಧರಿಸುವುದನ್ನು ನೋಡಿ "ಓ ಇದು ಇನ್ನರ್ ವೇರ್, ಇದನ್ನ ಹಾಕೋಬೇಕು, ಆ ಮ್ಯಾಕೆ ಯುನಿಫಾರ್ಮ್ ಹಾಕೋಬೇಕು, ಹೊರಗಡೆ ಬಾಳ ಥಂಡಿ ಇರ್ತೈತಿ" ಅಂತ ಅರ್ಥ ಆಯಿತು. ಸ್ನಾನಕ್ಕೆ ಹೋದರೆ, ಬಾತ್‌ರೂಮ್‌ನಲ್ಲಿ ಸಾಮೂಹಿಕ ಸ್ನಾನ. ಉತ್ತರ ಭಾರತದ ಹುಡುಗರು ಸ್ನಾನ ಮಾಡುವುದು ನೋಡಿ ಇವರಿಗೆಲ್ಲಾ ಆಶ್ಚರ್ಯವಾಯಿತು. ಕೆಂಚಪ್ಪನವರ ಜೊತೆಗಿದ್ದ ಹುಡುಗನೊಬ್ಬ ಸ್ನಾನ ಮಾಡಿದ ನಂತರ ತನ್ನ ಕೈಕಾಲು, ಮೈ-ಮುಖಗಳಿಗೆ ಸಾಸಿವೆ ಎಣ್ಣೆ ಹಚ್ಚಿಕೊಂಡ. "ಜಳಕ ಆದ್ ನಂತ್ರ ಹೋಗ್ಬೇಕಲ ಇನ್ನ, ಮತ್ತೆ ಎಣ್ಣೆ ಹಚ್ಕೊಂಡು ಜಳಕ ಮಾಡ್ತಾನೇನೂ?" ಕೆಂಚಪ್ಪನವರಿಗೆ ಒಂದೂ ಅರ್ಥವಾಗಲಿಲ್ಲ. ಆಮೇಲೆ ತಿಳಿಯಿತು, ಸಾಸಿವೆ ಎಣ್ಣೆ ದೇಹವನ್ನು ಬಿಸಿಯಾಗಿಡುತ್ತದೆ, ಮತ್ತು ದೇಹದಲ್ಲಿನ ನೀರಿನ ಅಂಶ ಆರದಂತೆ ನೋಡಿಕೊಳ್ಳುತ್ತದೆ ಎಂದು. ನಂತರ ಇವರೂ ಅದೇ ರೀತಿ ಮಾಡತೊಡಗಿದರು.

    ಟ್ರೈನಿಂಗ್ ಸೆಂಟರ್‌ನಲ್ಲಿ ಪ್ರತಿದಿನ ಬೆಳಗ್ಗೆ ಹತ್ತು ಕಿ.ಮೀ, ಹದಿನೈದು ಕಿ.ಮೀ, ಇಪ್ಪತ್ತು ಕಿ.ಮೀ ಓಡುವುದು ಸಾಮಾನ್ಯವಾಯಿತು. ಟ್ರೈನಿಂಗ್ ಸೆಂಟರ್‌ನಲ್ಲಿ ಕಾಡು ಇದ್ದುದರಿಂದ ಪ್ರಾರಂಭದಲ್ಲಿ ತಾವು ಎಲ್ಲಿ ಓಡಿ ಎಲ್ಲಿಗೆ ತಲುಪುತ್ತಿದ್ದೇವೆ ಎಂದೇ ಅರ್ಥ ಆಗುತ್ತಿರಲಿಲ್ಲ. ಒಂದು ವಾರದ ನಂತರ ತಿಳಿಯಿತು, ಅಲ್ಲೇ ರೌಂಡ್ ಹೊಡೆಯುತ್ತಾ ಓಡುತ್ತಿದ್ದೇವೆ ಎಂದು. ಈ ಓಟ ಸುಮ್ಮನೆ ನಾವು ನೀವು ಓಡಿದಂತೆ ಅಲ್ಲ, ಮಣ ಗಟ್ಟಲೆ ಭಾರವನ್ನು ಹೊತ್ತುಕೊಂಡು ಓಡಬೇಕಾಗಿತ್ತು. ಹದಿನೆಂಟು ಕೆ.ಜಿ ಮರಳು (ಹೊಯ್ಗೆ) ತುಂಬಿದ ಬ್ಯಾಗ್ ಬೆನ್ನ ಮೇಲೆ ಇರುತ್ತಿತ್ತು. ಕೈಯಲ್ಲಿ ಒಂದು ವೆಪನ್ ಇದ್ದೇ ಇರುತ್ತದೆ. ಹೆಚ್ಚು ಕಮ್ಮಿ ಮೂವತ್ತೈದು ಕೆ.ಜಿಯಷ್ಟು ಭಾರ ಹೊತ್ತ  ಓಟ ಗರುಡ್ ಕಮಾಂಡೋ ಟ್ರೈನೀಗಳದ್ದು. ಬ್ಯಾಗ್‌ ಹಾಕಿದ ಜಾಗದಲ್ಲಿ ಚರ್ಮ ಕಿತ್ತು ಬರುತ್ತಿತ್ತು. ಆ ಕಲೆಗಳು ಇಂದಿಗೂ ತನ್ನ ಮೈಮೇಲೆ ಇದೆ ಎನ್ನುತ್ತಾರೆ ಕೆಂಚಪ್ಪನವರು. ಕಮಾಂಡೋ ಟ್ರೈನಿಂಗ್‌ನಲ್ಲಿ ಯಾರೊಬ್ಬರೂ ಬ್ಯಾಕ್ ಸ್ಲೀಪಿಂಗ್ (ಬೆನ್ನನ್ನು ನೆಲಕ್ಕೆ ಮುಟ್ಟಿಸಿ ಮಲಗುವುದು/ ಬೆನ್ನಲ್ಲಿ ಮಲಗುವುದು) ಮಾಡಲೇ ಇಲ್ಲ. ಮಾಡಲು ಸಾಧ್ಯವಿರಲಿಲ್ಲ, ಬೆನ್ನಲ್ಲಿ ಅಷ್ಟೊಂದು ಗಾಯಗಳಾಗಿದ್ದವು. ಈ ಟ್ರೈನಿಂಗ್‌ನಲ್ಲಿ ರೋಪ್‍ ಕ್ಲೈಂಬಿಂಗ್, ಬೇರೆ ಬೇರೆ ರೀತಿಯ ಒಬ್ಸ್ಟ್ಯಾಕ್ಲ್ಸ್ (obstacles), Battle crop drills, ಜಂಪ್ ಮಾಡುವುದು, ಬರ್ಮಾ ಬ್ರಿಜ್, ಬ್ಯಾಲೆನ್ಸ್ ನಡಿಗೆ, ರೋಪ್ ಲ್ಯಾಡರ್ ಕ್ಲೈಂಬಿಂಗ್, ಡಿಚ್ ಜಂಪ್ (ಎಲ್ಲವೂ ಭಾರ ಹೊತ್ತುಕೊಂಡೇ), ಜೊತೆಗಿದ್ದವನಿಗೆ ಬುಲೆಟ್ ಹಿಟ್ಟಾದರೆ ಅವನನ್ನು ಯಾವ ರೀತಿ ಕಾಪಾಡುವುದು, ಎತ್ತಿಕೊಂಡು ಬರುವುದು ಮೊದಲಾದ ಅನೇಕ ಟಾಸ್ಕ್‌ಗಳು ಇರುತ್ತವೆ. ಇದರ ಜೊತೆಗೆ ಪುಶಪ್ಸ್, ಪುಲಪ್ಸ್ ಮೊದಲಾದವು ಸರ್ವೇ ಸಾಮಾನ್ಯ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ಐದು ಗಂಟೆಗೆ ಗ್ರೌಂಡ್‌ಗೆ ಹೋಗಬೇಕಿತ್ತು. ಒಂದೂವರೆ ಎರಡು ಗಂಟೆ ಹೊತ್ತು ಪಿ.ಟಿ ಮಾಡಬೇಕು. ಅದಾದ ನಂತರ ಬೇರೆ ಬೇರೆ ಟಾಸ್ಕ್‌ಗಳು ಇರುತ್ತಿದ್ದವು. ಮಧ್ಯಾಹ್ನ ಒಂದು ಗಂಟೆಗೆಲ್ಲಾ ಬಿಡುತ್ತಿದ್ದರು, ನಂತರ ರೂಮ್‌ಗೆ ಹೋಗಿ ಸ್ನಾನ ಮಾಡಿ ಬ್ರೇಕ್‌ಫಾಸ್ಟ್/ಊಟ ಮಾಡಬೇಕಿತ್ತು. ಮಧ್ಯಾಹ್ನ ಮೇಲೆ ತಿಯರಿ ಕ್ಲಾಸ್‌ಗಳು ಇರುತ್ತಿತ್ತು. ಸ್ಯಾಂಡ್ ಬ್ಯಾಗ್‌ಗಳನ್ನು ಇಟ್ಟುಕೊಂಡು ಗಿಡ ಮರಗಳ ಮಧ್ಯ ಈ ಕ್ಲಾಸ್‌ಗಳು ನಡೆಯುತ್ತಿದ್ದವು, ಯಾವುದೇ ಕ್ಲಾಸ್‌ ರೂಮ್‌ಗಳು ಇರುತ್ತಿರಲಿಲ್ಲ. ಬೆಳಗ್ಗೆ ಬೇಗ ಎದ್ದು, ಎಕ್ಸ್‌ಸೈಸ್‌ಗಳನ್ನು ಮಾಡಿ ದಣಿದವರಿಗೆ ಮಧ್ಯಾಹ್ನದ ಊಟ ಮಾಡಿದಾಗ ನಿದ್ದೆ ತೂಕಡಿಸುತ್ತಿರುತ್ತದೆ. ಯಾರಾದರೂ ನಿದ್ದೆ ತೂಗಿದರೆ ಅಂತಹವರಿಗೆ ಮತ್ತೆ ಎಕ್ಸಸೈಸ್ ಮಾಡಿಸುತ್ತಿದ್ದರು, ಹೆಚ್ಚಾಗಿ ಒಬ್ಬ ಮಾಡಿದ ತಪ್ಪಿಗೆ ಎಲ್ಲರಿಗೂ ಶಿಕ್ಷೆ ಸಿಗುತ್ತಿತ್ತು 'one for all, all for one' ಎಂಬುದನ್ನು ಕೈಗೊಳ್ಳುತ್ತಿದ್ದರು. ಈ ಸಮಯದಲ್ಲಿ ಇನ್ನೊಂದು ಸಮಸ್ಯೆಯೂ ತಲೆದೂರುತ್ತಿತ್ತು. ಕೆಂಚಪ್ಪನವರನ್ನು ಸ್ಕ್ವಾಡನ್ ಸೀನಿಯರ್‌ಅನ್ನಾಗಿ ಮಾಡಿದ್ದರು. ಕೆಂಚಪ್ಪನವರಿಗೆ ಹಿಂದಿ ಸರಿಯಾಗಿ ಬರುತ್ತಿರಲಿಲ್ಲವಾದ್ದರಿಂದ ಉಳಿದವರ ಜೊತೆ ಕಮ್ಯುನಿಕೇಶನ್ ಮಾಡಲು ಕಷ್ಟವಾಗಿ ಗೊಂದಲ ಉಂಟಾಗುತ್ತಿತ್ತು. ಈ ಕಾರಣಕ್ಕೂ ಕೆಂಚಪ್ಪನವರು ಇನ್ಸ್ಟ್ರಕ್ಟರ್‌ಗಳಿಂದ ಹೆಚ್ಚಿನ ಶಿಕ್ಷೆ ಪಡೆಯುತ್ತಿದ್ದರು. ತಲೆ ಕೆಳಗೆ ಕಾಲು ಮೇಲೆ ಮಾಡಿ ನಿಲ್ಲಿಸುತ್ತಿದ್ದರು, ಇಂಸ್ಟ್ರಕ್ಟರ್ ಹೇಳುವ ತನಕ ಇಳಿಯುವಂತಿಲ್ಲ. ಅಥವಾ ಒಬ್ಬನನ್ನು ಮತ್ತೊಬ್ಬ ಹೊತ್ತುಕೊಂಡು ಓಡಬೇಕು ಹೀಗೆ ಬೇರೆ ಬೇರೆ ರೀತಿ ಮಾಡಿಸುತ್ತಿದ್ದರು. ಟ್ರೈನಿಂಗ್‌ನ ಮೂರು ತಿಂಗಳುಗಳಲ್ಲಿಯೂ ಒಂದು ಕ್ಷಣವೂ ಬೆವರು, ಮೈಯನ್ನು ಬಿಟ್ಟಿರಲಿಲ್ಲ. ನಿದ್ದೆಯೂ ಮರೀಚಿಕೆಯಾಗಿತ್ತು. ಮಲಗಲು ಸ್ವಲ್ಪವಾದರೂ ಸಮಯ ಸಿಕ್ಕರೆ ಸಾಕು ಅನಿಸುತ್ತಿತ್ತು.

   ಬೆಳಗಿನ ಓಟದ ನಂತರ ರೋಪ್ ಕ್ಲೈಂಬಿಂಗ್ ಮಾಡಿಸುತ್ತಿದ್ದರು. ಇದು ಸುಮಾರು ಆರೇಳು ಮೀಟರ್ ಉದ್ದದ ಬಳ್ಳಿಯನ್ನು ಹಿಡಿದು ಹತ್ತುವುದಾಗಿತ್ತು. ಒಂದು ದಿನ, ಎಲ್ಲರಿಗೂ ಸಾಕಾಗಿ ಹೋಗಿತ್ತು, ತುಂಬಾ ದಣಿದಿದ್ದರು, ಕೈ ಮೇಲೆ ಮಾಡಲು ಕೂಡಾ ಕಷ್ಟವಾಗುತ್ತಿತ್ತು, ಆದರೂ ಬಳ್ಳಿಯಲ್ಲಿ ಹತ್ತಲೇ ಬೇಕಿತ್ತು. ಕೆಳಗೆ ಬರುವಾಗ ಕಾಲನ್ನು ಬಳ್ಳಿಗೆ ಮುಟ್ಟಿಸುವಂತಿಲ್ಲ, ಕೇವಲ ಕೈಯ ಸಹಾಯದಿಂದ ಜಾರುತ್ತಾ ಬರಬೇಕು. ಇದರ ಅಭ್ಯಾಸ ನಿರಂತರವಾಗಿ ಮಾಡಿಸುತ್ತಾರೆ.  ಕೆಂಚಪ್ಪನವರ ಜೊತೆ ಸೆಲೆಕ್ಟ್ ಆಗಿದ್ದ ಅವರ ಸ್ನೇಹಿತ ಕೊಪ್ಪಳದ ಶರಣಪ್ಪ ಅಂಗಡಿ ರೋಪ್ ಕ್ಲೈಂಬಿಂಗ್ ಮಾಡುತ್ತಿರುತ್ತಾರೆ, ಇಂಸ್ಟ್ರಕ್ಟರ್ "ಹಾ ಬೇಟ, ಚಡ್‌ಜಾವೊ ಚಡ್‌ಜಾವೋ ವೆರಿ ಗುಡ್ ವೆರಿಗುಡ್" ಅಂತ ಹುರಿದುಂಬಿಸುತ್ತಿರುತ್ತಾರೆ. ಹದಿನೆಂಟು ಕೆ.ಜಿ ಭಾರದ ಸ್ಯಾಂಡ್ ಬ್ಯಾಗ್, ಒಂದು ವೆಪನ್ ಹಿಡಿದುಕೊಂಡು ಇಳಿಯುವ ಹೊತ್ತಿಗೆ, ಶರಣಪ್ಪನವರ ಕೈ ಸೋತು ಹೋಗುತ್ತದೆ, ಅಲ್ಲೇ ಕೈ ಬಿಟ್ಟು ಬಿಡುತ್ತಾರೆ, ಶರಣಪ್ಪನವರು ದೊಪ್ಪೆಂದು ನೆಲಕ್ಕೆ ಬಿದ್ದುಬಿಟ್ಟರು. ಎಲ್ಬೋ ಫ್ಯಾಕ್ಚರ್ ಆಗಿ, 'ಗರುಡ್' ನಿಂದ ಔಟ್ ಆಗುತ್ತಾರೆ. ಇಷ್ಟು ದಿನ ಇಷ್ಟೆಲ್ಲಾ ಕಷ್ಟ ಪಟ್ಟು ತಮ್ಮ ಬೆನ್ನನ್ನೂ ತೆತ್ತು ಕೊನೆಗೂ ಗರುಡ್ ಆಗದೇ ಉಳಿಯುವ ಇವರ ಮನಸ್ಥಿತಿ-ಪರಿಸ್ಥಿತಿ ಆಗ ಎಂತಹದ್ದಾಗಿರಬಹುದು. ಈ ರೀತಿಯ ಟ್ರೈನಿಂಗ್‌ಗಳಲ್ಲಿ ಅಷ್ಟೊಂದು ಕಷ್ಟ ಪಟ್ಟು ಕೊನೆಗೂ ಕಮಾಂಡೋಗಳಾದರೆ, ತಮ್ಮ ಕಷ್ಟಕ್ಕೆ ಫಲ ಸಿಕ್ಕಿತಲ್ಲಾ ಎಂಬ ನೆಮ್ಮದಿಯಾದರೂ ಇರುತ್ತದೆ. ಕಮಾಂಡೋ ಎಂಬ ಹೆಮ್ಮೆಯಾದರೂ ಇರುತ್ತದೆ. ಆದರೆ ಶರಣಪ್ಪನಂತಹವರ ಕಷ್ಟಕ್ಕೆ ಏನೂ ಸಿಗದೆ ಹೋಗುತ್ತದೆ. ಕೊನೆಗೆ ಎರಡು ಮೂರು ವರುಷಗಳ ಚಿಕಿತ್ಸೆಯ ನಂತರ ಶರಣಪ್ಪ ಏರ್‌ಫೋರ್ಸ್ ನ ಬೇರೆ ಟ್ರೇಡ್‌ನಲ್ಲಿ ಸೇರುತ್ತಾರೆ.

  ಶರಣಪ್ಪನವರು ಔಟ್ ಆದ ನಂತರ ಕರ್ನಾಟಕದಿಂದ ಬಂದವರಲ್ಲಿ ಒಟ್ಟು ಮೂರು ಜನ ಉಳಿದುಕೊಳ್ಳುತ್ತಾರೆ. ಒಟ್ಟು ಎಂಟು ಬಿಪಿಇಟಿ ಇರುತ್ತದೆ, ಅದರಲ್ಲಿ ಎರಡು ಮೂರು ಬಿಪಿಇಟಿ ( Battle Physical Efficiency Test ದೈಹಿಕ ಶಕ್ತಿಯನ್ನು ಮಾನದಂಡ, ಬೇರೆ ಬೇರೆ ಈವೆಂಟ್‌ಗಳು ಇರುತ್ತದೆ, ಎರಡು ಕಟ್ಟಡಗಳ ಮಧ್ಯ ರೋಪ್ ಕಟ್ಟಿ ಅದರಲ್ಲಿ ಮಂಕಿ ಕ್ರಾವ್ಲ್, ವರ್ಟಿಕಲ್ ರೋಪ್, ಹೊರಿಜಾಂಟಲ್ ರೋಪ್ ಕ್ರಾವಲ್, ಒಂಬತ್ತು ಫೂಟ್ ಗುಂಡಿಯನ್ನು ಹಾರುವುದು, ೧೦೦ ಮೀ ಸ್ಪ್ರಿಂಟ್) ಪಾಸ್ ಮಾಡಲಾಗದೇ  ಫಸ್ಟ್ ಫೇಸ್‌ನಲ್ಲಿ ಕೆಂಚಪ್ಪನವರು ಹಿಂದುಳಿಯುತ್ತಾರೆ. ಇಲ್ಲಿ ಎಲ್ಲದಕ್ಕೂ ಸಮಯ ನಿಗದಿಯಾಗಿರುತ್ತದೆ, ಒಂದು ಈವೆಂಟ್‌‌ನಲ್ಲಿ ಒಂದು ಸೆಕೆಂಡ್ ತಡವಾದರೂ ಎಲ್ಲವೂ ಫೇಲ್ ಎಂದು ನಿರ್ಧರಿಸಲಾಗುತ್ತದೆ. ಹೀಗಾಗಿ ಈ ಕಮಾಂಡೋ ಟ್ರೈನಿಂಗ್ ಅನ್ನು ಕೆಂಚಪ್ಪನವರು ಮತ್ತೆ ರಿಪೀಟ್ ಮಾಡಬೇಕಾಗುತ್ತದೆ. ಮತ್ತೆ ಮೂರು ತಿಂಗಳು ಅಲ್ಲೇ ಉಳಿದು ಈ ಎಲ್ಲಾ ಟಾಸ್ಕ್‌ಗಳನ್ನು ಮತ್ತೆ ಮಾಡಬೇಕು. ಆಗೆಲ್ಲಾ, ಒಮ್ಮೆ ಪಾಸ್ ಆಗದವರನ್ನು ಸುಲಭವಾಗಿ ಬೇರೆ ಟ್ರೇಡ್‌ಗೆ ಕಳುಹಿಸುತ್ತಿರಲಿಲ್ಲ, ಮತ್ತೆ ಮತ್ತೆ ಟ್ರೈನಿಂಗ್ ಕೊಡುತ್ತಿದ್ದರು. ಔಟ್ ಆಗುವುದಾದರೆ ಶರಣಪ್ಪನವರ ರೀತಿ ಮೆಡಿಕಲ್ ಕಂಡಿಷನ್ ಸರಿ ಇಲ್ಲದೇ ಹೋಗಬೇಕು. ಆದರೆ ಈಗ ಹಾಗಿಲ್ಲ, ನನ್ನಿಂದ ಸಾಧ್ಯ ಇಲ್ಲ ಎಂದರೆ ಬಿಟ್ಟು ಬಿಡುತ್ತಾರೆ. ಫಸ್ಟ್ ಫೇಸ್ ಟ್ರೈನಿಂಗ್ ಮಾರ್ಚ್ ಗೆ ಮುಗಿದಿರುತ್ತದೆ. ಮತ್ತೆ ಸಮ್ಮರ್ ಸೆಷನ್. ಎಪ್ರಿಲ್ ಮೇ ಜೂನ್ ನ ಸೆಷನ್‌ನಲ್ಲಿ ಎಕ್ಸಲೆಂಟ್ ಆಗಿ ಕೆಂಚಪ್ಪನವರು ಟ್ರೈನಿಂಗ್ ಮುಗಿಸುತ್ತಾರೆ. ಈ ಎರಡೂ ಸೆಷನ್ ಮಧ್ಯದಲ್ಲಿ ಕೆಂಚಪ್ಪನವರ ಕಾಲಿಗೆ ಏಟಾಗಿ ಮಿಲಿಟರಿ ಹಾಸ್ಪಿಟಲ್‌ನಲ್ಲಿ ಇಪ್ಪತ್ತು ದಿನ ಅಡ್ಮಿಟ್ ಆಗುತ್ತಾರೆ. 

   ಇದಾದ ನಂತರ ಅಡ್ವಾನ್ಸ್ಡ್ ಟ್ರೈನಿಂಗ್ ಇರುತ್ತದೆ. (Advanced training), ಇದಾಗಿ ಕಮಾಂಡೋ ಟ್ರೈನಿಂಗ್. ಇಲ್ಲಿ ಸರ್ವೈವಲ್ ಸೆಶನ್ ಎಂಬ ಪ್ರತ್ಯೇಕವಾದ ಒಂದು ಸೆಶನ್ ಇರುತ್ತದೆ.  ಒಂದು ವೇಳೆ ಯುದ್ಧದ ಸಂದರ್ಭದಲ್ಲಿ ಶತ್ರು ದೇಶದ ಸೈನಿಕರ ಕೈಯಲ್ಲಿ ಕೈದಿಯಾಗಿ ಸಿಕ್ಕಿ ಬಿಟ್ಟರೆ (POW) ಅವರು ಯಾವ ರೀತಿ ಹಿಂಸಿಸುತ್ತಾರೆ  ಎಂಬುದರ ಚಿಕ್ಕ ಚಮಕ್ ತೋರಿಸುತ್ತಾರೆ. ಆ ಸಂದರ್ಭದಲ್ಲಿ ದೇಶದ ಬಗೆಗಿನ ಯಾವುದೇ ಮಾಹಿತಿ ಶತ್ರು ದೇಶದ ಸೈನಿಕರಿಗೆ ಬಿಟ್ಟು ಕೊಡಬಾರದು, ಅಷ್ಟು ಸಹನಾ ಶಕ್ತಿ ಇರಬೇಕಾಗುತ್ತದೆ, ಹೀಗಾಗಿ ಈ ಟ್ರೈನಿಂಗ್.  ಇಲ್ಲಿ ಮೂರು ದಿನ ಊಟ ಕೊಡುವುದಿಲ್ಲ, ಒಂದು ಬಾಟಲ್ ನೀರು, ಒಂದು ಕೋಳಿ ಅಥವ ಒಂದು ಆಡನ್ನು (ಮೇಕೆ) ಕೊಟ್ಟು ನಾಲ್ಕು ಜನರ ಒಂದು ತಂಡ ಮಾಡಿ ಕಾಡಿಗೆ ಕಳುಹಿಸುತ್ತಾರೆ. ಕಾಡಲ್ಲಿ ಹೊಟ್ಟೆಗೇನಾದರೂ ಬೇಕು ಅನಿಸಿದರೆ ಈ ಆಡು ಅಥವಾ ಕೋಳಿಯನ್ನು ಕಟ್ಟಿಗೆ ಸಂಗ್ರಹಿಸಿ, ಕಲ್ಲುಗಳನ್ನು ಉಜ್ಜಿ ಬೆಂಕಿ ತಯಾರಿಸಿ  ಬೇಯಿಸಿಕೊಂಡಾದರೂ ತಿನ್ನಬಹುದು ಅಥವಾ ಹಸಿಯಾದರೂ ತಿನ್ನಬಹುದು  ಎನ್ನುತ್ತಾರೆ ಇಂಸ್ಟ್ರಕ್ಟರ್ಸ್. ಇದರ ಜೊತೆಗೆ ನೇವಿಗೇಷನ್ ಎಕ್ಸಸೈಸ್ ಎಂಬುದೊಂದಿರುತ್ತದೆ. ಇದರಲ್ಲಿ ಒಂದು ಮ್ಯಾಪ್ ಕೊಡುತ್ತಾರೆ. ನಿಗದಿತ ಸಮಯದ ಒಳಗೆ ಮೂವತ್ತು- ಐವತ್ತು ಕಿ.ಮೀ ದೂರದಲ್ಲಿನ ಸ್ಥಳವನ್ನು ಈ ಮ್ಯಾಪ್‌ನ ಸಹಾಯದಿಂದ ತಲುಪಬೇಕು. ಈ ಹಾದಿ ಸುಲಭದ್ದಾಗಿರುವುದಿಲ್ಲ, ಕೆಲವು ಕಡೆ ದಾರಿಯೇ ಇರುವುದಿಲ್ಲ, ಗುಂಡಿ ಹಾರಿ, ಗುಡ್ಡ ಹತ್ತಿ ನದಿಯನ್ನು ಈಜಿ ಹೇಗಾದರೂ ಹೋಗಬೇಕು, ಹೋದರೆ ಪಾಸ್, ಇಲ್ಲದಿದ್ದರೆ ಫೇಲ್. ಇದಾದ ನಂತರ ಡೆಮೋಲಿಶನ್ ಹೇಳಿಕೊಡುತ್ತಾರೆ. ಬಾಂಬ್ ತಯಾರಿಸುವುದು ಹೇಗೆ, ಸರ್ಕ್ಯೂಟ್‌ಗಳು ಹೇಗಿರಬೇಕು, ಕಟ್ಟಡಗಳನ್ನು ಕೆಡವಬೇಕಾದರೆ ಎಲ್ಲೆಲ್ಲಿ ಬಾಂಬ್ ಇಡಬೇಕು, ಬ್ರಿಜ್‌ನ್ನು ಬ್ಲಾಸ್ಟ್ ಮಾಡುವುದು ಹೇಗೆ? ಈ ರೀತಿಯ ಟ್ರೈನಿಂಗ್‌ಗಳು ಇರುತ್ತವೆ. ನಂತರ ಮೆಡಿಕಲ್ ಎಮರ್ಜೆನ್ಸಿ ಆದರೆ ಜೊತೆಗಿದ್ದ ಕಮಾಂಡೋಗೆ ಹೇಗೆ ಚಿಕಿತ್ಸೆ ನೀಡಬೇಕು, ಪ್ರಥಮ ಚಿಕಿತ್ಸೆ, ನರ್ಸಿಂಗ್ ಕುರಿತಾದ ಟ್ರೈನಿಂಗ್ ನೀಡಲಾಗುತ್ತದೆ. ಇದಿಷ್ಟು ಅಡ್ವಾನ್ಸ್ಡ್ ಟ್ರೈನಿಂಗ್ ಬಗ್ಗೆ. ಮುಂದೆ ಕಮಾಂಡೋ ಟ್ರೈನಿಂಗ್.

   ಸ್ಪೆಷಲ್ ಗ್ರೂಪ್ ಟ್ರೈನಿಂಗ್ ಸೆಂಟರ್‌ನಲ್ಲಿ ಕಮಾಂಡೋ ಟ್ರೈನಿಂಗ್ (ಸ್ಪೆಶಲ್ ಫ್ರಂಟಿ ಏರ್‌ಫೋರ್ಸ್) ಇತ್ತು. ಒಂದು ಕಾಡಿನಲ್ಲಿ ಟೆಂಟ್ ಹಾಕಿಕೊಂಡು, ಅಲ್ಲೇ ಅಡಿಗೆ ಊಟ ಎಲ್ಲಾ ಮಾಡಿಕೊಂಡು ಇರಬೇಕಿತ್ತು, ಇದು ಜಂಗಲ್ ಟ್ರೈನಿಂಗ್. ಇದು ಹಿಂದಿ ಸಿನೆಮಾ ‘ಟ್ಯಾಂಗೋ ಚಾರ್ಲಿ’ಯಲ್ಲಿ ತೋರಿಸಿದಂತೆ ಇರುತ್ತದೆ. ಮೊದಲಿನಂತೆಯೇ ಫಿಸಿಕಲ್ ಹಾಗೂ ಮೆಂಟಲ್ ಟಾರ್ಚರ್‌ಗಳು ಇದ್ದೇ ಇರುತ್ತವೆ. ನಡುರಾತ್ರಿ ಎಬ್ಬಿಸಿ ಅಲ್ಲೆಲ್ಲಾದರೂ ಓಡಿ ಎಂದಾಗ ಓಡಬೇಕು, ಈ ಸಮಯಕ್ಕೆ ಎಲ್ಲಾ ಕಮಾಂಡೋ ಟ್ರೈನೀಗಳು ಯಂತ್ರಗಳಂತೆ ಆಗಿ ಬಿಟ್ಟಿದ್ದರು. ಎಲ್ಲಿ ಮಲಗಲು ಹೇಳಿದರೂ ನಿದ್ದೆ ಬರುತ್ತಿತ್ತು, ಏನು ಕೊಟ್ಟರೂ ಯೋಚನೆಯೇ ಮಾಡದೆ ತಿನ್ನುತ್ತಿದ್ದರು. ಹಾವನ್ನು ಹಿಡಿದು ತುಂಡು ಮಾಡಿ ತಿನ್ನಲು ಹೇಳಿದ್ದರು. ಹಾವು ಹಿಡಿಯುವ ತಂತ್ರವನ್ನು ಮೊದಲೇ ಕಲಿಸಿದ್ದರು. ಅದರಂತೆ ಹಾವನ್ನು ಹಿಡಿದು ಬೆಂಕಿಯಲ್ಲಿ ಸುಟ್ಟು ತಿನ್ನುತ್ತಿದ್ದರು ಗರುಡ್ ಕಮಾಂಡೋ ಟ್ರೈನೀಗಳು. ಕೆಂಚಪ್ಪನವರು ಕಮಾಂಡೋ ಟ್ರೈನಿಂಗ್‌ಗೆ ಬರುವವ ತನಕ ಮಾಂಸಾಹಾರ ಸೇವಿಸಿರಲಿಲ್ಲ. ಆದರೆ ಕಮಾಂಡೋ ಟ್ರೈನಿಂಗ್‌ನಲ್ಲಿ ಇಂಸ್ಟ್ರಕ್ಟರ್‌ಗಳು ಹೇಳುತ್ತಿದ್ದರು " ಕಮಾಂಡೋ ಆದವನು ತನಗೆ ತಾನು ಯಾವುದೇ ಬೇಲಿಯನ್ನು ಹಾಕಿಕೊಳ್ಳಬಾರದು" ಎಂದು.
 ಅಡ್ಡಲಾಗಿ ಹಾಕಿದ ಬಹಳ ಚಿಕ್ಕದಾದ ಸಿಮೆಂಟ್ ಕೊಳವೆಯಿರುತ್ತದೆ (ಪೈಪ್). ಅದರ ಉದ್ದ ಎಷ್ಟು ಅಗಲ ಎಷ್ಟು, ಅದರ ಒಳಗೆ ಏನಿದೆ? ಯಾವೊಂದು ವಿಚಾರವೂ ತಿಳಿದಿರುವುದಿಲ್ಲ. ಅದರೊಳಗೆ ನುಗ್ಗಿಕೊಂಡು ಹೋಗಿ ಇನ್ನೊಂದು ತುದಿಯಿಂದ ಹೊರ ಬರಬೇಕು. ಈ ಸಂದರ್ಭದಲ್ಲಿ ಒಳ ನುಗ್ಗಿದವರು ಹೊರ ಬರುತ್ತಾರ? ಅಲ್ಲೇ ಬಾಕಿ ಆಗುತ್ತಾರ? ಬದುಕುಳಿಯುತ್ತಾರ? "ಇದ್ಯಾವುದಕ್ಕು ಇನ್ಸ್ಟ್ರಕ್ಟರ್‌ಗಳು ಜವಾಬ್ದಾರರಲ್ಲ, ಟ್ರೈನಿಂಗ್ ಸಂದರ್ಭದಲ್ಲಿ ಇಪ್ಪತ್ತೈದು ಶೇಕಡಾ ಟ್ರೈನಿಗಳ ಜೀವ ಹೋದರೂ ಇನ್ಟ್ರಕ್ಟರ್‌ಗಳನ್ನು ಕೇಳುವಂತಿಲ್ಲ" ಎನ್ನುತ್ತಾರೆ ಇನ್ಸ್ಟ್ರಕ್ಟರ್‌ಗಳು. ದೇವರ ದಯದಿಂದ ಯಾರ ಜೀವಕ್ಕೂ ಅಪಾಯ ಆಗಲಿಲ್ಲ, ಆದರೆ ಡಿಹೈಡ್ರೇಶನ್ ಆಗಿ ಪ್ರಜ್ಞೆ ತಪ್ಪಿ ಬಿದ್ದವರಿದ್ದರು, ಕಾಲು ಫ್ಯಾಕ್ಚರ್ ಆದವರಿದ್ದರು. ಹೆಚ್ಚಿನ ಗಾಯಗಳಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದವರಿದ್ದರು.

   ಈ ಟ್ರೈನಿಂಗ್‌ನ ನಂತರ ಮೂರು ಕ್ಯಾಸುವಲ್ ಕೋರ್ಸ್ (ಇ ಎಂ ಕೆ ಟಿ) ಇತ್ತು. ಸ್ವಿಮ್ಮಿಂಗ್, ಪ್ಯಾರ ಜಂಪ್ ಹಾಗೂ ವಾಹನ ಚಲಾಯಿಸುವ ಬಗ್ಗೆ ಟ್ರೈನಿಂಗ್  ಇರುತ್ತಿತ್ತು(M.T Training).  ಸ್ವಿಮ್ಮಿಂಗ್ ಕೋರ್ಸ್ ಮತ್ತೆ ಬೆಳಗಾವಿಯ ಸಾಮ್ರಾದಲ್ಲಿತ್ತು. ಹಳ್ಳಿಯಲ್ಲಿರುವಾಗ ಬಾವಿಗಳಲ್ಲಿ ಮೊದಲೇ ಈಜಲು ಕಲಿತದ್ದರಿಂದ ಈ ಕೋರ್ಸ್ ಕೆಂಚಪ್ಪನವರಿಗೆ ಕಷ್ಟ ಆಗಲಿಲ್ಲ. ಪ್ಯಾರಾ ಜಂಪ್ ಕೋರ್ಸ್ ಆಗ್ರಾದಲ್ಲಿತ್ತು. M.T Trainingನಲ್ಲಿ ಬುಲೆಟ್ ಮತ್ತು ಜಿಪ್ಸಿ ಓಡಿಸಲು ಕಲಿಸಿದರು.

   ಈ ಮೂರು ಕ್ಯಾಸುವಲ್ ಕೋರ್ಸ್‌ನ ನಂತರ ಓಜೆಟಿ (On Job Training) ಎಂದು ಕಾಶ್ಮೀರಕ್ಕೆ ಕಳುಹಿಸಿದರು. ಈ ಸಮಯದಲ್ಲಿ ಟ್ರೈನಿಂಗ್‌ನಲ್ಲಿ ಎಷ್ಟು ಟಫ್‌ನೆಸ್ ಅಳವಡಿಸಿದರೂ ಕಷ್ಟ ಎಂದು ಅನಿಸುತ್ತಿರಲಿಲ್ಲ. ಎಲ್ಲರ ದೇಹವೂ ಟ್ರೈನಿಂಗ್‌ಗೆ ಅಷ್ಟೊಂದು ಒಗ್ಗಿಕೊಂಡಿತ್ತು. ಹೀಗಾಗಿ ಎಷ್ಟು ದೂರ ಓಡಿಸಿದರೂ ಓಡುತ್ತಿದ್ದರು, ಯಾವ ಪನಿಶ್‌ಮೆಂಟ್ ಕೊಟ್ಟರೂ ನಗುತ್ತಾ ಮಾಡುತ್ತಿದ್ದರು, ರಿಂಗ್‌ನಲ್ಲಿ ಇಬ್ಬರನ್ನು ಹಾಕಿ ಬಾಕ್ಸಿಂಗ್ ಮಾಡಿಸುತ್ತಿದ್ದರು, ಇದೇ ರೀತಿ ಅನ್ ಆರ್ಮ್ಡ್ ಕಾಂಬ್ಯಾಟ್ ಮಾಡುತ್ತಿದ್ದರು ಅವುಗಳಲ್ಲಿ ಮುಖ್ಯವಾಗಿ  ಕರಾಟೆ, ಪಿಕಿಟಿಕಾಲಿತರ್ಶಿಯ ಇವುಗಳನ್ನೆಲ್ಲಾ ಅಭ್ಯಾಸ ಮಾಡಿಸುತ್ತಿದ್ದರು. ಅಲ್ಲದೇ ವೆಪನ್ ಡ್ರಿಲ್ ಇರುತ್ತಿತ್ತು, ರಾತ್ರಿ ಏನೂ ಕಾಣದ ಸಮಯದಲ್ಲಿ ವೆಪನ್‌ಗಳನ್ನು ಜೋಡಿಸುವುದು ಹೇಗೆ ಮುಂತಾದ ವಿಷಯಗಳ ತರಬೇತಿ ಇತ್ತು. ಆರ್ಮಿಯ ಪ್ಯಾರ ಕಮಾಂಡೋ ಜೊತೆಗೆ ಹಾಗೂ ಕೋಂಬ್ಯಾಟ್ ಬ್ಯಾಟಲ್ ಸ್ಕೂಲ್ (ಸಿ ಬಿ ಸಿ)ನಲ್ಲಿ ತರಬೇತಿ ಪಡೆಯುತ್ತಾರೆ. ಅಲ್ಲಿ ಆಂಟಿ ಟೆರರಿಸ್ಟ್ ಆಪರೇಶನ್‌ನಲ್ಲಿ ಏನೆಲ್ಲಾ ಮಾಡಬೇಕು, ಕಾಶ್ಮೀರದಲ್ಲಿ ಟೆರರಿಸ್ಟ್‌ಗಳು ಹೇಗೆ ಇರುತ್ತಾರೆ, ಅಲ್ಲಿನ ಮನೆಗಳು ಯಾವ ರೀತಿ ಇರುತ್ತವೆ, ಅಲ್ಲಿ ಅಡಗಿರುವ ಆತಂಕವಾದಿಗಳನ್ನು ಕಂಡು ಹಿಡಿಯುವುದು ಹೇಗೆ, ಅವರು ಎದುರು ನಿಂತಾಗ ಅವರನ್ನು ಹೇಗೆ ಎದುರಿಸಬೇಕು, ಅಲ್ಲಿನ ಜನ ಸೈನಿಕರ ಜೊತೆ ಹೇಗೆ ವರ್ತಿಸುತ್ತಾರೆ, ಆತಂಕವಾದಿಗಳ ಜೊತೆ ಹೇಗೆ ವರ್ತಿಸುತ್ತಾರೆ ಇತ್ಯಾದಿ ವಿಚಾರಗಳ ಬಗ್ಗೆ ಟ್ರೈನಿಂಗ್ ನೀಡಲಾಗುತ್ತದೆ.  ಎಲ್ಲವನ್ನೂ ನಿರಾತಂಕವಾಗಿ ಮಾಡಲು ಈ ಹಂತದಲ್ಲಿ ಸಾಧ್ಯವಾಗುತ್ತಿತ್ತು. ಇದರ ಜೊತೆಗೇ ಪ್ರೊಮೋಶನ್ ಎಕ್ಸಾಮ್‌ಗಳೂ ಇರುತ್ತಿತ್ತು. ಈ ಪರೀಕ್ಷೆಗಳು ವಿಭಿನ್ನವಾಗಿತ್ತು. ಬಟ್ಟೆ ಎಲ್ಲಾ ಕಳಚಬೇಕಾಗಿತ್ತು, ಕೇವಲ ಶಾರ್ಟ್ಸ್ ಮಾತ್ರ ಧರಿಸುತ್ತಿದ್ದರು, ಮೇಲಿನಿಂದ ಬಿಸಿಲು, ಕೆಳಗೆ ಸುಡುವ ರಸ್ತೆ, ಈ ರಸ್ತೆಯಲ್ಲಿ ಕುಳಿತು ಪರೀಕ್ಷೆ ಬರೆಯಬೇಕು. ಕೇವಲ ಪೆನ್ ಪೇಪರ್ ಕೊಡುತ್ತಿದ್ದರು. ನಿಗದಿತ ಸಮಯದ ಒಳಗೆ ಉತ್ತರ ಬರೆದು ಕೊಡಬೇಕು. ಪೇಪರ್ ಸಪೋರ್ಟ್‌ಗೆ ಏನೂ ಇರುವುದಿಲ್ಲ. ಎಷ್ಟು ಬರೆಯುತ್ತಾರೆ ಅಷ್ಟು ಮಾರ್ಕ್ಸ್. ಒಟ್ಟಿನಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಕಮಾಂಡೋಗಳು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಪರೀಕ್ಷೆ. ಇದನ್ನೂ ಕೆಂಚಪ್ಪನವರು ಪಾಸ್ ಮಾಡುತ್ತಾರೆ.

   ಈ ಒಜೆಟಿ ಪ್ರಾರಂಭವಾದ ಕೆಲವು ದಿನಗಳಲ್ಲೇ ಕೆಂಚಪ್ಪನವರ ತಂದೆ ತೀರಿಕೊಂಡರು. ತಂದೆ ತೀರಿಹೋದ ಒಂದು ತಿಂಗಳ ನಂತರ ಕೆಂಚಪ್ಪನವರಿಗೆ ಈ ವಿಚಾರ ತಾಯಿಯ ಮೂಲಕ ತಿಳಿಯಿತು. ಕೆಂಚಪ್ಪನವರ ತಂದೆ ಬಾಲ್ಯದಲ್ಲೇ ಅವರಿಂದ ದೂರವಾಗಿದ್ದರೂ ಕೆಂಚಪ್ಪ ಶಾಲೆಗೆ ಹೋಗುವುದನ್ನು ದೂರದಿಂದಲೇ ನೋಡಿ ಖುಷಿ ಪಡುತ್ತಿದ್ದರು, ಕೆಂಚಪ್ಪನವರು ಸಂತೆಯಲ್ಲಿ ವ್ಯಾಪಾರಕ್ಕೆ ಹೋದರೆ ಅದೇ ಸಂತೆಗೆ ಬರುತ್ತಿದ್ದ ಕೆಂಚಪ್ಪನವರ ತಂದೆ ತನ್ನ ಮಗ ಹೇಗಿದ್ದಾನೆ ಎಂದು ಮರೆಯಿಂದಲೇ ಗಮನಿಸುತ್ತಿದ್ದರು. ಒಂದು ವೇಳೆ ಅಪ್ಪಿ ತಪ್ಪಿ ಕೆಂಚಪ್ಪನವರು ತಂದೆ ಇದ್ದ ಕಡೆ ನೋಡಿದರೆ ಅವರಮ್ಮ ಕೆಂಚಪ್ಪನವರನ್ನು ಕರೆದುಕೊಂಡು ಸರ ಸರನೆ ಮನೆಕಡೆ ಧಾವಿಸುತ್ತಿದ್ದರು. ಕೆಂಚಪ್ಪನವರಿಗೆ ಕೆಲಸ ಸಿಕ್ಕಿದೆ ಎಂದು ತಿಳಿದು ಊರೆಲ್ಲಾ ಹೇಳಿಕೊಂಡು ಸಂಭ್ರಮಪಟ್ಟಿದ್ದರು. ಒಟ್ಟಿನಲ್ಲಿ ತಂದೆಗೆ ತನ್ನ ಹೆಂಡತಿ ಹಾಗೂ ಮಗನ ಬಗ್ಗೆ ಯಾವುದೇ ಸಿಟ್ಟು ಬೇಸರಗಳಿರಲಿಲ್ಲ. ಯಾವತ್ತೋ ಒಂದು ದಿನ ತನ್ನ ಮಗ ತನ್ನ ಬಳಿ ಬರುತ್ತಾನೆ ಎಂದು ಜೊತೆಗಿದ್ದವರಲ್ಲೆಲ್ಲಾ ಹೇಳುತ್ತಿದ್ದರು. ಅವರು ತೀರಿಕೊಂಡ ಸಂದರ್ಭದಲ್ಲಿ ಕೆಂಚಪ್ಪನವರ ತಾಯಿಗೆ ವಿಷಯ ತಿಳಿಯುವಾಗಲೂ ತಡವಾಗಿತ್ತು. ದೂರದ ಸಂಬಂಧಿಕರ ಮೂಲಕ ಈ ವಿಷಯ ತಿಳಿಯಿತು. ವೈಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ಟ್ರೈನಿಂಗ್ ಮಾಡಲೇ ಬೇಕಾಗಿತ್ತು, ಹೀಗಾಗಿ ಕೆಂಚಪ್ಪನವರು ಒಜೆಟಿಯಲ್ಲಿಯೇ ಉಳಿದುಕೊಂಡರು. ಓಜೆಟಿ ಟ್ರೈನಿಂಗ್ ನಂತರ ಮನೆಗೆ ಹೋಗಿ ಬರುತ್ತಾರೆ.

   ಈ ಎಲ್ಲಾ ತರಬೇತಿ, ಪರೀಕ್ಷೆಗಳ ನಂತರ ಕೊನೆಗೂ ಕೆಂಚಪ್ಪನವರು ಗರುಡ್ ಕಮಾಂಡೋ ಆಗಿ, ಪುಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಬೆಳಗಾವಿಯ ಬೇಸಿಕ್ ಟ್ರೈನಿಂಗ್ ಸಂದರ್ಭದಲ್ಲೇ ಸಂಬಳ ಸಿಗಲು ಪ್ರಾರಂಭವಾಗಿತ್ತು. ಟ್ರೈನಿಂಗ್ ಸಮಯದಲ್ಲಿ ೨೨೫೦ ರೂಪಾಯಿ ಕೈಗೆ ಸಿಗುತ್ತಿತ್ತು. ತನ್ನ ಕೈಗೆ ಸಿಕ್ಕ ಮೊದಲ ಸಂಬಳದಲ್ಲಿ ೨೦೦೦ ರೂಪಾಯಿಗಳನ್ನು ಅಮ್ಮನಿಗೆ ಕಳುಹಿಸಿದ್ದರು. ಈ ಎರಡು ಸಾವಿರ ರೂಪಾಯಿಗಳಲ್ಲಿ ತಮ್ಮೆಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕಾಗಿತ್ತು. ಹಾಲು ಕುಡಿಯಬೇಕಾಗಿತ್ತು, ಕಡಲೆ, ಹಸರು ಕಾಳುಗಳನ್ನು ನೆನೆಹಾಕಿ ತಿನ್ನ ಬೇಕಾಗಿತ್ತು, ಗ್ಲುಕಾನ್ ಡಿ ಬೇಕಾಗುತ್ತಿತ್ತು, ಮೈಗೆ ಎಣ್ಣೆ ಹಚ್ಚ ಬೇಕಾದರೂ, ಶೂಗಳನ್ನು ತೆಗೆದುಕೊಳ್ಳಬೇಕಾದರೂ ತಿಂಗಳ ಕೊನೆಯಲ್ಲಿ ಸಿಗುತ್ತಿದ್ದ ಈ ಎರಡು ಸಾವಿರದಲ್ಲೇ ಭರಿಸಬೇಕಾಗಿತ್ತು.

   ೨೦೦೮ರಲ್ಲಿ ಟ್ರೈನಿಂಗ್ ಮುಗಿಸಿ ಪುಣೆಗೆ ಪೋಸ್ಟಿಂಗ್ ಹೋಗುತ್ತಾರೆ. ಇಲ್ಲಿ ಬೇಸಿಕ್ ಪೇಮೆಂಟ್ ಜೊತೆಗೆ ಉಳಿದ ಹಣವೂ ದೊರೆಯುತ್ತದೆ. ಹೀಗಾಗಿ ಸಂಬಳ ಹೆಚ್ಚಾಯಿತು. ಪುಣೆಯಲ್ಲಿ ಪೋಸ್ಟಿಂಗ್ ಇರುವಾಗಲೇ ಕೆಂಚಪ್ಪನವರು ತಮ್ಮ ಓದನ್ನು ಮುಂದುವರೆಸಿಕೊಂಡರು. ಪುಣೆ ಯುನಿವರ್ಸಿಟಿಯಿಂದ ಬಿ.ಎ, ಎಂ.ಎ ಪದವಿ ಪಡೆದರು. ಇಲ್ಲಿರುವಾಗ ಸ್ಪೆಷಲ್ ಹೆಲಿಕಾಪ್ಟರ್ ಆಪರೇಶನ್ ಎಕ್ಸಸೈಸ್‌ಗಳನ್ನು ಮಾಡುತ್ತಿದ್ದರು. ಈ ಸಮಯದಲ್ಲೆಲ್ಲಾ ಕೆಲವು ಫ಼ಾರಿನ್ ಎಕ್ಸಸೈಸ್‌ಗಳೂ ನಡೆಯುತ್ತಿತ್ತು. ಆದರೆ ಕೆಂಚಪ್ಪನವರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿಲ್ಲ. ಇವರಿಂದ ಮೊದಲಿನ ಬ್ಯಾಚ್‌ನ ಗರುಡ್‌ಗಳು ಕಾಂಗೋ ಪೀಸ್ ಮಿಶನ್‌ನಲ್ಲಿಯೂ ಭಾಗವಹಿಸಿದ್ದರು. ಒಬ್ಬೊಬ್ಬರಿಗೆ ಒಂದೊಂದು ಸ್ಕಿಲ್‌ನಲ್ಲಿ ಸ್ಪೆಶಲ್ ಟ್ರೈನಿಂಗ್ ಕೊಟ್ಟಿದ್ದರು. ಕೆಂಚಪ್ಪನವರಿಗೆ ಸ್ಕ್ವಾಡ್ ಕಮುನಿಕೇಟರ್ ಎಂದು ಕಮ್ಯುನಿಕೇಶನ್ ಸ್ಕಿಲ್ ಕೊಟ್ಟರು. ಕಾಂಬ್ಯಾಟ್ ಫೈಟಿಂಗ್‌ಗೆ ಹೋದರೆ ರೇಡಿಯೋ ಕಮ್ಯುನಿಕೇಶನ್‌ನನ್ನು ಆಪರೇಟ್ ಮಾಡುವ ಜವಾಬ್ದಾರಿ ವಹಿಸಲಾಗಿತ್ತು. ೨೦೧೧ರ ಮುಂಬಯಿಯಲ್ಲಿ ನಡೆದ ವರ್ಲ್ಡ್ ಕಪ್‌ಗೆ 'ಏರಿಯಲ್ ರೆಕ್ಕಿ'ಯಾಗಿ (ಹೆಲಿಕಾಪ್ಟರ್ ಮೂಲಕ ಚೆಕ್) ಕೆಂಚಪ್ಪನವರಿದ್ದ ಗರುಡ್ ಕಮಾಂಡೋಗಳ ಟೀಂನ ಜವಾಬ್ದಾರಿಯಾಗಿತ್ತು.

   ೨೦೧೨ರಲ್ಲಿ ಪುಣೆಯಲ್ಲಿದ್ದಾಗ ಎ ಐ ಪಿ ಟಿ ಯಿಂದ ಲೈಫ್ ಸೇವರ್ ಹಾಗೂ ಸ್ವಿಮ್ಮಿಂಗ್ ಇನ್ಸ್ಟ್ರಕ್ಟರ್ ತರಬೇತಿಯನ್ನು ಪಡೆದು ಲೈಫ್ ಸೇವರ್ ಹಾಗು ಸ್ವಿಮ್ಮಿಂಗ್ ಇನ್ಸ್ಟ್ರಕ್ಟರ್ ಆಗುತ್ತಾರೆ. ಪುಣೆಯಲ್ಲಿರುವಾಗಲೇ ಕೆಂಚಪ್ಪನವರು ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಾರೆ. ಇವರ ಪತ್ನಿ ಅಂಜನಾದೇವಿ, ಹತ್ತಿರದ ಸಂಬಂಧಿಯೂ ಹೌದು. ಕೆಂಚಪ್ಪನವರ ತಾತನ ಅಣ್ಣನ ಮೊಮ್ಮಗಳು. ಬಾಲ್ಯದಿಂದಲೂ ಪರಿಚಯ ಇದ್ದ ಹುಡುಗಿ. ಕೆಂಚಪ್ಪನವರ ಏಳು ಬೀಳುಗಳನ್ನು ಕಂಡಿದ್ದವರು. ಆದರೆ ಅಂಜನಾ ಅವರನ್ನೇ ಮದುವೆ ಆಗುವುದು ಎಂದು ಕೆಂಚಪ್ಪನವರಿಗಾಗಲೀ, ಅಂಜನಾ ಅವರಿಗಾಗಲೀ ತಿಳಿದಿರಲಿಲ್ಲ.  ಕೆಂಚಪ್ಪ ಹಾಗೂ ಅಂಜನಾ ಅವರ ಮನೆಗೆ ೩೦೦ ರಿಂದ ೪೦೦ ಮೀಟರ್ ದೂರ, ಹತ್ತಿರದ ಸಂಬಂಧಿ ಹಾಗೂ ಹತ್ತಿರ ಇದ್ದವರು, ಈಗ ಮತ್ತಷ್ಟು ಹತ್ತಿರವಾದರು. ಹಿರಿಯರು ಮಾತುಕತೆ ನಡೆಸಿ ಇವರಿಬ್ಬರಿಗೆ ಮದುವೆ ಮಾಡಿಸಿದರು.

     ೨೦೧೩ರಲ್ಲಿ ಪುಣೆಯಿಂದ ಚಾಂದಿನಿನಗರ ಸ್ಟೇಷನ್‌ಗೆ ಪೋಸ್ಟಿಂಗ್ ಬರುತ್ತಾರೆ. ಇದು ಒಂದು ಟ್ರೈನಿಂಗ್ ಸೆಂಟರ್. ಈ ಸ್ಟೇಶನ್‌ನಲ್ಲಿ 'ರಿಸರ್ವ್ಡ್ ಫ್ಲೈಟ್' ( ರಿಸರ್ವ್ ಗರುಡ್ ಕಮಾಂಡೋಗಳ ತಂಡ) ಇರುತ್ತದೆ. ಇಡೀ ಭಾರತದಲ್ಲಿ ಏನೇ ಸಮಸ್ಯೆ ಆದರೂ ಚಾಂದಿನೀನಗರದಿಂದ ಕಮಾಂಡೋಗಳು ಹಿಂಡನ್ ಏರ್ ಬೇಸ್‌ನಿಂದ ಏರ್ ಲಿಫ್ಟ್ ಆಗಿ ಹೋಗಬೇಕು. ಕೆಂಚಪ್ಪನವ್ರು ಅಲ್ಲಿ ಇದ್ದಾಗಲೇ ಪಠಾಣ್‌ಕೋಟ್ ಅಟ್ಯಾಕ್ ಸಂಭವಿಸಿತು. ಆದರೆ ಆ ಸಂದರ್ಭದಲ್ಲಿ ಕೆಂಚಪ್ಪನವರು ಹೊಸ ಹುಡುಗರಿಗೆ ಸ್ವಿಮ್ಮಿಂಗ್ ಟ್ರೈನಿಂಗ್ ಕೊಡುತ್ತಿದ್ದರು. ಈ ಪಠಾಣ್ ಕೋಟ್ ಅಟ್ಯಾಕ್‌ನ ನಂತರ ಏರ್‌ಫೋರ್ಸ್‌ನ ಸೆಕ್ಯುರಿಟಿಯಲ್ಲಿ ಬಹಳಷ್ಟು ಬದಲಾವಣೆಗಳಾದವು. ಎಲ್ಲಾ ಸ್ಟೇಷನ್‌ಗಳಿಂದಲೂ ಗರುಡ್‌ಗಳು ಬೇಕೇ ಬೇಕೆಂಬ ಕರೆ ಹೆಚ್ಚಾಯಿತು. ಸ್ಟೇಷನ್‌ನಲ್ಲಿ ಗರುಡ್‌ಗಳಿದ್ದರೆ ಸೇಫ್ ಅನ್ನುವ ಅನಿಸಿಕೆ ಆ ಸಮಯದಲ್ಲಿ ಪ್ರಾರಂಭವಾಗಿತ್ತು. ಪಠಾಣ್ ಕೋಟ್ ಅಟ್ಯಾಕ್ ಸಂದರ್ಭದಲ್ಲಿ ಕೆಂಚಪ್ಪನವರು ಬೆಳಗಾವಿಯಲ್ಲಿದ್ದರು. ಸ್ವಿಮ್ಮಿಂಗ್ ಕೋರ್ಸ್‌ಗೆ ಟ್ರೈನಿಂಗ್ ಕೊಡಲು ಹೋಗಿದ್ದರು. ಅಟ್ಯಾಕ್ ಆದ ಸಂದರ್ಭದಲ್ಲಿ ಉದಂಪುರ್‌ನಿಂದ ಗರುಡ್‌ಗಳು ಪಠಾಣ್‌ಕೋಟ್‌ಗೆ ಹೋಗಿದ್ದರು. ಆತಂಕವಾದಿಗಳು ಸ್ಟೇಶನ್ ಒಳಗೆ ನುಗ್ಗಿದ ನಂತರ ಆದರೆ ಅಟ್ಯಾಕ್ ಮಾಡುವ ಮುನ್ನವೇ ಗರುಡ್‌ಗಳು ಅಲ್ಲಿಗೆ ಧಾವಿಸಿದ್ದರು. ಆದರೆ ಅಲ್ಲಿ ಕಮ್ಯುನಿಕೇಶನ್‌ ಗ್ಯಾಪ್ ಉಂಟಾಗಿ ಒಬ್ಬ ಗರುಡ್ (ಕರ್ಪೋರಲ್ ಗುರು ಸೇವಕ್ ಸಿಂಗ್) ಹುತಾತ್ಮರಾದರು.  ಇದಕ್ಕೂ ಮುನ್ನ ಕೆಂಚಪ್ಪನವರು ಪುಣೆಯಲ್ಲಿದ್ದಾಗ ೨೦೦೮ರಲ್ಲಿ ಮುಂಬೈ ಧಾಳಿಯ ಸಂದರ್ಭದಲ್ಲೂ ಗರುಡ್ ಫೋರ್ಸ್‌ನ ಕಮಾಂಡೋಗಳು ಆಪರೇಶನ್‌ಗೆ ಸಂಪೂರ್ಣವಾಗಿ ಸಜ್ಜಾಗಿ ಸ್ಟ್ಯಾಂಡ್ ಬೈ ಆಗಿ ಇದ್ದರು. ಆದರೆ ಆ ಸಂದರ್ಭದಲ್ಲಿ ಎನ್‍.ಎಸ್.ಜಿ ಕಮಾಂಡೋಗಳು ಮುಂಬೈ ಅಟ್ಯಾಕ್‌ನ ಆಪರೇಶನ್‌ನನ್ನು ದಕ್ಷವಾಗಿ ನಿರ್ವಹಿಸಿದ್ದರಿಂದ ಗರುಡ್‌ಗಳು ಭಾಗವಹಿಸಲಿಲ್ಲ,  ಮಲ್ಟಿಪಲ್ ಫೋರ್ಸ್‌ಗಳು ಬಂದರೆ ಗೊಂದಲಗಳು ಹೆಚ್ಚಾಗುತ್ತದೆ, ಕ್ರಾಸ್ ಫೈರಿಂಗ್ ಆಗುವ ಚಾನ್ಸ್ ಇದೆ, ಎಂದು ಗರುಡ್ ಕಮಾಂಡೋಸ್‌ಗಳನ್ನು ಸ್ಟ್ಯಾಂಡ್ ಬೈ ಆಗಿ ಇಟ್ಟಿದ್ದರು. ಇದೇ ರೀತಿ ನೇವಿಯ ಮಾರ್ಕೋಸ್ ಕಮಾಂಡೋಗಳು ಕೂಡಾ ಈ ಸಂದರ್ಭದಲ್ಲಿ ಸ್ಟ್ಯಾಂಡ್ ಬೈ ಆಗಿ ಇದ್ದರು.

   ಕೆಂಚಪ್ಪನವರು ಪುಣೆಯಲ್ಲಿದ್ದ ಸಮಯದಲ್ಲೇ ರಾಜಸ್ಥಾನದ ಪೋಕ್ರಾನ್ ರೇಂಜ್‌ನಲ್ಲಿ ಕೋಂಬ್ಯಾಟ್ ಅಸಾಲ್ಟ್ ಆಪರೇಶನ್‌ನ ಟ್ರೈನಿಂಗ್ ಪಡೆಯುತ್ತಿದ್ದರು. ಹೀಗಾಗಿ  ಎಲ್.ಡಿ ಲೇಸರ್ ಆಪರೇಶನ್‌ಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಶತ್ರುದೇಶದ ಅಥವಾ ಶತ್ರುಗಳು ಇರುವ ಪ್ರದೇಶದ ಹತ್ತಿರ ಹೋಗಿ ಟಾರ್ಗೆಟ್‌ನಲ್ಲಿ ಲೇಸರ್ ಫೈರ್ ಮಾಡುವುದು. ಲೇಸರ್ ಎಲ್ಲಿ ಹೋಗುತ್ತದೋ ಅದರ ಗೈಡೆನ್ಸ್‌ನಲ್ಲಿಯೇ ಬಾಂಬ್ ಕೂಡಾ ಹೋಗುತ್ತದೆ, ಹಾಗು ಟಾರ್ಗೆಟ್‌ನಲ್ಲೇ ಬ್ಲಾಸ್ಟ್ ಆಗುತ್ತದೆ. ಆದರೆ ಇಷ್ಟನ್ನು ಮಾಡಬೇಕಾದರೆ ಶತ್ರುಗಳಿರುವ ಜಾಗದಿಂದ ಎರಡು/ಮೂರು ಕಿ.ಮೀ ಆಸುಪಾಸಿನಲ್ಲಿಯೇ ಇರಬೇಕಾಗುತ್ತದೆ. ಶತ್ರುಗಳ ಸಮೀಪವೇ ಹೋಗಬೇಕಾಗುತ್ತದೆ. ನಂತರ ಶತ್ರುಗಳ ಕ್ಯಾಂಪ್, ಬ್ರಿಜ್ ಎಲ್ಲವನ್ನೂ ನಾಶಮಾಡಬೇಕಾಗುತ್ತದೆ. ಇವುಗಳ ಟ್ರೈನಿಂಗ್‌ಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಅದೇ ರೀತಿ ಒಂದೊಂದು ಯುನಿಟ್‌ಗಳಿಗೆ ಒಂದೊಂದು ಏರಿಯಾವನ್ನು ವಹಿಸಿಕೊಟ್ಟಿರುತ್ತಾರೆ, ಅದರ ರಕ್ಷಣೆಯ ಜವಾಬ್ದಾರಿ ಆ ಯುನಿಟ್‌ನವರದ್ದು. ಯುದ್ಧವೇ ನಡೆಯುತ್ತಿಲ್ಲ, ಆರ್ಮಿ ಏರ್‌ಫೋರ್ಸ್‌ನವರು ಈಗೇನು ಮಾಡುತ್ತಿರುತ್ತಾರೆ, ಕಾಲಿ ಕುಳಿತ್ತಿರುತ್ತಾರೆ ಎಂದು ಅನಿಸಿದರೆ ಆ ಅಭಿಪ್ರಾಯ ತಪ್ಪು. ಸ್ಟ್ಯಾಟೆಜಿಗಳು, ಪ್ಲ್ಯಾನಿಂಗ್‌ಗಳು, ತರಬೇತಿಗಳು, ಯುದ್ಧಾಭ್ಯಾಸಗಳು, ಕೇಸ್ ಸ್ಟಡಿಗಳು ಹೀಗೆ ದೇಶರಕ್ಷಣೆಯ ಕುರಿತಾದ ಹಲವಾರು ವಿಚಾರಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ೨೦೧೩ರಿಂದ ೨೦೧೬ರ ತನಕ ಕೆಂಚಪ್ಪನವರು ಚಾಂದಿನಿನಗರದಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಸಮಯದಲ್ಲೇ ಇಬ್ಬರು ಮಕ್ಕಳು ಜನಿಸುತ್ತಾರೆ.

    ನಂತರ ಕಾಶ್ಮೀರದ ಅವಂತಿಪುರ್‌‌ಗೆ ಪೋಸ್ಟಿಂಗ್ ಬರುತ್ತದೆ. ಇಲ್ಲಿ ಬದುಕು ತುಂಬಾ ಚಾಲೆಂಜಿಂಗ್ ಆಗಿತ್ತು. ಸ್ಟೇಶನ್‌ನಿಂದ ಹೊರಗಡೆ ಹೋಗಬೇಕಾದರೂ ಕಷ್ಟ. ಇಲ್ಲಿ ನಡೆದ ಒಂದು ಘಟನೆಯನ್ನು ಕೆಂಚಪ್ಪನವರು ಮರೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ. ಇಲ್ಲಿ ವಾರದಲ್ಲಿ ಮೂರರಿಂದ ನಾಲ್ಕು ದಿನ ಸ್ಟೇಶನ್‌ನಿಂದ ಹೊರಗೆ ಇರಬೇಕಾಗುತ್ತಿತ್ತು, ಅಲ್ಲಿನ ಬೆಟ್ಟಗಳಿಗೆ ಪರ್ವತಗಳಿಗೆ ಹೋಗ ಬೇಕಾಗುತ್ತಿತ್ತು. ಹೀಗೆ ಹೋಗುವಾಗ ಇವರ ವಸ್ತುಗಳನ್ನು ಹೊರಲು ಕಚ್ಚರ್‌ಗಳನ್ನು (ಹೇಸರಗತ್ತೆ, ಕುದುರೆ, ಕತ್ತೆ ಕಾಂಬಿನೇಶನ್) ಕಳುಹಿಸುತ್ತಿದ್ದರು. ಯಾವುದೇ ಲಗೇಜ್ ಇಲ್ಲದೆ ಖಾಲಿ ಕೈಯಲ್ಲಿ ಆ ಬೆಟ್ಟಗಳನ್ನು ಹತ್ತುವುದೇ ಕಷ್ಟ, ಅವುಗಳು ಅಷ್ಟೊಂದು ಜಾರುವ ಗುಡ್ಡಗಳಾಗಿದ್ದವು. ಇದರ ಜೊತೆಗೆ ಒಂದೇ ಸಮನೆ ಸುರಿಯುವ ಮಳೆ. ನಡೆದಷ್ಟೂ ಗಮ್ಯ ತಲುಪದ ಹಾದಿ. ತುಂಬಾ ದುರ್ಗಮವಾದ ಹಾದಿ. ಬೆಳಗ್ಗೆ ನಾಲ್ಕು- ಐದು ಗಂಟೆಗೆಲ್ಲಾ ಬೆಟ್ಟ ಹತ್ತಲು ಪ್ರಾರಂಭಿಸಿದರೆ ರಾತ್ರಿ ಒಂಭತ್ತು ಗಂಟೆಯ ಹೊತ್ತಿಗೆ ಬೆಟ್ಟದ ತುದಿಯನ್ನು ತಲುಪುತ್ತಿದ್ದರು. ದಾರಿ ಮಧ್ಯದಲ್ಲಿ ಸ್ವಲ್ಪ ಸ್ವಲ್ಪ ನೀರು ಕುಡಿಯಬೇಕು, ಚಾಕಲೇಟ್‌ನಂತಹದ್ದೇನಾದರೂ ತಿನ್ನಬೇಕು ಮತ್ತೆ ರಸ್ತೆ ಹತ್ತಬೇಕು, ಯಾವುದೇ ರೆಸ್ಟ್ ಇರುವುದಿಲ್ಲ.  ಇಂತಹ ಪರಿಸ್ಥಿತಿಯಲ್ಲಿ ಕತ್ತೆಗಳ ಮೇಲೆ ವಸ್ತುಗಳನ್ನು ಹೇರಿಕೊಂಡು ತಾವೂ ಭಾರವನ್ನು ಹೊತ್ತುಕೊಂಡು ಕೆಂಚಪ್ಪನವರಿದ್ದ ಕಮಾಂಡೋಗಳ ಟೀಂ ಬೆಟ್ಟ ಹತ್ತುತ್ತದೆ. ಇವರಿಗೆ ನೀಡಿದ ಟಾರ್ಗೆಟ್ ಪಾಕಿಸ್ತಾನದಿಂದ ನುಸುಳುಕೋರರು ಭಾರತದ ಒಳಗೆ ನುಗ್ಗುವಂತಹ ಜಾಗ. ಇದನ್ನು 'ಕುಂದಾಪಾನಿ' ಎಂದು ಕರೆಯುತ್ತಾರೆ. ಬೆಟ್ಟವನ್ನು ಹತ್ತಿ ಮತ್ತೊಂದು ಬದಿಯಿಂದ ಇಳಿದಾಗ ಸಿಗುವ ಕಣಿವೆ ಪ್ರದೇಶ. (ಇದರ ಪಕ್ಕ ಮತ್ತೊಂದು ಬೆಟ್ಟ) ಇಲ್ಲಿ ರಾತ್ರಿ ಹೊತ್ತು ಬರ್ಫ್(ಹಿಮ) ಬೀಳುತ್ತಿರುತ್ತದೆ. ಹಗಲು ಕರಗಿ ಹೋಗುತ್ತಿರುತ್ತದೆ. ಇಲ್ಲಿ ಚಳಿಯೂ ಜಾಸ್ತಿ. ಬೇಸಿಗೆಯಲ್ಲಿ ಇಲ್ಲಿ ಕುರಿ ಮೇಯಿಸುವವರು (ಡೋಕ್ಸ್) ಚಿಕ್ಕ ಚಿಕ್ಕ ಮನೆ ಮಾಡಿಕೊಂಡು ಇರುತ್ತಾರೆ. ಚಳಿಗಾಲದಲ್ಲಿ ಕೆಳಗೆ ಇಳಿಯುತ್ತಾರೆ. ಇವರ ಟೀಂ ಹೋಗುವಾಗ ಅಲ್ಲಿ ಯಾರೂ ಇರುವುದಿಲ್ಲ, ಎಲ್ಲಾ ಖಾಲಿ. ಹಾಗಾಗಿ ಇವರ ಟೀಂ ಆ ಡೋಕ್ಸ್‌ಗಳು ಉಳಿಯುತ್ತದೆ. ಎಲ್ಲರೂ ಇದರೊಳಗೆ ಕೆಲಸಗಳಲ್ಲಿ ತೊಡಗಿರುತ್ತಾರೆ. ಬರುವಾಗ ಸೌದೆಯನ್ನು ತಂದಿದ್ದರು, ಅದನ್ನು ಉರಿಸಿ ಒಂದಿಬ್ಬರು ಪರೋಟ, ಮತ್ತೊಂದಷ್ಟು ಜನ ಅಡುಗೆಯ ಉಳಿದ ಕೆಲಸಗಳನ್ನು ಮಾಡುತ್ತಿರುತ್ತಾರೆ, ಹೊರಗಡೆ ಸಿಕ್ಕಾಬಟ್ಟೆ ಚಳಿ. ಎರಡೂ ಕಡೆ ಗುಡ್ಡ, ಮಧ್ಯದ ಕಣಿವೆಯಲ್ಲಿ ಇವರಿದ್ದರು. ಸ್ಯಾಟ್‌ಲೈಟ್ ಫೋನ್ ಆಪರೇಟ್ ಆಗಿತ್ತು, ಆಗ ಒಂದು ರೇಡಿಯೋ ಮೆಸೇಜ್‌ ಬರುತ್ತದೆ. "ನಿಮ್ಮ ಹತ್ತಿರದಲ್ಲೇ ಶತ್ರುಗಳು ಇದ್ದಾರೆ, ನೋಡಿ" ಎಂದು. ಅವರು ಇನ್ನೊಂದು ಬೆಟ್ಟದ ಮೇಲಿದ್ದರು, ಇವರು ಕೆಳಗಿದ್ದರು. (ಕಣಿವೆಯಲ್ಲಿ) ಅವರಿಗೆ ಮೇಲಿನಿಂದ ಶೂಟ್ ಮಾಡುವುದು ಸುಲಭ, ಇವರಿಗೆ ಕೆಳಗಿನಿಂದ ಮೇಲ್ಗಡೆ‌ಗೆ ಮಾಡಲು ಕಷ್ಟ. ಅವರ ಚಲನವಲನಗಳು, ಕೆಲಸಗಳು ಎಲ್ಲವು ಇವರಿಗೆ ತಿಳಿಯುತ್ತಿತ್ತು, ಆದರೆ ಶೂಟ್ ಮಾಡಲು ಸಾಧ್ಯವಾಗುವ ರೀತಿ ಇರಲಿಲ್ಲ. ರಾತ್ರಿ ಪೂರ್ತಿ ಕಮಾಂಡೋಗಳು ಎಚ್ಚರವಾಗಿ ಅವರನ್ನು ಶೂಟ್ ಮಾಡಲು ಕಾಯುತ್ತಿದ್ದರು. ಆದರೆ ಸಿಗಲಿಲ್ಲ. ಇದು ಪಾಕಿಸ್ತಾನದ ಸೈನಿಕರಾದರೂ ಆಗಿರಬಹುದು, ಆತಂಕವಾದಿಗಳಾದರೂ ಇರಬಹುದು. ಈ ಕಿರಿ ಕಿರಿ ಚೈನಾ ಬಾರ್ಡರ್‌ನಲ್ಲಿ ಇರುವುದಿಲ್ಲ. ಆದರೆ ಚೀನಾ ಬಾರ್ಡರ್‌ನ ವಾತವರಣ ಇಲ್ಲಿಗಿಂತಲೂ ಕಠಿಣ. ಅಲ್ಲಿ ಆಕ್ಸಿಜನ್ ಕಡಿಮೆ. ಸಿಯಾಚಿನ್ ಮೊದಲಾದ ಕಡೆಗಳಲ್ಲಂತೂ ಒಂದೊಂದು ದಿನವನ್ನು ಕಳೆಯುವುದೇ ಬಹುದೊಡ್ಡ ಚಾಲೆಂಜ್, ಬದುಕುಳಿಯುವುದೇ ದೊಡ್ಡ ಯುದ್ಧ. ಡೋಕ್ಸ್‌ಗಳಲ್ಲಿ ಉಳಿದುಕೊಳ್ಳಬೇಕು, ಕೆರೋಸಿನ್ ಉಪಯೋಗಿಸಿ ಬೆಂಕಿ ಉರಿಸಿಕೊಳ್ಳಬೇಕು, ಅಲ್ಲೇ ಸ್ವಲ್ಪ ಅಡುಗೆ ಮಾಡಿಕೊಂಡು ಉಣ್ಣಬೇಕು, ಸ್ಪೆಶಲ್ ಚಾಕಲೇಟ್ಸ್, ಜ್ಯೂಸ್ ಕೊಟ್ಟಿರುತ್ತಾರೆ, ಆದರೆ ಇಲ್ಲಿ ಏನೇ ಇದ್ದರೂ ತಿನ್ನಬೇಕೆಂದೇ ಅನಿಸುವುದಿಲ್ಲ, ಹಸಿವೂ ಆಗುವುದಿಲ್ಲ. ಪಾಕಿಸ್ತಾನ ಬಾರ್ಡರ್‌ನಲ್ಲಿ ಬೆಟ್ಟಗಳಲ್ಲಿ ಗಿಡ ಮರಗಳಿವೆ. ಆದರೆ ಚೈನಾ ಬಾರ್ಡರ್‌ನ ಪರ್ವತಗಳು ಬೆತ್ತಲೆಯಾಗಿರುತ್ತವೆ.

  ಈ ರೀತಿಯ ಜೀವ ಭಯದ ಘಟನೆಗಳು ಕೆಂಚಪ್ಪನವರ ವೃತ್ತಿ ಜೀವನದಲ್ಲಿ ಸಾಕಷ್ಟು ನಡೆದಿತ್ತು. ಇನ್ನೊಮ್ಮೆ, ಅವಂತಿಪುರದಲ್ಲಿರುವಾಗ ಸ್ಟೇಶನ್‌ನಲ್ಲಿ ಇದ್ದ ಒಬ್ಬ ಸಿವಿಲ್ ವರ್ಕರ್ ಟೆರರಿಸ್ಟ್ ಆಗಿದ್ದ. ಇದು ಯಾರಿಗೂ ತಿಳಿದಿರಲಿಲ್ಲ, ನಂತರ ಸೋಶಿಯಲ್‌ ಮೀಡಿಯಾಗಳಲ್ಲಿ ಅವನ ಫೋಟೋಗಳು ಹರಿದಾಡಲು ಪ್ರಾರಂಭವಾಯಿತು. ಅವನು ಸ್ಟೇಶನ್ ಒಳಗಡೆ ಕೆಲಸ ಮಾಡಿದ್ದರಿಂದ ಒಳಗಿನ ಹಲವು ವಿಚಾರಗಳು,ಎಲ್ಲೆಲ್ಲಿ ಬಾಂಬ್ ಹಾಕಬಹುದು ಮುಂತಾದ ವಿಷಯಗಳು ಅವನಿಗೆ ತಿಳಿದಿರುವ ಸಾಧ್ಯತೆ ಇತ್ತು. ಸ್ಟೇಶನ್‌ನಲಿ ಸಂಪೂರ್ಣವಾಗಿ ಹೈ ಅಲರ್ಟ್ ಘೋಷಣೆ ಆಯಿತು. ಒಳಗಿದ್ದವರಿಗೆಲ್ಲಾ ಭಯ, ಇಲ್ಲಿ ಕೇವಲ ಸೈನಿಕರು ಮಾತ್ರವಲ್ಲ, ಅವರ ಕುಟುಂಬದವರೂ ಇರುತ್ತಿದ್ದರು. ಹೀಗಾಗಿ ರಾತ್ರಿ ಮಲಗಿದ್ದಾಗ ಎಲ್ಲೋ ಗ್ರೇನೈಡ್ ಬಿದ್ದಂತೆ ಭಯದ ಭಾವ. ಯಾರೋ ಮನೆಯ ಹೊರಗೆ ಸಂಚರಿಸುತ್ತಿದ್ದಂತೆ, ಕಿಟಕಿಯಲ್ಲಿ ಇಣುಕಿದಂತೆ ಭಾಸವಾಗುತ್ತಿತ್ತು. ಆ ವ್ಯಕ್ತಿ ಒಳಗಡೆ ಕೆಲಸ ಮಾಡಿ ಬಿಟ್ಟ ನಂತರ ಟೆರರಿಸ್ಟ್ ಆಗಿದ್ದವನು. ಆದರೆ ಇಂತಹ ಟೆರರಿಸ್ಟ್‌ಗಳನ್ನು ಒಂದೂವರೆ ಎರಡು ವರುಷಗಳಿಗಿಂತ ಹೆಚ್ಚು ಕಾಲ ಬದುಕಲು ಬಿಡುವುದಿಲ್ಲ. ಅವರು ಎಲ್ಲೇ ಇದ್ದರು ಕಂಡು ಹಿಡಿದೇ ಹಿಡಿಯುತ್ತದೆ ಆರ್ಮಿ.

   ಮತ್ತೊಂದು ಬಾರಿ ಕೆಂಚಪ್ಪನವರು ಹೆಂಡತಿ ಮಕ್ಕಳ ಜೊತೆ, ಗೆಳೆಯರ ಜೊತೆ ಸೇರಿ ಅವಂತಿಪುರದಲ್ಲಿ, ಸ್ಟೇಶನ್‌ನಿಂದ ಹೊರಗಡೆ ಸುತ್ತಾಡಲು ಹೋಗಿದ್ದರು. ಶ್ರೀನಗರ್, ಧಾಲ್ ಲೇಕ್ ಮೊದಲಾದ ಸ್ಥಳಗಳನ್ನು ಸುತ್ತಾಡಿದರು. ಸ್ಟೇಶನ್ ಒಳಗೆ ಬರುವಾಗ ರಾತ್ರಿ ಎಂಟು ಗಂಟೆ ಆಗಿತ್ತು. ಆದರೆ ಅವಂತಿಪುರ ಸ್ಟೇಶನ್‌ನಲ್ಲಿ ಎಲ್ಲೇ ಹೋದರೂ ರಾತ್ರಿ ಏಳು ಗಂಟೆಯ ಒಳಗೆ 'ಬುಕ್ ಇನ್' ಆಗಲೇಬೇಕಿತ್ತು. ಏರ್‍‌ಫೋರ್ಸ್ ಪೋಲಿಸ್ ಕೆಂಚಪ್ಪನವರನ್ನು ಕಾಲ್ ಮಾಡಿ ಕರೆಯುತ್ತಿದ್ದಾರೆ "ಯಾಕಿನ್ನೂ ಬಂದಿಲ್ಲ, ತಡವಾಗ್ತಿದೆ, ಬೇಗ ಬನ್ನಿ" ಎಂದು. ಕೆಂಚಪ್ಪನವರು ಬರುತ್ತಿರುವಾಗ 'ಮಲಪ್ಪುರ್' ಎಂಬ ಗ್ರಾಮದಲ್ಲಿ ಇವರು ಹೋಗಿದ್ದ ಗಾಡಿ ಪಂಕ್ಚರ್ ಆಗುತ್ತದೆ. ಈ ಘಟನೆಯ ಒಂದೂವರೆ ತಿಂಗಳು ಮೊದಲು (೨೦೧೬ ಜೂನ್‌ನಲ್ಲಿ) 'ಬುರಾನ್ವಾನಿ' ಎಂಬ ಆತಂಕಿಯ ಹತ್ಯೆಯಾಗಿತ್ತು. ಹೀಗಾಗಿ ಇವರ ಗಾಡಿ ಪಂಕ್ಚರ್ ಆಗಿದ್ದ ದಿನ ಕಾಶ್ಮೀರದಲ್ಲಿ ಕಲ್ಲು ತೂರಾಟ ಪ್ರಾರಂಭವಾಯಿತು. ಮಿಲಿಟರಿಯವರನ್ನು ಎಲ್ಲೇ ಕಂಡರೂ ಕಲ್ಲೆಸೆಯುತ್ತಿದ್ದರು. ಕಾಶ್ಮೀರಲ್ಲಿ ಯಾರೂ ಕೂಡಾ ತಾವು ಮಿಲಿಟರಿಯವರೆಂದು ಗುರುತಿಸಿಕೊಳ್ಳುವುದಿಲ್ಲ. ಕೆಂಚಪ್ಪನವರು ಹೋಗಿದ್ದ ಗಾಡಿಯ ಡ್ರೈವರ್ ಒಳ್ಳೆಯವನಾಗಿದ್ದ, ಆದರೂ ಅಲ್ಲಿ ಯಾರನ್ನು ನಂಬಲು ಸಾಧ್ಯವಿಲ್ಲ ಎನ್ನುತ್ತಾರೆ ಕೆಂಚಪ್ಪನವರು. ಆ ಡ್ರೈವರ್ ಗಾಡಿ ಪಂಚರ್ ಆದ ಕೂಡಲೇ ನಾಲ್ಕೈದು ಜನ ಗೆಳೆಯರನ್ನು ಕರೆದು ಟಯರ್ ಬದಲಾಯಿಸಲು ಹೇಳುತ್ತಾನೆ. ಅಷ್ಟರಲ್ಲಿ ಆ ಹುಡುಗರಿಗೆ ಎಲ್ಲಿಂದ ಮೆಸೇಜ್ ಬಂತೋ ಗೊತ್ತಿಲ್ಲ, ಎಲ್ಲರೂ ಇವರನ್ನೂ ಗಾಡಿಯನ್ನೂ ಬಿಟ್ಟು ದೂರ ಓಡಿ ಹೋದರು. ಇವರೆಲ್ಲರಿಗೂ ತುಂಬಾ ಭಯವಾಯಿತು, ಚಿಕ್ಕ ಮಕ್ಕಳೂ ಜೊತೆಗಿದ್ದರು. ಎಲ್ಲರೂ ಗಾಡಿಯ ಒಳಗೆ ಕುಳಿತು ಗ್ಲಾಸ್ ಕ್ಲೋಸ್ ಮಾಡಿಕೊಂಡರು. ಬೇರೇನೂ ಮಾಡುವಂತೆ ಇರಲಿಲ್ಲ. ಆ ಕಡೆಯಿಂದ ಮಿಲಿಟರಿ ಕ್ಯಾಸ್ಪರ್‌ಗಳು ಬಂದವು (ಬುಲೆಟ್ ಪ್ರೂಫ್ ಗಾಡಿಗಳು). ಆಗ ಸ್ವಲ್ಪ ಧೈರ್ಯ ಬಂತು, ನಮ್ಮ ಗಾಡಿಗಳು ಬಂದವು ಎಂದು. ಡ್ರೈವರ್ ಹಾಗೂ ಆತನ ಗೆಳೆಯರು ಇದಕ್ಕಾಗಿ ಓಡಿ ಹೋಗಿದ್ದಾಗಿತ್ತು. ಮಿಲಿಟರಿ ಕ್ಯಾಸ್ಪರ್‌ಗಳು ಅಲ್ಲಿಂದ ತೆರಳಿದ ಕೂಡಲೇ, ಓಡಿ ಹೋಗಿದ್ದ ಹುಡುಗರು ಓಡಿ ಬಂದು ಬೇಗ ಬೇಗನೆ ಗಾಡಿಯ ಟಯರ್ ಚೇಂಜ್ ಮಾಡಿದರು, ಇವರೆಲ್ಲಾ ಬೇಗನೆ ಸ್ಟೇಶನ್ ಸೇರಿಕೊಂಡರು. ಆ ಒಂದು ಕ್ಷಣ ಮಾತ್ರ ಎಲ್ಲರಿಗೂ ಉಸಿರು ನಿಂತಂತಾಗಿತ್ತು.

   ಕಾಶ್ಮೀರದಿಂದ ತಮಿಳುನಾಡಿನ ಸುಲ್ಲೂರ್‌ನಲ್ಲಿ ಮೂರು ವರ್ಷ ಕಾರ್ಯ ನಿರ್ವಹಿಸಬೇಕಾಯಿತು. ಇಲ್ಲಿಂದ ಮತ್ತೆ ಆರು ತಿಂಗಳು ಕೆಂಚಪ್ಪನವರು ಒಬ್ಬರೇ ಕಾಶ್ಮೀರಕ್ಕೆ ಹೋಗ ಬೇಕಾಯಿತು. ಹೆಂಡತಿ ಮತ್ತು ಮಕ್ಕಳು ಮಾತ್ರ ಸುಳೂರಿನಲ್ಲೇ ಉಳಿದುಕೊಳ್ಳಬೇಕಾಯಿತು. ಸುಳೂರಿನಲ್ಲಿ ಮೂರುವರ್ಷವಾದಾಗ ಉತ್ತರ ಪ್ರದೇಶದ ಆಗ್ರಾಕ್ಕೆ ೨೦೨೧ರಲ್ಲಿ ಪೋಸ್ಟಿಂಗ್ ಬಂತು. ಗರುಡ್ ಕಮಾಂಡೋಗಳಿಗೆ ಮೂರು ವರ್ಷಕ್ಕೊಮ್ಮೆ ಪೋಸ್ಟಿಂಗ್ ಬರುತ್ತದೆ. ಒಂದು ಊರಿಗೆ ಹೋಗಿ ಅಲ್ಲಿ ಏನೋ ಸ್ವಲ್ಪ ಸೆಟ್ ಆಯಿತು ಅನ್ನುವಾಗ ಮತ್ತೆ ಅಲ್ಲಿಂದ ಹೊರಡುವ ಸಮಯ ಬಂದಾಗಿರುತ್ತದೆ.     

    ೨೦೨೨ರಲ್ಲಿ ಬರೇಲಿಯಲ್ಲಿ ಬ್ಯಾಟಲ್ ಫೀಲ್ಡ್ ಎಕ್ಸಸೈಸ್ ನಡೆಯುತ್ತಿರುತ್ತದೆ, ಬೆಟಾಲಿಯನ್ ಇನೋಕ್ಯುಲೇಶನ್ ಡ್ರಿಲ್ ನಡೆಯುತ್ತಿರುತ್ತದೆ, ಆಗ ಸ್ಲಿಸರಿಂಗ್ ಮಾಡುವಾಗ ಅಂದರೆ ಹೆಲಿಕಾಪ್ಟರ್‌ನಿಂದ ಕೆಳಗೆ ಬಿಟ್ಟ ರೋಪ್‌ನಲ್ಲಿ ಇಳಿಯುತ್ತಿರುವಾಗ, ಕೈಯಲ್ಲಿನ ಸ್ಪೀಡ್ ಕಂಟ್ರೋಲ್ ಆಗದೆ ನೆಲಕ್ಕೆ ಅಪ್ಪಳಿಸುತ್ತಾರೆ, ಸಿಂಗಲ್ ಫೂಟ್‌ನಲ್ಲಿ ಲ್ಯಾಂಡ್ ಆಗುತ್ತಾರೆ, ಇದರಿಂದ ಕಾಲು ಫ್ಯಾಕ್ಚರ್ ಆಗುತ್ತದೆ. ನಂತರ ಆಪರೇಶನ್ ಮಾಡಿ ಕಾಲಿನ ಮಣಿಗಂಟಿನ ಭಾಗದ ಎರಡೂ ಬದಿಗೆ ಎರಡು ಪ್ಲೇಟ್‌ಗಳನ್ನು ಅಳವಡಿಸಲಾಗುತ್ತದೆ. ಇನ್ನೂ ಆ ಪ್ಲೇಟ್ ಹಾಗೇ ಇದೆ. ಈ ರೀತಿಯ ಸ್ಲಿಸರಿಂಗ್‌ಗಳು ಕೆಂಚಪ್ಪನವರಿಗೆ ಹೊಸದಲ್ಲ, ಹಿಂದೆ ಅದೆಷ್ಟೋ ಬಾರಿ ಸ್ಲಿಸರಿಂಗ್ ಮಾಡಿದ್ದರು. ಈ ರೀತಿಯ ಸ್ಲಿಸರಿಂಗ್‌ಗಳನ್ನು ಕಮಾಂಡೋಗಳು ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಮಾಡಲೇ ಬೇಕಾಗಿರುತ್ತದೆ. ಈ ಡ್ರಿಲ್‌ನ ಸಮಯದಲ್ಲಿ ಹಗಲು ಸ್ಲಿಸರಿಂಗ್ ಮಾಡಿದ್ದರು, ರಾತ್ರಿಯ ಸ್ಲಿಸರಿಂಗ್‌ನಲ್ಲಿ ಈ ದುರ್ಘಟನೆ ನಡೆಯಿತು. ಇದೇ ಸಂದರ್ಭದಲ್ಲಿ ಕೆಂಚಪ್ಪನವರ ಪತ್ನಿ ಅಂಜನಾ ಮೇಡಂ ಅವರು ಕೂಡಾ ಸ್ಕೂಟಿಯಿಂದ ಬಿದ್ದು ಕಾಲು ಫ್ರ್ಯಾಕ್ಚರ್ ಆಗಿತ್ತು, ಒಟ್ಟಿನಲ್ಲಿ ಪರಿಸ್ಥಿತಿ ಮನಸ್ಸನ್ನೂ ದೇಹವನ್ನೂ ಇರಿಯುತ್ತಿತ್ತು. ಇಂತಹ ಹಲವಾರು ಘಟನೆಗಳು ಕೆಂಚಪ್ಪನವರ ಜೀವನದಲ್ಲಿ ನಡೆದಿವೆ, ಕಾಶ್ಮೀರದಲ್ಲಂತೂ "ಈಗೇನೋ ಹೋಗ್ತಿದೀವಿ, ವಾಪಸ್ ಬರ್ಲಿಲ್ಲಾಂದ್ರ ಏನಪ ಮಾಡೂದು? ಮನಿ ಮಂದಿಗೆ ಯಾರಿದಾರ? ಮುಂದ ಹ್ಯಾಂಗ?" ಅನ್ನುವ ಕೆಟ್ಟ ಕೆಟ್ಟ ಆಲೋಚನೆಗಳು, ಜೀವ ಭಯ ಸುಳಿಯುತ್ತಲೇ ಇತ್ತು. ಅದೆಷ್ಟೋ ಅಡಿ ಎತ್ತರದಿಂದ ಪ್ಯಾರ ಜಂಪ್ (ಹಾರುತ್ತಿರುವ ವಿಮಾನದಿಂದ ಜಂಪ್ ಮಾಡಿ ಪ್ಯಾರಾಚ್ಯೂಟ್ ಸಹಾಯದಿಂದ ಇಳಿಯುವುದು) ಮಾಡುವಾಗ ಆಗುವ ಅನುಭವವಂತೂ ಬಣ್ಣಿಸಲಸದಳ. " ನಾನ್ ಜಂಪ್ ಮಾಡೀನಿ ಸರಿ, ಪ್ಯಾರಾಚ್ಯೂಟ್ ಓಪನ್ ಆಗಿಲ್ಲ ಅಂದ್ರ? ಹ್ಯಂಗ? ನಾವು ಮಾಡಿದ ಪಾಪ, ಪುಣ್ಯ ಎಲ್ಲ ನಮ್ ಕಣ್ ಮುಂದ ಬರಕ್ ಸ್ಟಾರ್ಟ್ ಆಗತ್ತ" ಎನ್ನುತ್ತಾರೆ ಕೆಂಚಪ್ಪನವರು. ಹೀಗಾಗಿ SFO ಗಳು ಯಾವಾಗಲೂ ಜೀವನದಲ್ಲಿ ಏನನ್ನೂ ಉಳಿಕೆಯಾಗಿ ಇಟ್ಟುಕೊಂಡಿರಬಾರದು. ಕುಟುಂಬದೊಡನೆ ಇರಲು ಸಮಯ ಸಿಕ್ಕಾಗ, ಖುಷಿಯಾಗಿದ್ದು ಎಲ್ಲರನ್ನೂ ಖುಷಿಯಾಗಿರಿಸಬೇಕು, ಎಲ್ಲವನ್ನೂ ಎಂಜಾಯ್ ಮಾಡಬೇಕು, ಆದಷ್ಟೂ ಯಾರ ಮನಸನ್ನೂ ನೋಯಿಸದೇ ಇರಲು ಪ್ರಯತ್ನಿಸಬೇಕು, ಇನ್ನೊಮ್ಮೆ ಮಾಡುವೆ, ಮತ್ತಿನ್ಯಾವಗಲೋ ಹೋಗುವೆ ಮುಂತಾದ ಮುಂದೂಡಿಕೆಯನ್ನು ಇಟ್ಟುಕೊಳ್ಳಬಾರದು ಎಂಬುದು ಕೆಂಚಪ್ಪನವರ ಅಭಿಪ್ರಾಯ.
     ಇನ್ನು ಎರಡು ವರ್ಷಗಳಲ್ಲಿ ವಾಯುಸೇನೆಯಿಂದ ನಿವೃತ್ತಿ ಹೊಂದಲಿದ್ದಾರೆ. ವಾಯುಸೇನೆ ತನಗೆ ಬದುಕನ್ನು ಕೊಟ್ಟಿದೆ, ಭಾರತದ ಹಲವು ಜಾಗಗಳನ್ನು ನೋಡುವ ಅವಕಾಶ ಕೊಟ್ಟಿದೆ, ಬೆಳಗಾವಿಯ ಹಳ್ಳಿಯೊಂದರಲ್ಲಿದ್ದ ತಾನು ಡೆಲ್ಲಿಯಂತಹ ಬಹುದೊಡ್ಡ ನಗರವನ್ನು ಕಾಣಲು ಸಾಧ್ಯವಾಯಿತು, ಕೈಲಾಸ, ಮಾನಸ ಸರೋವರ, ಓಮ್ ಪರ್ವತ, ಕೇದಾರನಾಥದಂತಹ ಸ್ವರ್ಗ ಸದೃಶ ಜಾಗಗಳನ್ನು ನೋಡುವಂತಾಯಿತು. ಹಿಮಾಲಯದ ಗುಡ್ಡಗಳಲ್ಲಿ ಭಾರತದ ಗಡಿಯನ್ನು ಕಾಣಲು ಸಾಧ್ಯವಾಯಿತು, ಹೆಚ್ಚು ಕಮ್ಮಿ ಭಾರತದಾದ್ಯಂತ ಸಂಚರಿಸಲು ಕಾರಣವಾದದ್ದು ಏರ್‌ಫೋರ್ಸ್. ವೃತ್ತಿ ಜೀವನದಲ್ಲಿ ದೇಶದ ಬೇರೆ ಬೇರೆ ಜಾಗಗಳ ಜನರ ಪರಿಚಯವಾಯಿತು, ಇವರಲ್ಲಿ ಹಲವರು ಒಳ್ಳೊಳ್ಳೆ ಗೆಳೆಯರೂ ಆದರು, ಇವರೆಲ್ಲರನ್ನು ತನಗೆ ಕೊಟ್ಟಿದ್ದು ಏರ್‌ಫೋರ್ಸ್, ಇದರ ಜೊತೆಗೆ ಆರ್ಥಿಕವಾಗಿ ತನಗೆ ಬೆನ್ನೆಲುಬಾಗಿ ನಿಂತು ಆಶ್ರಯವನ್ನೂ ನೀಡಿದೆ ಎಂಬ ಧನ್ಯತಾ ಭಾವ ಕೆಂಚಪ್ಪನವರಲ್ಲಿದೆ.

ಗರುಡ್ ಕಮಾಂಡೋ ಸಾರ್ಜೆಂಟ್ ಕೆಂಚಪ್ಪ ಭಂಗಿ

ನಿವೃತ್ತಿಯ ನಂತರ

   ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು, ನೋವುಗಳನ್ನು, ದುಃಖಗಳನ್ನು ಅನುಭವಿಸಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಒಂದು ಕತ್ತಲಿನ ನಂತರ ಒಂದು ಬೆಳಕಿದೆ ಅನ್ನುವುದು ಅಕ್ಷರಶಃ ಸತ್ಯ. ಕೆಂಚಪ್ಪನವರ ಬದುಕಲ್ಲಿ ಬೆಳಕಾಗಿದೆ. ಕೆಂಚಪ್ಪನವರಿಗೆ ಬೆಳಗಾವಿಯಲ್ಲಿ ಸ್ವಂತ ಜಮೀನಿದೆ, ಅಪ್ಪನ ಆಸ್ತಿಯಲ್ಲೂ ಒಂದುವರೆ ಎಕರೆ ಜಾಗ ಸಿಕ್ಕಿದೆ. ಜೊತೆಗೆ ತಾವೂ ಕೂಡಾ ಸೈಟ್ ಖರೀದಿಸಿಕೊಂಡಿದ್ದಾರೆ. ಅಂದು ಕೆಂಚಪ್ಪನವರಿಗೆ ಬೆನ್ನೆಲುಬಾಗಿ ನಿಂತ ಅವರ ಚಿಕ್ಕ ಸೋದರಮಾವ ಹಾಗೂ ಅವರ ಕುಟುಂಬವನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಹೆಗಲಮೇಲಿದೆ. ಚಿಕ್ಕ ಸೋದರ ಮಾವನಿಗೆ ಮೂರು ಜನ ಮಕ್ಕಳು. ಅವರ ಮಗನನ್ನು ಕೆಂಚಪ್ಪನವರು ಓದಿಸುತ್ತಿದ್ದಾರೆ, ದೊಡ್ಡ ಮಗಳಿಗೆ ಮದುವೆ ಮಾಡಿಸಿದ್ದಾರೆ, ಚಿಕ್ಕವಳನ್ನೂ ಓದಿಸುತ್ತಿದ್ದಾರೆ. ಇನ್ನೆರಡು ವರ್ಷಗಳಲ್ಲಿ ವಾಯುಸೇನೆಯ ಸ್ಪೆಷಲ್ ಫೋರ್ಸ್ ಕಮಾಂಡೋ ಆಗಿ ಇವರ ಸೇವೆ ಇಪ್ಪತ್ತು ವರ್ಷಗಳನ್ನು ಪೂರೈಸುತ್ತದೆ. ಇಪ್ಪತ್ತು ವರುಷಗಳ ನಂತರವೂ ಸೇನೆಯಲ್ಲಿ ಮುಂದುವರಿಯಲು ಕಷ್ಟ ಎಂಬುದು ಕೆಂಚಪ್ಪನವರ ಯೋಚನೆ, ಇಷ್ಟು ವರುಷ ದೇಶಕ್ಕಾಗಿ ದುಡಿದ ದೇಹವು, ವಯಸ್ಸಾದಂತೆ ಹೇಳಿದ ಹಾಗೆ ಕೇಳುವುದಿಲ್ಲ. ಹೀಗಾಗಿ ನಿವೃತ್ತಿ ಪಡೆದು ತಮ್ಮ ಊರಿನಲ್ಲಿ ಶಾಲೆ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡಬೇಕು, ಶಿಕ್ಷಣಕ್ಕಾಗಿ ತಾವು ಕಷ್ಟ ಪಟ್ಟಂತೆ ತಮ್ಮೂರಿನ ಹಾಗೂ ಗ್ರಾಮೀಣ ಪ್ರದೇಶದ  ಮಕ್ಕಳ್ಯಾರೂ ಕಷ್ಟಪಡಬಾರದು, ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಬೇಕು ಎಂಬುದು ಕೆಂಚಪ್ಪನವರ ಉದ್ದೇಶ.

   ಯಾರು ಜೀವನದಲ್ಲಿ ನೋವು, ದುಖಃ, ಕಷ್ಟ ಮೊದಲಾದ ಈ ಕ್ಯಾಟಗರಿಗೆ ಸೇರಿದ ಪರಿಸ್ಥಿತಿಗಳನ್ನು ಅನುಭವಿಸಿರುತ್ತಾರೋ ಅಂತಹವರು ಸದಾ ಬೇರೆಯವರ ನೋವುಗಳಿಗೆ ಸ್ಪಂದಿಸುತ್ತಾರೆ ಅನ್ನುವುದಕ್ಕೆ ಕೆಂಚಪ್ಪನವರೇ ಸಾಕ್ಷಿ. ಕೆಲವು ಸಿನಿಮಾಗಳಲ್ಲಿ ತೋರಿಸುವಂತೆ ಮಿಲಿಟರಿಯವರು ಅಥವಾ ಕಮಾಂಡೋಗಳು ಎಂದರೆ ವೈಯಕ್ತಿಕ ಜೀವನದಲ್ಲೂ ಮೀಸೆಯಲ್ಲಿ ಗತ್ತು ಇಟ್ಟುಕೊಂಡು, ಸದಾ ಮುಖ ಗಂಟು ಹಾಕಿಕೊಂಡು, ತಾನು ಶಿಸ್ತಿನ ಮನುಷ್ಯ, ಮಿಲಿಟರಿ ಮ್ಯಾನ್ ಎಂದು ತೋರಿಸಿಕೊಳ್ಳುವ ಹೆಚ್ಚುತನ ಖಂಡಿತಾ ಇರುವುದಿಲ್ಲ. ಪರಿಚಯದವರು ಯಾರು ಎಲ್ಲೇ ಸಿಕ್ಕರೂ ತಲೆ ಬಾಗಿ ಎರಡು ಕೈಗಳನ್ನು ಮುಗಿದು ಚಂದದ ನಗುವಿನೊಂದಿಗೆ ನಮಸ್ಕಾರ ಮಾಡುವ ಸಂಸ್ಕಾರ ಕೆಂಚಪ್ಪನವರದ್ದು.  ಗತ್ತು, ಜಂಭ, ತಾನೇ ದೊಡ್ಡವನು ಎಂಬ ಭಾವಗಳ ಲವ ಲೇಶವೂ ಕೆಂಚಪ್ಪನವರಲ್ಲಿ ಕಾಣಸಿಗದು. ಭೂಮಿ ತನಕ ಬಾಗುವ ವ್ಯಕ್ತಿತ್ವ ಕೆಂಚಪ್ಪನವರದ್ದು. ಸ್ಪಷ್ಟವಾಗಿ ಇವರ ವ್ಯಕ್ತಿತ್ವದ ಚಿತ್ರಣ ಕೊಡಬೇಕಾದರೆ 'ಸಿರಿವಂತ' ಸಿನಿಮಾದ 'ವಿಷ್ಣುವರ್ಧನ್' ಅವರ ಪಾತ್ರದ ರೀತಿಯಲ್ಲೇ ಬದುಕುತ್ತಿರುವವರು ಕೆಂಚಪ್ಪನವರು. ಇವರ ಪತ್ನಿ ಅಂಜನಾ ಮೇಡಂ ಕೂಡಾ ಅಷ್ಟೇ ಸಂಸ್ಕಾರವಂತರು. ಬಹಳ ಮುಗ್ದರು. ಅವರವರ ಗಂಡಂದಿರ ರ್‍ಯಾಂಕ್, ಸ್ಥಾನ, ಸಿರಿವಂತಿಕೆ, ಪ್ರತಿಷ್ಟೆಗಳನ್ನು ಉಳಿದವರ ಮಧ್ಯೆ ತೋರಿಸಿಕೊಳ್ಳುತ್ತಾ, ಬೀಗುತ್ತಾ ಬದುಕುವವರ ಮಧ್ಯ ಅಂಜನಾ ದೇವಿಯವರದ್ದು ಅಪರೂಪದ ವ್ಯಕ್ತಿತ್ವ. ಮದುವೆಯಾದ ನಂತರ ಕೆಂಚಪ್ಪನವರಿಗೆ ಎಲ್ಲೆಲ್ಲಿ ಪೋಸ್ಟಿಂಗ್ ಇತ್ತೋ ಅಲ್ಲೆಲ್ಲಾ ಅಂಜನಾ ಅವರೂ ಹೋಗುತ್ತಾರೆ. ಕೆಂಚಪ್ಪನವರಿಗೆ ಮಧ್ಯ ರಾತ್ರಿ ಫೋನ್ ಕಾಲ್ ಬಂದರೂ ಎದ್ದು ಹೋಗಲೇ ಬೇಕು. ಆಗೆಲ್ಲ ಅಂಜನಾ ಅವರೂ ಎದ್ದು ಅವರಿಗೆ ಬೇಕಾದ್ದದ್ದನ್ನು ತಯಾರಿಸಿಕೊಡಬೇಕು. ಜೊತೆಗಿರುವ ಇಬ್ಬರು ಪುಟ್ಟ ಪುಟ್ಟ ಮಕ್ಕಳ ಪಾಲನೆ ಪೋಷಣೆ ಸಣ್ಣ ವಿಚಾರವಲ್ಲ.  ತಾಯಿ ಮಕ್ಕಳು ಯಾವುದೇ ಟ್ರೈನಿಂಗ್ ಇಲ್ಲದೆಯೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಕಾಶ್ಮೀರದ ಚಳಿಯನ್ನೂ ಭಯವನ್ನೂ ಸಹಿಸಿಕೊಳ್ಳಬೇಕು. ರಾಜಸ್ಥಾನದ ಸೆಖೆಯನ್ನು ಅನುಭವಿಸಬೇಕು, ರಾಜ್ಮಾ ಚಾವಲ್ ತಿನ್ನಲೂ ಕಲಿಯಬೇಕು. ಜೋಳದ ರೊಟ್ಟಿ ಮಾಡಲು ಜೋಳದ ಹಿಟ್ಟು, ಹುಚ್ಚೆಳ್ ಚಟ್ನಿಗೆ ಎಳ್ಳು ಅಲ್ಲೆಲ್ಲಾ ಸಿಗಲಾರದು. ಹುಟ್ಟಿದಲ್ಲಿನಿಂದ ಬೆಳಗಾವಿಯನ್ನೂ ಕಾಣದ ಅಂಜನಾ ಮೇಡಂ ಬೆಳ್ಳಗಿನ ಕಾಶ್ಮೀರದಲ್ಲಿ ಅಲ್ಲಿನ ಆಹಾರ ವ್ಯವಹಾರಗಳ ಜೊತೆ ಬದುಕಲು ಕಲಿಯಬೇಕು. ಕೆಂಚಪ್ಪನವರು ಡ್ಯೂಟಿ ಮುಗಿಸಿ ಬರುವ ತನಕ ಕಾಯುತ್ತಾ ಕೂರಬೇಕು. ಅಲ್ಲಿನ ಜನರ ವರ್ತನೆ ಭಾಷೆ ಅರಿಯಬೇಕು ತಿಳಿಯಬೇಕು. ಗಂಡ ಎರಡೆರಡು ಮೂರುಮೂರು ತಿಂಗಳು ಟಿ.ಡಿ (Temparory Duty)ಗೆ ಹೋದರೆ ಒಬ್ಬಳೇ ಮಕ್ಕಳನ್ನು ಮನೆಯನ್ನೂ ಸಂಭಾಳಿಸಬೇಕು. ಆರೋಗ್ಯ ಹಾಳಾದರೆ ಬೇಕಾದ ವ್ಯವಸ್ಥೆ ತಾನೇ ಮಾಡಿಕೊಳ್ಳಬೇಕು. ನಲ್ಲಿಯಲ್ಲಿ ನೀರು ಬರುವುದು ನಿಂತರೆ, ಕುಡಿಯುವ ನೀರು ಖಾಲಿ ಆದರೆ ಜೊತೆಗಿರುವ ಮಕ್ಕಳನ್ನೂ ಎತ್ತಿಕೊಂಡು ಎಲ್ಲದಕ್ಕೂ ತಾನೇ ಓಡಾಡಬೇಕು, ಅರ್ದ ಮರ್ದ ಬರುವ ಹಿಂದಿಯಲ್ಲಿ ಉದರ ನಿಮಿತ್ತ ಎಲ್ಲವನ್ನೂ ಒದರಬೇಕು.  ವಾಸಿಸಲು ಬಂಗಲೆಗಳನ್ನು, ಆಳು ಕಾಳುಗಳನ್ನು ಕೊಟ್ಟಿರುವುದಿಲ್ಲ. ಸರ್ವಿಸ್ ಕ್ವಾರ್ಟರ್ಸ್‌ಗಳು ಹೆಚ್ಚಿನ ಕಡೆಗಳಲ್ಲೂ ಅಲ್ಲಿ ಇಲ್ಲಿ ಸೋರುತ್ತಾ ಸುರಿಯುತ್ತಾ, ಟಾಯಿಲೆಟ್ ಬಾತ್ರೂಮ್‌ಗಳೆಲ್ಲಾ ಬ್ಲಾಕ್ ಆಗುತ್ತಾ, ಹರಪ್ಪಾ ಮೊಹೆಂಜೊದಾರುಗಳ ಅವಶೇಷಗಳಿಗಿಂತಲೂ ಹಿಂದಿನವು ಅನ್ನುವ ರೀತಿಯಲ್ಲಿ ಇರುತ್ತವೆ. ಅಂತಹ ಕ್ವಾರ್ಟರ್‌ಗಳನ್ನು ಗುಡಿಸಿ ವರೆಸಿ ಒಪ್ಪ ಓರಣ ಮಾಡುವುದು ಪ್ರತಿ ಸೈನಿಕನ ಹೆಂಡತಿಗೂ ಸಿಗುವ ಅತಿ ದೊಡ್ಡ ಟಾಸ್ಕ್‌ಗಳಲ್ಲಿ ಒಂದು. ಇಂತಹ ಕ್ವಾಟರ್‌ಗಳ ಒಳಗೆ 'ಸಾಪ್' (ಹಾವು) ಹೊಕ್ಕರೆ ಸ್ವೀಪ್ ಮಾಡಿ 'ಸಾಫ್' (ಸ್ವಚ್ಚ) ಮಾಡಿ ಕುಟುಂಬವನ್ನು ಸೇಫ್ ಮಾಡಬೇಕು, ಎಲ್ಲವನ್ನೂ ಧೈರ್ಯದಿಂದ ಎದುರಿಸಬೇಕು. ಹೀಗೆ ಇಂತಹ ಸಮಸ್ಯೆಗಳ ಪಟ್ಟಿ ಅನಂತ. ಇನ್ನು ಪತಿ ದೇವರು ಪಿ.ಜೆ.ಐ(ಪ್ಯಾರಾ ಜಂಪ್ ಇನ್ಸ್ಟ್ರಕ್ಟರ್) ಸ್ಪೆಶಲ್ ಫೋರ್ಸ್‌ನಲ್ಲಿಯೋ ಇದ್ದರೆ ಪ್ರತಿದಿನ ಪತಿಗಾಗಿ ಪ್ರಾರ್ಥನೆ ಮಾಡಲೇ ಬೇಕು. ಡ್ಯೂಟಿಗೆ ಸಂಬಂಧಿಸಿದ ಹೆಚ್ಚಿನ ಯಾವ ವಿಚಾರಗಳೂ ಅಂಜನಾಮೇಡಂ ಗೆ ತಿಳಿಯುತ್ತಿರಲಿಲ್ಲವಾದರೂ, ಕೆಂಚಪ್ಪನವರಿಗೆ ಕಾಲಿಗೆ ಏಟಾದಾಗ ಅಥವಾ ಇನ್ನಿತರ ಗಾಯಗಳನ್ನು, ನೋವುಗಳನ್ನು ನೋಡಿದಾಗ ಖಂಡಿತಾ ಆತಂಕವಾಗೇ ಆಗುತ್ತದೆ. ಕೆಂಚಪ್ಪನವರ ತಾಯಿಗೆ ಈ ಯಾವುದೇ ವಿಚಾರಗಳೂ ತಿಳಿದಿಲ್ಲ, ಕೇವಲ "ನನ್ ಮಗ ನೌಕ್ರಿ ಮಾಡಕತ್ಯಾನ" ಅಂತಷ್ಟೇ ಆ ಅಮ್ಮನ ತಲೆಯಲ್ಲಿದೆ. ತನ್ನ ಮಗ ಎಂತಹ ಅಪಾಯಕಾರಿ ಕೆಲಸಗಳನ್ನು ಮಾಡುತ್ತಿದ್ದಾನೆ ಎಂಬುದು ತಾಯಿಗೆ ತಿಳಿದಿಲ್ಲ. ಇದನ್ನೆಲ್ಲಾ ತಿಳಿಸದೇ ಇರುವುದೂ ಒಳ್ಳೆಯದೆ. "ಎಸ್.ಎಫ಼್.ಒ ಗಳಿಗೆ ತಮ್ಮ ಕರ್ತವ್ಯಗಳ ಜೊತೆ ಕುಟುಂಬವನ್ನೂ ನಿಭಾಯಿಸುವುದು ಬಹಳ ಕಷ್ಟ. ಇಂತಹ ಸಮಯದಲ್ಲಿ ತನ್ನ ಪತ್ನಿ ಧೈರ್ಯವಂತಳಾಗಿದ್ದರಿಂದ ಎಲ್ಲವನ್ನೂ ಎದುರಿಸಲು ಸಾಧ್ಯವಾಯಿತು, ಇಬ್ಬರು ಮಕ್ಕಳಿಗೆ ಕೇವಲ ಒಂದೂವರೆ ವರ್ಷ ಅಂತರ, ಹೀಗಾಗಿ ಚಿಕ್ಕ ಚಿಕ್ಕ ಇಬ್ಬರು ಮಕ್ಕಳನ್ನೂ ಜೋಪಾನ ಮಾಡಬೇಕು, ಅವರಿಬ್ಬರನ್ನೂ ಜೊತೆಯಲ್ಲಿಟ್ಟುಕೊಂಡು ಯವ್ಯಾವುದೋ ಊರಲ್ಲಿ ಅದೆಷ್ಟೋ ಬಾರಿ ಒಬ್ಬಳೇ ಹೇಗೇಗೋ ಜೀವನ ಕಳೆದವಳು ನನ್ನಾಕೆ, ಅವಂತಿಪುರದಲ್ಲಂತೂ ತಿಂಗಳು ಗಟ್ಟಲೆ ಟಿ.ಡಿ ಹೋಗುತ್ತಿದ್ದೆ, Soldier’s wife always a half soldier ಎಂದು ಇದಕ್ಕೇ ಹೇಳುತ್ತಾರೆ, brave man ಸಿಗುವುದು  brave womanಗೆ ಮಾತ್ರ ಎಂಬ ನಾಣ್ನುಡಿ ಇದೆ, ತನ್ನದೇ ರೀತಿಯಲ್ಲಿ ಜೀವನದಲ್ಲಿ ಹೋರಾಟ ನಡೆಸಿದ್ದಾಳೆ ನನ್ ಹೆಂಡ್ತಿ" ಎಂಬುದು ಕೆಂಚಪ್ಪನವರ ಮನದಾಳದ ಮಾತು. 

     ಗರುಡ ಹಾರಿದ ಹಾದಿ ಸುಲಭದ್ದಾಗಿರಲಿಲ್ಲ, ಪಟ್ಟ ಶ್ರಮ ಅಲ್ಪ ಸ್ವಲ್ಪವಲ್ಲ. ಆ ಶ್ರಮ ದೇಶಕ್ಕಾಗಿ, ಎಲ್ಲರ ಹಿತಕ್ಕಾಗಿ ಆಗಿತ್ತು. ಅಂತಹ ಗರುಡ್ ಕಮಾಂಡೋ ಕೆಂಚಪ್ಪನವರಿಗೆ ಹಾಗೂ ಅವರ ಕುಟುಂಬಕ್ಕೆ ಒಳ್ಳೆಯದಾಗಲಿ, ಇನ್ನೆರಡು ವರುಷಗಳ ಸರ್ವಿಸ್‌ನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗಲಿ. ಅವರ ಕನಸುಗಳೆಲ್ಲವೂ ನನಸಾಗಿ ಬಾಳು ಬಂಗಾರವಾಗಲಿ.

 

                                                                                                - ದುರ್ಗಾಕಾವೇರಿ ಹೊಸಮನೆ



Comments

  1. ಇದು ನನ್ನ ಸೌಭಾಗ್ಯ, ನಿಮ್ಮಂತಹ ಅಪರೂಪದ ವ್ಯಕ್ತಿತ್ವದ ದಂಪತಿಗಳ ಪರಿಚಯವಾಗಿ ನನ್ನ ಜೀವನದ ಕಥೆಗೆ ಮರುಜೀವ ತುಂಬಿ ಅಮರತೆಯನ್ನು ನೀಡಿದ್ದಕ್ಕೆ 🙏😍ತುಂಬು ಹೃದಯದ ಧನ್ಯವಾದಗಳು 🥰🫡

    ReplyDelete
  2. ದೇಶ ಕಾಯೋ ಸೈನಿಕನನ್ನು ನೋಡಲು ಎಷ್ಟು ಸುಂದರವೂ ಅಷ್ಟೆ ಅವರ ಜೀವನ ಚರಿತ್ರೆ ಕಷ್ಟದಲಿರುತ್ತೆ ಎನ್ನುವದು. ನನ್ನ ಸಹಪಾಠಿ ಆದ ಕೆಂಚಪ್ಪ ಭಂಗಿಯವರ ಜೀವನ ಚರಿತ್ರೆ "ಗರುಡ ಹಾರಿದ ದಾರಿ" ಇದರಿಂದ ತಿಳಿಯಬಹುದು.

    ReplyDelete
  3. Great story of our beloved brother ಕೆಂಚಪ್ಪ sir

    ReplyDelete
  4. Super writing. hats off to kenchappa sir

    ReplyDelete
  5. ದೇಶ ಕಾಯೋ ಸೈನಿಕರು ಚಳಿ ಅನ್ನದೆ ಬಿಸಿಲೆನ್ನದೆ ಬಂದು ಬಾಂಧವ್ಯ ರೆನ್ನದೆ
    ಸೈನಿಕರ ನಿಜವಾದ ಕಷ್ಟವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 💐💐 ಮಾಮಾ

    ReplyDelete
  6. Super sir writing✍️ 🙏

    ReplyDelete
  7. ಆ ಭಾರತಾಂಬೆ ಮತ್ತೆ ಭುವನೇಶ್ವರಿ ಯಾವಾಗಲು ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ ಎಂದು ಬೇಡಿಕೊಳ್ಳುವೆನು..

    ReplyDelete

Post a Comment

thank you...

Popular posts from this blog

ಗರುಡ ಹಾರಿದ ಹಾದಿ :ಭಾಗ-1

ಅ-ಬಲೆ; ಅಕ್ಷರಗಳಿಂದ ಹೆಣೆಯಲ್ಪಟ್ಟ ಬಲೆ